Kundapra.com ಕುಂದಾಪ್ರ ಡಾಟ್ ಕಾಂ

ಮರಳು ಸಮಸ್ಯೆಯಿಂದಾಗಿ ಜಿಲ್ಲೆಯ ಅಭಿವೃದ್ಧಿ ಕುಂಠಿತ: ಕೋಟ ಶ್ರೀನಿವಾಸ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮರಳು ಸಮಸ್ಯೆಯಿಂದಾಗಿ ಇಡೀ ಜಿಲ್ಲೆಯ ಅಭಿವೃದ್ಧಿಯೇ ಸರ್ವನಾಶವಾಗಿದೆ. ಹಸಿರು ಪೀಠಕ್ಕೆ ಮನವರಿಕೆ ಮಾಡಿಕೊಡದಿರುವುದರಿಂದ ಮರಳು ಸಮಸ್ಯೆಗೆ ರಾಜ್ಯ ಸರಕಾರವೇ ಕಾರಣವಾಗಿದ್ದು ಕಾರ್ಮಿಕ ಜೀವನದ ಜತೆ ಚೆಲ್ಲಾಟವಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.

ಉಪ್ಪುಂದ ಶಾಲೆಬಾಗಿಲು ಮಾತೃಶ್ರೀ ಸಭಾಭವನದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು. ಬೈಂದೂರು ವತ್ತಿನೆಣಿ ಗುಡ್ಡ ಕುಸಿತದ ಸಮಸ್ಯೆಗೆ ಸರಕಾರದ ನಿರ್ಲಕ್ಷವಾಗಿದ್ದು ಹೆದ್ದಾರಿ ವಿಸ್ತರಣೆಗೆ ಕೇಂದ್ರ ಸರಕಾರ ೧೦೦ ಮೀ.ಕೇಳಿದ್ದು ರಾಜ್ಯ ಸರಕಾರ ೬೦ ಮಿ.ಕೊಟ್ಟಿರುವುದು ಅಲ್ಲದೆ ಅರಣ್ಯ ಇಲಾಖೆಗಳ ತಗಾದೆ ಮಾಡಿದ್ದಾರೆ ಇದು ಯಾರ ವ್ಯಾಪ್ತಿಗೆ ಬರುತ್ತದೆ ಎನ್ನುವುದನ್ನು ಗಮನಿಸಬೇಕು ಎಂದ ಅವರು ಕೇಂದ್ರ ಸರಕಾರದ ಅನುದಾನದಿಂದ ಮಂಜುರಾದ ತಾರಾಪತಿ, ಸೌಡ ಸೇತುವೆ ಅನುದಾನವನ್ನು ರಾಜ್ಯ ಸರಕಾರದೆಂದು ಸ್ಥಳೀಯ ಶಾಸಕರು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗವಾಡಿದರು.

ದೇಶದ ಪ್ರಥಮ ಪ್ರಜೆಯೇ ಶ್ರೀಕೃಷ್ಣ ದೇವಸ್ಥಾನಕ್ಕೆ ಬಂದಾಗ ರಾಜ್ಯ ಮುಖ್ಯಮಂತ್ರಿಗಳು ಹಿಂದು ದೇವಾಲಯ ಎಂಬ ಕಾರಣಕ್ಕೆ ಬರದೇ ಹಿಂದು ವಿರೋಧಿ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ, ಉಸ್ತುವಾರಿ ಸಚಿವ ರಮಾನಾಥ ರೈ ಕೇವಲ ಅಲ್ಪಸಂಖ್ಯಾತರ ಒಲೆಕ್ಕೆಗಾಗಿ ಹಿಂದುಗಳನ್ನು ಜೈಲಿಗೆ ಕಳುಹಿಸಲು ಯತ್ನಿಸುತ್ತಿದ್ದಾರೆ. ಈ ಲಜ್ಜೆಗೆಟ್ಟ ಸರಕಾರದ ದುರಾಡಳಿತ ಬಗ್ಗೆ ಯುವ ಮೋರ್ಚಾಗಳು ಜಾಗೃತಗೊಂಡು ಸಮರೋಪಾದಿಯಲ್ಲಿ ಬಿಜೆಪಿ ಸರಕಾರವನ್ನು ಮರಳಿ ತರಲು ಈ ದಿನದಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಜಗತ್ತು ಮೆಚ್ಚಿದ ನಾಯಕ ನರೇಂದ್ರ ಮೋದಿ ನಮ್ಮ ಜತೆ ಇದ್ದಾರೆ ಎಂದರು.

ರಾಜ್ಯ ಬಿಜೆಪಿ ಕಾರ‍್ಯಕಾರಣಿ ಸದಸ್ಯ ಬಿ. ಎಂ. ಸುಕುಮಾರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಬೈಂದೂರು ಮಂಡಲದ ಮೋರ್ಚಾ ಅಧ್ಯಕ್ಷ ಗಣೇಶ ಪೂಜಾರಿ ಕಾರ್ಯಕಾರಿಣಿ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಕಿರಣ ಕುಮಾರ್, ಜಿಲ್ಲಾಧ್ಯಕ್ಷ ರಾಜೇಶ ಕಾವೇರಿ, ಜಿಪಂ ಸದಸ್ಯ ಸುರೇಶ ಬಟವಾಡಿ, ಬೈಂದೂರು ವಲಯ ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರಿರ್ಯದರ್ಶಿನಿ ದೇವಾಡಿಗ, ರಾಜ್ಯ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಎನ್. ದೀಪಕ್ ಕುಮಾರ್ ಶೆಟ್ಟಿ, ಸಂತೋಷ, ವಿಠಲ, ರಾಘವೇಂದ್ರ ನೆಂಪು ಉಪಸ್ಥಿತರಿದ್ದರು.

ಬೈಂದೂರು ಕ್ಷೇತ್ರದ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಕೈಗೊಂಡ ನಿರ್ಣಯವನ್ನು ಅನಿತಾ ಮೊಗವೀರ ಮಂಡಿಸಿದರು, ಜಿಲ್ಲಾ ಕಾರ‍್ಯದರ್ಶಿ ಶ್ರೀನಿವಾಸ ಕವರಾಡಿ ಅನುಮೋದಿಸಿದರು. ವಿವಿಧ ಶಕ್ತಿ ಕೇಂದ್ರಗಳ ಅಧ್ಯಕ್ಷರನ್ನಾಗಿ ನಾರಾಯಣ ಖಾರ್ವಿ ಶಿರೂರು, ಗಣೇಶ ದೇವಾಡಿಗ ಖಂಬದಕೋಣೆ, ಸಂತೋಷ ಕಾವ್ರಾಡಿ, ರವೀಂದ್ರ ಮೊಗವೀರ ವಂಡ್ಸೆ, ರಾಜೇಶ ಬೈಂದೂರು, ಸಂತೋಷ ಸಿದ್ದಾಪುರ, ರವೀಂದ್ರ ಖಾರ್ವಿ ತ್ರಾಸಿ ಇವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ‍್ಯದರ್ಶಿ ರವಿ ಗಾಣಿಗ ಕೆಂಚನೂರು ಸ್ವಾಗತಿಸಿ, ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ಉಪ್ಪುಂದ ಆನಂದ ಖಾರ್ವಿ ನಿರೂಪಿಸಿದರು, ಅಶ್ವಥ್ ಕೆಂಚನೂರು ವಂದಿಸಿದರು.

 

Exit mobile version