Kundapra.com ಕುಂದಾಪ್ರ ಡಾಟ್ ಕಾಂ

ತುರ್ತು ಪರಿಸ್ಥಿತಿ ಸಂದರ್ಭ ಸೆರೆವಾಸ ಅನುಭವಿಸಿದ್ದ ಹುತಾತ್ಮರ ಸ್ಮರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ದೇಶದಲ್ಲಿ ತುರ್ತು ಪರಿಸ್ಥಿತಿ ಕರಾಳ ದಿನವನ್ನು ಘೋಷಣೆ ಮಾಡಿದ ಸಂದರ್ಭ ಜೈಲುವಾಸ ಅನುಭವಿಸಿದ್ದ ಹುತಾತ್ಮರಿಗೆ ಗಂಗೊಳ್ಳಿಯಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ನುಡಿ ನಮನ ಸಲ್ಲಿಸಲಾಯಿತು.

ಗಂಗೊಳ್ಳಿಯ ಎಂ.ಪ್ರಭಾಕರ ಪೈ ಅವರ ನಿವಾಸಕ್ಕೆ ತೆರಳಿದ ಬಿಜೆಪಿ ಕಾರ್ಯಕರ್ತರು ಎಂ.ಪ್ರಭಾಕರ ಪೈ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನುಡಿನಮನ ಅರ್ಪಿಸಿದರು. ಎಂ. ಪ್ರಭಾಕರ ನಾಗೇಂದ್ರ ಪೈ ಅವರ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಸಂದರ್ಭ ಬಂಧನಕ್ಕೊಳಗಾದ ರಾಮ ದೇವಾಡಿಗ, ಎಂ.ಪ್ರಭಾಕರ ಪೈ, ಡಾ.ಎಸ್.ವಿ.ಪೈ, ದೇವದಾಸ ಗಾಣಿಗ, ಎಸ್.ವಿ.ಪೈ ಪಾಂಡು, ಎಂ.ಕಮಲಾಕ್ಷ ಪೈ ಮೊದಲಾದವರ ಸೇವೆಯನ್ನು ಸ್ಮರಿಸಿ ನುಡಿ ನಮನ ಸಲ್ಲಿಸಿ ಮಾತನಾಡಿದ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಜನಸಂಘದ ಕಾಲದಲ್ಲಿ ಹಗಲಿರುಳು ಸಂಘಟನೆಗಾಗಿ, ಹಿಂದು ಸಮಾಜದ ಅಭಿವೃದ್ಧಿಗೆ ದುಡಿದ ಇಂತಹ ಮಹಾನುಭಾವರು ನಮಗೆ ಸದಾ ಮಾರ್ಗದರ್ಶಕರಾಗಿದ್ದಾರೆ. ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಸಂದರ್ಭ ಅವರು ಅನುಭವಿಸಿದ ಹಿಂಸೆ ನೋವು ಮರೆಯಲು ಸಾಧ್ಯವಿಲ್ಲ. ಆದರೂ ಇವೆಲ್ಲದನ್ನು ಸಹಿಸಿಕೊಂಡು ಅಂದಿನ ಅಡಳಿತ ವಿರುದ್ಧ ನಡೆಸಿದ ಹೋರಾಟ ಅವಿಸ್ಮರಣೀಯ. ಅವರ ಹೋರಾಟ ಫಲವಾಗಿ ಇಂದು ಸದೃಢ ಹಿಂದು ಸಮಾಜ, ಸಂಘಟನೆ ಕಟ್ಟಲು ಸಹಾಯಕವಾಗಿದೆ ಎಂದರು.

ಎಂ.ನಾಗೇಂದ್ರ ಪೈ, ನಮಿತಾ ನಾಗೇಂದ್ರ ಪೈ, ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ ಕಾವೇರಿ, ಬಿಜೆಪಿ ಗಂಗೊಳ್ಳಿ ಸ್ಥಾನೀಯ ಸಮಿತಿ ಅಧ್ಯಕ್ಷ ಜಯರಾಮ ದೇವಾಡಿಗ, ಬೈಂದೂರು ಕ್ಷೇತ್ರ ಸಮಿತಿ ಪದಾಧಿಕಾರಿಗಳಾದ ರಾಮಪ್ಪ ಖಾರ್ವಿ, ಉಮಾನಾಥ ದೇವಾಡಿಗ, ಮಂತಿ ಶ್ರೀನಿವಾಸ ಖಾರ್ವಿ, ಗಂಗಾಧರ ಖಾರ್ವಿ ಲೈಟ್‌ಹೌಸ್ ಮತ್ತಿತರರು ಉಪಸ್ಥಿತರಿದ್ದರು.

Exit mobile version