Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಗ್ರಾಮಸಭೆ: ಅಧಿಕಾರಿಗಳ ಗೈರು, ಪಿಡಿಓ ಧೋರಣೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ೨೦೧೭-೧೮ನೇ ಸಾಲಿನ ಪ್ರಥಮ ಗ್ರಾಮಸಭೆ ನಡೆಯಿತು.

ಸರಕಾರದ ಆದೇಶದಂತೆ ವರ್ಷಕ್ಕೆ ಎರಡು ಗ್ರಾಮಸಭೆಗಳಾಬೇಕು. ಆದರೆ ಬೈಂದೂರು ಗ್ರಾಪಂ ಮಾತ್ರ ಕಳೆದ ಮೂರು ವರ್ಷದಿಂದ ವರ್ಷಕ್ಕೊಂದು ಗ್ರಾಮಸಭೆ ಮಾಡಿ ಕೈತೊಳೆದುಕೊಳ್ಳುತ್ತಿದೆ ಎಂದು ಗ್ರಾಪಂ ಸದಸ್ಯರಾದ ವೆಂಕಟ ಪೂಜಾರಿ ಮತ್ತು ರಾಘವೇಂದ್ರ ಆರೋಪಿಸಿದರು. ಅದಕ್ಕೆ ಉತ್ತರಿಸಿದ ಪಿಡಿಒ ರೇಣುಕಾ ಹೆಗ್ಡೆ, ಕಳೆದ ಅಕ್ಟೋಬರ್‌ನಲ್ಲಿ ವಿಶೇಷ ಗ್ರಾಮಸಭೆ ನಡೆಸಿದ್ದನ್ನು ನೆನಪಿಸಿ ಪರಿಸ್ಥಿತಿ ತಿಳಿಗೊಳಿಸಿದರು

ಸಭೆಯಲ್ಲಿ ನೋಡೆಲ್ ಅಧಿಕಾರಿ ಹಾಗೂ ಗ್ರಾಮಮಟ್ಟದ ಕೆಲವು ಅಧಿಕಾರಿಗಳ ಗೈರು ಹಾಜರಿ ಗ್ರಾಮಸ್ಥರನ್ನು ಕೆರಳಿಸಿತು. ಪ್ರತಿಯೊಂದು ಗ್ರಾಮಸಭೆಯಲ್ಲಿ ಅಧಿಕಾರಿಗಳು ಭಾಗವಹಿಸುತ್ತಿಲ್ಲ. ಗ್ರಾಮಸಭೆಯಲ್ಲಿ ಕೈಗೊಂಡ ಯಾವುದೇ ನಿರ್ಣಯಗಳಿಗೆ ಬೆಲೆ ಇಲ್ಲ. ಗ್ರಾಮಸಭೆಯ ನಿರ್ಣಯಗಳ ಅನುಷ್ಠಾನ ಕೂಡ ನಡೆಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಂದಿನ ಗ್ರಾಮಸಭೆಯಲ್ಲಿ ಪ್ರಮುಖ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದು, ಗ್ರಾಮಸಭೆಯ ಉದ್ದೇಶ ಸಫಲವಾಗುತ್ತಿಲ್ಲ. ಹೀಗಾಗಿ ಇಂದಿನ ಗ್ರಾಮಸಭೆಯನ್ನು ರದ್ದುಪಡಿಸಿ ಗ್ರಾಮಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಸಮ್ಮುಖದಲ್ಲಿ ಮತ್ತೊಮ್ಮೆ ಗ್ರಾಮಸಭೆಯನ್ನು ನಡೆಸುವಂತೆ ಗ್ರಾಮಸ್ಥರು ಮತ್ತು ಗ್ರಾಪಂ ಸದಸ್ಯರು ಪಟ್ಟುಹಿಡಿದರು.

ಗ್ರಾಪಂ ಆಡಳಿತಾಧಿಕಾರಿ ಹಾಗೂ ಬಿಇಒ ಆರ್. ಓ. ಪ್ರಕಾಶ್, ಮಾರ್ಗದರ್ಶಿ ಅಧಿಕಾರಿ ಅನಾರೋಗ್ಯದ ಕಾರಣ ಸಭೆಗೆ ಬರಲಾಗುತ್ತಿಲ್ಲ ಎಂದು ಗ್ರಾಮಸ್ಥರನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಗದ್ದಲ ಕಡಿಮೆಯಾಗಿಲ್ಲ. ಈ ವಿಷಯ ತಿಳಿದು ಸಭೆಯ ಕೊನೆಯಲ್ಲಿ ಜ್ವರದಿಂದ ಬಳಲುತ್ತಿದ್ದ ಮಾರ್ಗದರ್ಶಿ ಅಧಿಕಾರಿ ಲಕ್ಷ್ಮೀನಾರಾಯಣ ಸಭೆಗೆ ಆಗಮಿಸಿದರು. ತಾಪಂ ಸದಸ್ಯೆ ಮಾಲಿನಿ ವೇದಿಕೆಯಲ್ಲಿದ್ದರು.

ಮಹಿಳಾ ಮತ್ತು ಶಿಶುಕಲ್ಯಾಣ ಇಲಾಖೆಯ ಅಧಿಕಾರಿಗಳ ಗೈರುಹಾಜರಿಯಿಂದ ಸಭೆಯಲ್ಲಿ ಇನ್ನೊಮ್ಮೆ ಕೋಲಾಹಲ ಸೃಷ್ಠಿಯಾಯಿತು. ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಸುಶೀಲಾ ಇಲಾಖೆಯ ಬಗ್ಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯ ಸದಾಶಿವ ಫಾರೆಸ್ಟರ್, ಕಂದಾಯ ಇಲಾಖೆಯಿಂದ ಗ್ರಾಮ ಕರಣಿಕ ಮಂಜುನಾಥ ಬಿಲ್ಲವ, ಆರೋಗ್ಯ ಸಹಾಯಕಿ ಶಾಂತಾ, ಪಶು ವೈದ್ಯಕೀಯ ಇಲಾಖೆಯ ಆರ್. ಆರ್. ಕುಲಕರ್ಣಿ, ಸಹಾಯಕ ತೋಟಗಾರಿಕಾ ಅಧಿಕಾರಿ ಅಜಿತ್ ಇವರು ಗ್ರಾಮಸ್ಥರಿಗೆ ತಮ್ಮ ಇಲಾಖಾ ಮಾಹಿತಿ ನೀಡಿದರು.

ಬೈಂದೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ವರ್ಗಾವಣೆಗೊಂಡಿದ್ದರೂ ಇನ್ನೂ ಇಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಕೆಲ ಗ್ರಾಮಸ್ಥರು ಆರೋಪಿಸಿದರು. ಪಿಡಿಒ ಕೆಲವು ವಿಚಾರಗಳಲ್ಲಿ ಏಕಪಕ್ಷೀಯ ನಿರ್ಣಯ ಕೈಗೊಂಡು ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರ ಸಲಹೆಗೆ ಮನ್ನಣೆ ನೀಡುತ್ತಿಲ್ಲ ಎಂದು ನೇರವಾಗಿ ತರಾಟೆಗೆ ತೆಗೆದುಕೊಂಡರು. ಗ್ರಾಮಸ್ಥರ ವಿವಿಧ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡದ ಹಿನ್ನೆಲೆಯಲ್ಲಿ ಅವರು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾದರು.

Exit mobile version