Kundapra.com ಕುಂದಾಪ್ರ ಡಾಟ್ ಕಾಂ

ಶೈಕ್ಷಣಿಕ ಸಾಧನೆಗೆ ಪ್ರೋತ್ಸಾಹ, ಮಕ್ಕಳ ಮನೋಸ್ಥೈರ್ಯ ಹೆಚ್ಚಿಸುವ ಕೆಲಸವಾಗಬೇಕಿದೆ: ಎಸ್. ರಾಜು ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಕ್ಕಳು ಉತ್ತಮ ಫಲಿತಾಂಶ ಪಡೆಯಬೇಕಿದ್ದರೆ ಪೂರ್ವ ತಯಾರಿ ಅಗತ್ಯ. ಸಮಯದ ಸದ್ಬಳಕೆ, ಪೂರ್ಣ ಪ್ರಮಾಣದ ಓದಿನಲ್ಲಿ ತೊಡಗಿಕೊಳ್ಳುವ ಮನೋಭಾವ ನಮ್ಮಲ್ಲಿದ್ದರೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳನ್ನು ಅರಿಸಿ ಬರುತ್ತವೆ. ಉಪನ್ಯಾಸಕರು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಬಗೆಗೆ ಮುತುವರ್ಜಿ ವಹಿಸುವಂತೆಯೇ ಪೋಷಕರು ಮನೆಯಲ್ಲಿ ತಮ್ಮ ಮಕ್ಕಳು ಓದಿನ ಬಗೆಗೆ ಗಮನ ಹರಿಸುವುದು ಅತೀ ಅಗತ್ಯ ಎಂದು ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.

ಅವರು ಗುರುವಾರ ಇಲ್ಲಿನ ರೋಟರಿ ಭವನದಲ್ಲಿ ಜರುಗಿದ ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪೋಷಕರ ಸಭೆಯಲ್ಲಿ ಮಾತನಾಡುತ್ತಾ ಸರಕಾರಿ ಕಾಲೇಜಿನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಿ ಜಿಲ್ಲೆಯಲ್ಲಿಯೇ ಮಾದರಿ ಫಲಿತಾಂಶವನ್ನು ದಾಖಲಿಸಿದ್ದಾರೆ. ಇದರಲ್ಲಿ ಇಲ್ಲಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಶ್ರಮ ದೊಡ್ಡದಿದೆ. ಸರಕಾರಿ ಕಾಲೇಜೊಂದರ ಈ ಸಾಧನೆ ಶ್ಲಾಘನೀಯವಾದದ್ದು ಎಂದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವರೆಗಿನ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಒತ್ತಡಗಳು ಎದುರಾಗುತ್ತವೆ. ತನ್ನ ಮಗ-ಮಗಳು ಕಾಲೇಜಿನ ಹೋಗಿ ಬರುತ್ತಾರೆ ಎಂದು ತಿಳಿದರಷ್ಟೇ ಸಾಲದು. ಅವರ ಚಲನವಲನಗಳ ಬಗೆಗೂ ಪೋಷಕರಿಗೆ ಅರಿವಿರಬೇಕು. ಉತ್ತಮ ಅಂಕಗಳಿಸಿದ ಎಲ್ಲಾ ವಿದ್ಯಾರ್ಥಿಗಳು ಓದಿನಲ್ಲಿಯೂ ಒಂದು ಶಿಸ್ತು ಅಳವಡಿಸಿಕೊಂಡಿರುತ್ತಾರೆ. ಅದರಂತೆಯೇ ಬದುಕಿನ ರೀತಿಯನ್ನು ಓದಿಗೆ ಅನುಕೂಲವಾಗುವಂತೆ ಬದಲಿಸಿಕೊಂಡಿರುತ್ತಾರೆ. ಹಾಗಾಗಿ ಅವರಿಗೆ ಯಶಸ್ಸು ಕೂಡಲೇ ಒಲಿಯುತ್ತದೆ. ಅಂತಹ ಯಶಸ್ಸಿನತ್ತ ಹೆಜ್ಜೆಯಿಡುವಂತಾಗಬೇಕು ಎಂದರು.

ಶಿಕ್ಷಣದೊಂದಿಗೆ ಮಕ್ಕಳಿಗೆ ಮನೋಸ್ಥೈರ್ಯ ತುಂಬುವ ಕೆಲಸವಾಗಬೇಕು. ಪರೀಕ್ಷೆಯಲ್ಲಿ ಉತ್ತಿರ್ಣರಾಗುವ ಜೊತೆಗೆ ಜೀವನದ ಪರೀಕ್ಷೆಯಲ್ಲಿಯೂ ಅವರು ಪಾಸಾಗಬೇಕು. ಶಿಕ್ಷಣದ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಮಾಡುವ ಜವಾಬ್ದಾರಿಯೂ ನಮ್ಮೆಲ್ಲರ ಮೇಲಿದೆ. ನನ್ನ ಮಗುವಿನ ಭವಿಷ್ಯವನ್ನು ನಾನು ನಿರ್ಮಾಣ ಮಾಡುತ್ತೇನೆ. ನನ್ನ ಮಗುವನ್ನು ಸಮಾಜಕ್ಕೆ ಆಸ್ತಿಯಾಗಿ ನೀಡುತ್ತೇನೆ ಎಂಬ ಪ್ರತಿಜ್ಞೆಯನ್ನು ಇಂದಿನಿಂದಲೇ ಪೋಷಕರು ಮಾಡಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಪಾಲಾಕ್ಷಪ್ಪ ಅವರು ಮಾತನಾಡಿ, ಕಾಲೇಜಿನಲ್ಲಿ ಅತಿ ಹೆಚ್ಚು ವಿಧ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಹೊರತಾಗಿಯೂ, ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪೋಷಕರ ಪರಸ್ಪರ ಸಹಕಾರ ಮನೋಭಾವದಿಂದ ಉತ್ತಮ ಫಲಿತಾಂಶ ದಾಖಲಿಸಲು ಸಾಧ್ಯವಾಗಿದೆ. ತಾಲೂಕಿನ ಖಾಸಗಿ ಶಾಲೆಗಳಿಗಿಂತ ಹೆಚ್ಚು ಫಲಿತಾಂಶವನ್ನು ದಾಖಲಿಸಿರುವುದು ಹೆಮ್ಮೆಯ ಸಂಗತಿ. ಪ್ರತಿ ವಿದ್ಯಾರ್ಥಿಯೂ ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಬೇಕು ಎಂಬ ದೃಷ್ಠಿಯಿಂದ ಉಪನ್ಯಾಸಕರು ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ. ಅವರೊಂದಿಗೆ ಪೋಷಕರು ಸಹಕಾರಿಸಬೇಕು ಎಂದ ಅವರು ಈ ಭಾರಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಯುನಿಟ್ ಟೆಸ್ಟ್, ಪ್ರತಿ ಮಗುವಿನ ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಮನೆಯವರಿಗೆ ಕರೆ ಮಾಡಿ ತಿಳಿಸುವ ವ್ಯವಸ್ಥೆ ಹಾಗೂ ಜುಲೈ ತಿಂಗಳಿನಿಂದಲೇ ಸಿಇಟಿ ತರಗತಿಗಳನ್ನು ಆರಂಭಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ 2016-17ನೇ ಸಾಲಿನಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ನಾಗರಾಜ ಗಾಣಿಗ ಹಾಗೂ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

Exit mobile version