Kundapra.com ಕುಂದಾಪ್ರ ಡಾಟ್ ಕಾಂ

ಮಾದಕ ದ್ರವ್ಯಗಳ ಬಗೆಗೆ ಕೆಟ್ಟ ಕುತೂಹಲ ಜೀವನವನ್ನೇ ಬಲಿತೆಗೆದುಕೊಳ್ಳಬಹುದು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ನಮ್ಮ ಸುತ್ತ ಮುತ್ತಲಲ್ಲೇ ದೊರಕುತ್ತಿರುವ ಮಾದಕ ವಸ್ತುಗಳ ಬಗೆಗೆ ನಾವು ಸದಾಕಾಲ ಜಾಗೃತಿಯಿಂದ ಇರಬೇಕು ಮತ್ತು ಈ ಕುರಿತಂತೆ ಸಮಾಜದಲ್ಲಿನ ಜನರಲ್ಲೂ ಜಾಗೃತಿ ಮೂಡಿಸುವಲ್ಲಿ ನಾವು ಪ್ರಯತ್ನಿಸಬೇಕು ಎಂದು ಗಂಗೊಳ್ಳಿ ಕರಾವಳಿ ಕಾವಲು ಪೋಲಿಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ ಭಾಸ್ಕರ್ ಬೈಂದೂರು ಅಭಿಪ್ರಾಯಪಟ್ಟರು.

ಅವರು ಅಂತರಾಷ್ಟ್ರೀಯ ವಿಶ್ವ ಮಾದಕ ದ್ರವ್ಯ ವಿರೋಧಿ ದಿನದ ಅ೦ಗವಾಗಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ‍್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಮಾದಕ ದ್ರವ್ಯಗಳ ಬಗೆಗೆ ಕೆಟ್ಟ ಕುತೂಹಲವನ್ನು ಬೆಳೆಸಿಕೊಳ್ಳಬೇಡಿ. ಈ ವಿಷಯದಲ್ಲಿ ಒಮ್ಮೆ ಇಡುವ ತಪ್ಪು ಹೆಜ್ಜೆ ನಮ್ಮ ಇಡೀ ಜೀವನವನ್ನೇ ಬಲಿತೆಗೆದುಕೊಳ್ಳಬಹುದು. ಸ್ನೇಹಿತರನ್ನು ಆರಿಸಿಕೊಳ್ಳುವಾಗಲೂ ಎಚ್ಚರಿಕೆಯಿರಲಿ. ಮಾದಕ ವಸ್ತುಗಳು ನೀಡುವ ಸ೦ತೋಷ ಕೇವಲ ಭ್ರಮೆ.ಅದಕ್ಕಾಗಿ ಜೀವನದ ನಿಜವಾದ ಆನ೦ದವನ್ನು ಹಾಳುಮಾಡಿಕೊಳ್ಳಬೇಡಿ ಎಂದು ಅವರು ಕಿವಿಮಾತು ಹೇಳಿದರು.

ಗಂಗೊಳ್ಳಿ ಕರಾವಳಿ ಕಾವಲು ಪೋಲಿಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ ಅಗಸ್ಟಿನ್, ಹೆಡ್ ಕಾನಸ್ಟೇಬಲ್ ಸುರೇಂದ್ರ ಅವರು ಮಾದಕ ದ್ರವ್ಯ ವ್ಯಸನದ ಬಗೆಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು.

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾ೦ಶುಪಾಲರಾದ ಕವಿತಾ ಎಮ್ ಸಿ ವಹಿಸಿದ್ದರು. ಆಂಗ್ಲಬಾಷಾ ಉಪನ್ಯಾಸಕ ಥಾಮಸ್ ಪಿ.ಎ, ಯೋಗರಾಜ್, ಉದಯ್, ಗಣೇಶ್, ರಾಮಚಂದ್ರ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕ ವೃ೦ದದವರು ಭಾಗವಹಿಸಿದ್ದರು. ಹಿಂದಿ ಉಪನ್ಯಾಸಕ ನಾರಾಯಣ ನಾಯ್ಕ್ ಸ್ವಾಗತಿಸಿದರು.ಕನ್ನಡ ಉಪನ್ಯಾಸಕ ಸುಜಯೀಂದ್ರ ಹಂದೆ ಕಾರ‍್ಯಕ್ರಮ ನಿರ್ವಹಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಅರುಣ್‌ಕುಮಾರ್ ಧನ್ಯವಾದಗೈದರು.

Exit mobile version