Kundapra.com ಕುಂದಾಪ್ರ ಡಾಟ್ ಕಾಂ

ಮೊಯ್ಲಿ ಸರಸ್ವತಿ ಸಮ್ಮಾನಕ್ಕೆ ಅರ್ಹರು: ಎ.ಎಸ್.ಎನ್ ಹೆಬ್ಬಾರ್

‘ಸರಸ್ವತಿ ಸಮ್ಮಾನ್’ ಕನ್ನಡ ಸಾಹಿತ್ಯಕ್ಕೆ ದೊರೆತರೂ ಸಂಭ್ರಮಿಸದಿರುವುದು ದುರಂತ

ಕುಂದಾಪುರ: ದೇಶದ ಅತ್ಯುನ್ನತ ಪುರಸ್ಕಾರಗಳಲ್ಲೊಂದಾದ ಸರಸ್ವತಿ ಸಮ್ಮಾನ್ ಕನ್ನಡ ಸಾಹಿತ್ಯಕ್ಕೆ ದೊರೆತಿರುವುದು ಹೆಮ್ಮೆಯ ವಿಚಾರ. ಕನ್ನಡಿಗರು ಸಂಭ್ರಮಿಸಬೇಕಾದ ಹೊತ್ತಿನಲ್ಲಿ ಮಹಾಕಾವ್ಯ ಬರೆದ ಲೇಖಕನನ್ನು ಲೇಖಕನೇ ಅಲ್ಲ, ಮಹಾಕಾವ್ಯದಲ್ಲಿರುವುದು ಅವರ ಬರಹವೇ ಅಲ್ಲ ಎಂದು ದೂಷಿಸುವುದರ ಕುರಿತು ಉಡುಪಿ ಜಿಲ್ಲಾ ಮಾಜಿ ಕಸಾಪ ಅಧ್ಯಕ್ಷ ಎ.ಎಸ್.ಎನ್ ಹೆಬ್ಬಾರ್ ವಿಷಾದ ವ್ಯಕ್ತಪಡಿಸಿದರು

ಅವರು ಕುಂದಪ್ರಭ ಟ್ರಸ್ಟ್ ನ ಆಶ್ರಯದಲ್ಲಿ ಜ್ಯೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ಜರುಗಿದ ‘ಮಡಿಕೆ ಮಾರುವ ಹುಡುಗ’ ಕವನ ಸಂಕಲನವನ್ನು ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೀರಪ್ಪ ಮೊಯ್ಲಿ ಒಬ್ಬ ಉತ್ತಮ ಬರಹಗಾರ ಎಂಬುದನ್ನು ಕಾಲೇಜು ದಿನಗಳಿಂದಲೂ ಚನ್ನಾಗಿ ಬಲ್ಲೆ. ಅವರ ‘ಶ್ರೀ ರಾಮಾಯಣ ಮಹಾನ್ವೇಷಣಂ’ ಮಹಾಕಾವ್ಯಕ್ಕೆ ಪ್ರಶಸ್ತಿ ಒಲಿದು ಬಂದಾಗ ಸಾಹಿತ್ಯಲೋಕ ಸಂಭ್ರಮಿಸಬೇಕಿತ್ತು. ಬದಲಿಗೆ ಅವರ ದೂಷಣೆಗೆ ನಿಂತು ಸರಳ ಹಾಗೂ ಆಧುನಿಕ ದೃಷ್ಟಿಕೋನವನ್ನೊಳಗೊಂಡಿರುವ ಅವರ ಕಾವ್ಯದ ಬಗ್ಗೆ ಅಪಪ್ರಚಾರ ಮಾಡಿದರು. ವಿಶಾಲ ಮನಸ್ಸಿನ ಕನ್ನಡಿಗರು ಬರಹಗಾರನೊಬ್ಬನನ್ನು ಈ ರೀತಿಯಲ್ಲಿ ಹೀಗೆಳೆಯುವುದು ತನಗೆ ಸರಿ ಕಾಣಲಿಲ್ಲ ಎಂದರು.

ಕನ್ನಡ ಭಾಷೆಯನ್ನು ಯಾರೋ ಬಂದು ಉಳಿಸುವುದಿಲ್ಲ. ಎಲ್ಲಿಯೇ ಇದ್ದರೂ ಕೂಡ ತಮ್ಮ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸಬೇಕಾದ ಜವಾಬ್ದಾರಿ ತಂದೆತಾಯಿಗಳು ಯಾಕೆ ಮರೆಯುತ್ತಾರೆ ಎಂದು ಪರಭಾಷಾ ಮೋಹಿಗಳನ್ನು ತಿವಿದರು.

ಸಮಾರಂಭವನ್ನು ಸಿರಿ ಸೌಂದರ್ಯ ಕನ್ನಡ ಮಾಸಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಚಿಕ್ಕಣ್ಣ ಉದ್ಘಾಟಿಸಿದರು. ಉಪನ್ಯಾಸಕಿ ಡಾ| ರೇಖಾ ವಿ. ಬನ್ನಾಡಿ ಮಡಿಕೆ ಮಾರುವ ಹುಡುಗ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಅತಿಥಿಗಳಾಗಿ ಹಿರಿಯ ಸಾಹಿತಿ ಕೋ. ಶಿವಾನಂದ ಕಾರಂತ, ಕರ್ನಾಟಕ ಬ್ಯಾಂಕ್ ನ ನಿರ್ದೇಶಕ ರಾಮಮೋಹನ್, ಸಾಹಿತಿ ಡಾ| ರಂಜಿತಕುಮಾರ್ ಶೆಟ್ಟಿ, ನಟ ನಿರ್ದೇಶಕ ಕಾಸರಗೋಡು ಚಿನ್ನಾ ಉಪಸ್ಥಿತರಿದ್ದರು.

ಕುಂದಪ್ರಭ ಟ್ರಸ್ಟ್ ನ ಯು,ಎಸ್. ಶೆಣೈ ಸ್ವಾಗತಿಸಿ, ಕೃತಿಕಾರ ಸಂದೀಪ್ ಶೆಟ್ಟಿ ಹೆಗ್ಗದ್ದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು, ನ್ಯಾಯವಾದಿ ರವಿಕುಮಾರ್ ಗಂಗೊಳ್ಳಿ ಧನ್ಯವಾದಗೈದರು, ಲೇಖಕ ಜಯವಂತ ಪೈ ವಂದಿಸಿದರು.

Exit mobile version