Kundapra.com ಕುಂದಾಪ್ರ ಡಾಟ್ ಕಾಂ

ರಾಷ್ಟ್ರೀಯ ಹೆದ್ದಾರಿಯಲ್ಲಿಗುತ್ತಿರುವ ತೊಂದರೆಗೆ ಸಂಸದರ ನಿರ್ಲಕ್ಷ್ಯ ಕಾರಣ: ಗೋಪಾಲ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಲ್ಲೂರಿನಿಂದ ಶಿರೂರು ತನಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉಸ್ತುವಾರಿಯಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗಿ ಆಗುತ್ತಿರುವ ಅವಘಡಗಳು ಹಾಗೂ ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೀವ್ರ ಸ್ವರೂಪದ ತೊಂದರೆಗಳಿಗೆ ಈ ಭಾಗದ ಸಂಸದರ ನಿರ್ಲಕ್ಷವೇ ಕಾರಣ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಆರೋಪಿಸಿದ್ದಾರೆ.

ಬೈಂದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರದ ಚತುಷ್ಪಥ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಐಆರ್‌ಬಿ ಕಂಪೆನಿಯು ಕೆಲಸದ ಗುಣಮಟ್ಟ ಅಪೇಕ್ಷಿತ ಮಟ್ಟದಲ್ಲಿ ಇಲ್ಲ. ಸ್ಥಳೀಯರ ಅಗತ್ಯಕ್ಕೆ ತಕ್ಕಂತೆ ಯು ಟರ್ನ್, ಅಂಡರ್ ಪಾಸ್ ನಿರ್ಮಿಸುತ್ತಿಲ್ಲ. ಚರಂಡಿ ನಿರ್ಮಿಸದೇ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು, ಎಲ್ಲೆಂದರಲ್ಲಿ ಮಣ್ಣು ಸುರಿದಿರುವುದು ಮಳೆಗಾಲದಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಒತ್ತಿನೆಣೆ ಉಂಟಾಗಿರುವ ಗುಡ್ಡ ಕುಸಿತ ಮತ್ತು ಮಾರಸ್ವಾಮಿಯಲ್ಲಿ ಹಾಗೂ ಇತರೆಡೆಗಳಲ್ಲಾದ ರಸ್ತೆ ಜರಿತ ಗಂಭೀರ ಸ್ವರೂಪದ ಅಪಾಯ ಮತ್ತು ಆತಂಕ ಉಂಟುಮಾಡಿದೆ. ಮಳೆಗಾಲ ಅವಾಂತರದ ಬಗೆಗೆ ಹಲವು ಭಾರಿ ಎಚ್ಚರಿಸಿದ್ದರೂ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಲ್ಲ. ಇದು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಮತ್ತೆ ಮತ್ತೆ ಸಂಚಾರ ಸ್ಥಗಿತ್ಯಕ್ಕೆ ಕಾರಣವಾಗಿದೆ ಎಂದರು.

ಜನರ ಜೀವದೊಂದಿಗೆ ಚಲ್ಲಾಟವಾಡುತ್ತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಗಿ ಮೂರು ವರ್ಷ ಸಂದರೂ ಸಂಸದರು ಒಂದೇ ಒಂದು ಬಾರಿ ಈ ಭಾಗಕ್ಕೆ ಭೇಟಿ ನೀಡಿ ಅವಲೋಕಿಸಿಲ್ಲ, ಪ್ರಗತಿ ಪರಿಶೀಲನೆ ಮಾಡಿಲ್ಲ. ಲೋಪದೋಷಗಳಿಗೆ ಕಾರಣರಾಗಿರುವವರಿಗೆ ಬಿಸಿಮುಟ್ಟಿಸಿಲ್ಲ ಎಂದು ಕಿಡಿಕಾರಿದರು.

ಬೈಂದೂರು ಕ್ಷೇತ್ರದ ಕೆಲವರು ಮಾಧ್ಯಮಗಳಲ್ಲಿ ಹೆದ್ದಾರಿ ಅವ್ಯವಸ್ಥೆಗೆ ಶಾಸಕರು ಹೊಣೆ ಎಂದು ಸಾರ್ವಜನಿಕರಲ್ಲಿ ಉದ್ದೇಪೂರ್ವಕ ತಪ್ಪು ಅಭಿಪ್ರಾಯ ಮೂಡಿಸುತ್ತಿರುವುದು ಗಮನಕ್ಕೆ ಬಂದಿದೆ. ಯಾವ ಪ್ರಾಧಿಕಾರ ಯಾರ ಪರಿಮಿತಿಗೆ ಬರುತ್ತದೆಂಬ ಸಾಮಾನ್ಯ ಜ್ಞಾನವಿದ್ದವರು ಇಂತಹ ಹೇಳಿಕೆಗಳನ್ನು ನೀಡಲಾರರು ಎಂದು ಟೀಕಾಕಾರರ ಬಗೆಗೆ ವ್ಯಂಗ್ಯವಾಡಿದ ಶಾಸಕರು, ಯೋಜನೆ ನೇರವಾಗಿ ತಮಗೆ ಸಂಬಂಧಿಸಿರದಿದ್ದರೂ ಕ್ಷೇತ್ರದ ಜನರು ಅನುಭವಿಸುತ್ತಿರುವ ಸಂಕಷ್ಟವನ್ನು ಮನಗಂಡು ಗ್ರಾಮ ಪಂಚಾಯಿತಿವಾರು ಸಮಸ್ಯೆ ಅರಿಯುವ ಪ್ರಯತ್ನ ನಡಸಿದ್ದೇನೆ. ಎರಡು, ಮೂರು ಬಾರಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು, ಗುತ್ತಿಗೆದಾರ ಪ್ರತಿನಿಧಿಗಳನ್ನು, ಜಿಲ್ಲಾಡಳಿತದ ಪ್ರಮುಖರನ್ನು ಸೇರಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸೂಚನೆ ನೀಡಿದ್ದೇನೆ. ವತ್ತಿನಣೆಯಲ್ಲಿ ಗುಡ್ಡಕುಸಿತದಿಂದ ಉಂಟಾಗುತ್ತಿರುವ ಸಂಚಾರ ವ್ಯತ್ಯಯ ಮತ್ತು ಸಂಭಾವ್ಯ ಹಾನಿಗಳ ವಿರುದ್ಧ ಮುನ್ನೆಚ್ಚರಿಕೆ ಕ್ರಮ ವಹಿಸಲು ಕ್ರಮಕೈಗೊಂಡಿದ್ದೇನೆ. ಇದು ಎಲ್ಲರಿಗೂ ತಿಳಿದ ವಿಚಾರ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಶಾಸಕರ ನಿರ್ದೇಶನದಂತೆ ಯಡ್ತರೆಯ ಉಪ್ಪುನೀರಿನ ಆಗರವನ್ನು ಭರ್ತಿಮಾಡಲು ಒತ್ತಿನಣೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಮಣ್ಣು ತೆಗೆಯಲಾಗಿದೆ ಎಂದು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು, ಗುತ್ತಿಗೆದಾರರು ಒತ್ತಿನಣೆ ಗುಡ್ಡದಿಂದ ತೆಗೆದ ಅಗಾಧ ಪ್ರಮಾಣದ ಮಣ್ಣನ್ನು ವಿಲೇವಾರಿ ಮಾಡಲು ಸರಿಯಾದ ಸ್ಥಳ ಸಿಗದೆ ಪಡುವರಿ ಭಾಗದ ಹೆದ್ದಾರಿಯ ಬದಿಯಲ್ಲಿ ರಾಶಿಹಾಕಿದ್ದರು. ಅದು ಮಳೆಗಾಲದಲ್ಲಿ ಕೃಷಿಭೂಮಿಗಳಿಗೆ ನುಗ್ಗುವುದೆಂಬ ಕಾರಣಕ್ಕೆ, ಕೆಎಸ್‌ಆರ್‌ಟಿಸಿ ಡಿಪೋ ಮಾಡಲು ಉದ್ದೇಶಿಸಿರುವ ನಿರುಪಯುಕ್ತ ಆಗರಕ್ಕೂ ಸುರಿದಿದ್ದಾರೆ. ಅದರಲ್ಲಿ ನನ್ನ ಸ್ವಾರ್ಥವಿದೆ ಎಂದು ಆರೋಪಿಸುವವರಿಗೆ ಜಾಣ ಕುರುಡು ಎಂದು ಲೇವಡಿ ಮಾಡಿದರು. ಕುಂದಾಪ್ರ ಡಾಟ್ ಕಾಂ.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್‌ಕುಮಾರ್, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ಜಿ. ಗೋಕುಲ್ ಶೆಟ್ಟಿ, ಮಣಿಕಂಠ ಉಪಸ್ಥಿತರಿದ್ದರು.

Exit mobile version