Kundapra.com ಕುಂದಾಪ್ರ ಡಾಟ್ ಕಾಂ

ಜೂನ್ 10: ಬೆಂಗಳೂರು ಕಲಾಕ್ಷೇತ್ರದಲ್ಲಿ ಪೌರಾಣಿಕ ಯಕ್ಷ ಸಂಕ್ರಾಂತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಮೇ ತಿಂಗಳು ಮುಗಿಯುತ್ತಿದಂತೆ ಯಕ್ಷಗಾನ ಮೇಳಗಳಿಗೆ ಒಂದು ವಿರಾಮ. ಗೆಜ್ಜೆಗಳನ್ನೆಲ್ಲ ಕಟ್ಟಿ ಪೆಟ್ಟಿಗೆಯಲಿಟ್ಟು ಅಟ್ಟ ಸೇರಿಸಿಬಿಡುತ್ತವೆ. ಸತತ ಆರು ತಿಂಗಳಿಂದ ದುಡಿದು ದಣಿದ ದೇಹಕ್ಕೆ ವಿಶ್ರಾಂತಿ. ಜೂನ್ ಆರಂಭ ಕೆಲವರು ತಮ್ಮಲ್ಲಿಯೆ ಒಂದು ತಂಡಕಟ್ಟಿಕೊಂಡು ಮುಂಬೈ, ಬೆಂಗಳೂರು, ಹೈದರಾಬಾದ್ ನಂತಹ ಕರಾವಳಿಯ ಜನರು ಹೆಚ್ಚು ಇರುವ ಕಡೆ ಪ್ರದರ್ಶನ ನೀಡುತ್ತಾರೆ. ಅಲ್ಲಿ ವೃತ್ತಿಜೀವನದ ಒತ್ತಡದೊಂದಿಗೆ ತಮ್ಮ ಇಷ್ಟದ ಯಕ್ಷಗಾನವನ್ನು ನೋಡುವಲ್ಲಿ ಬಹುತೇಕ ಕರಾವಳಿಗರು ಹಾತೊರೆಯುತ್ತಾರೆ. ಪೌರಾಣಿಕ, ಸಾಮಾಜಿಕ ಎರಡು ರೀತಿಯ ಪ್ರಸಂಗಗಳನ್ನು ಜನರು ಇಷ್ಟಪಡುತ್ತಾರೆ.

ಈ ಬಾರಿ ಮೇ ತಿಂಗಳ ಕೊನೆಯಿಂದಲೇ ಕಲಾಕ್ಷೇತ್ರದಲ್ಲಿ ಚಂಡೆ ಮದ್ದಳೆಯ ಕಲರವ ಸದ್ದು ಪ್ರಾರಂಭವಾಗಿದೆ. ಇದೇ ಶನಿವಾರ ಜೂನ್ 10 ರಂದು ರಾತ್ರಿ ಪೌರಾಣಿಕ ಪ್ರೀಯರ ನೆಚ್ಚಿನ ಅದ್ದೂರಿ ತ್ರಿವಳಿ ಅಖ್ಯಾನಗಳ “ಯಕ್ಷ ಸಂಕ್ರಾಂತಿ”ಗೆ ಕಲಾಕ್ಷೇತ್ರ ಅಣಿಯಾಗುತ್ತಿದೆ .

ಕಲಾಧರ ಬಳಗ ಜಲವಳ್ಳಿ ಮತ್ತು ಅತಿಥಿ ದಿಗ್ಗಜರ ಸಮಾಗಮದಲ್ಲಿ ನಾಗರಾಜ್ ಶೆಟ್ಟಿ ನೈಕಂಬ್ಳಿ ಸಂಯೋಜನೆಯಲ್ಲಿ “ರಾಮ ನಿರ್ಯಾಣ – ರಾಜಾ ವಿಕ್ರಮ – ರಾಮಬಂಟ ಜಾಂಬವ” ಆಖ್ಯಾನಗಳು ಯಕ್ಷ ಪ್ರೇಮಿಗಳನ್ನು ರಂಜಿಸಲಿವೆ.

ಕೊಳಗಿ ಕೇಶವ ಹೆಗಡೆ ಗಾನ ಸಾರಥ್ಯದಲ್ಲಿ ಅಪರೂಪದ ಅಖ್ಯಾನ ನಿರ್ಯಾಣದ ರಾಮನಾಗಿ ಕೃಷ್ಣಯಾಜಿ ಬಳ್ಕೂರು, ದೂರ್ವಾಸ ವಾಸುದೇವ ಸಾಮಗರು, ಪ್ರದೀಪ ಸಾಮಗರ ಲಕ್ಷ್ಮಣ, ಸುರೇಶ ಶೆಟ್ಟಿ, ಪ್ರಸನ್ನ ಭಟ್ ಭಾಳ್ಕಲ್ ಮತ್ತು ನಾಗರಕೊಡಿಗೆ ನಾಗೇಶ ಕುಲಾಲ್ ದಿನೇಶ ಶೆಟ್ಟಿ ದ್ವಂದ್ವ ಭಾಗವತಿಕೆಯಲ್ಲಿ ಎರಡು ಪ್ರಸಂಗಗಳ ಪ್ರಸ್ತುತಿ. ಜಲವಳ್ಳಿ ವಿಧ್ಯಾಧರ್ ರಾವ್ ವಿಕ್ರಮ, ಐರಬೈಲ್ ಆನಂದ ಶೆಟ್ಟಿ ಶನೀಶ್ವರ, ಅಲೋಲಿಕೆ ಸುಬ್ರಮಣ್ಯ ಹೆಗಡೆ ಯಲಗುಪ್ಪ, ಜಾಂಬವ ಸುಬ್ರಮಣ್ಯ ಚಿಟ್ಟಾಣಿ ಕಾಣಿಸಿಕೊಳ್ಳಲಿದ್ದಾರೆ ಇನ್ನುಳಿದಂತೆ ಹಳ್ಳಾಡಿ ಜಯರಾಮ ಶೆಟ್ಟಿ, ಸೀತರಾಮ್ ಕುಮಾರ್ ಕಟೀಲು, ಚಪ್ಪರಮನೆ ಶ್ರೀಧರ ಹೆಗಡೆ , ಕಟ್ಟೆ ಈಶ್ವರ ಭಟ್, ಹೆನ್ನಾಬೈಲ್ ವಿಶ್ವನಾಥ, ಮಾಧವ ನಾಗುರ್, ಕಾರ್ತಿಕ ಚಿಟ್ಟಾಣಿ, ಕೆಸರಕೊಪ್ಪ, ಸುಧೀರ್ ಉಪ್ಪೂರ್, ರಾಜೆಂದ್ರ ಗಾಣಿಗ, ಇನ್ನಿತರು ರಂಗದಲ್ಲಿ ರಂಜಿಸಲಿದ್ದಾರೆ.

ಯಕ್ಷ ರಸದೌತಣ ಸವಿಯಲು ಪ್ರವೇಶ ದರ ಇರುತ್ತದೆ. ಮುಂಗಡ ಟಿಕೇಟ್ ಮತ್ತು ಹೆಚ್ಚಿನ ಮಾಹಿತಿಗೆ ಸಂಘಟಕ ನಾಗರಾಜ ಶೆಟ್ಟಿ ನೈಕಂಬ್ಳಿ 9741474255 ಸಂಪರ್ಕಿಸಬಹುದು.

Exit mobile version