Kundapra.com ಕುಂದಾಪ್ರ ಡಾಟ್ ಕಾಂ

ಡಾ. ಅನುರಾಧಾ ಕಾಮತ್ ಅವರ ‘ಋತು ವೈಭವ’ ಪುಸ್ತಕ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾವು ಚಿಕ್ಕವರಿದ್ದಾಗ ಋತುಗಳ ಕಲ್ಪನೆಯನ್ನು ಹಿರಿಯರು ಸೊಗಸಾಗಿ ತಿಳಿಸುತ್ತಿದ್ದರು. ಮಗ್ಗಿ ಪುಸ್ತಕದಲ್ಲಿ ಎಲ್ಲಾ ಮಾಹಿತಿಯೂ ದೊರೆಯುತ್ತಿತ್ತು. ಆದರೆ ಈಗ ಅದೆಲ್ಲವೂ ಮರೆಯಾಗುತ್ತಿದೆ. ಋತುಗಳ ವಿಶೇಷತೆಯನ್ನು ತಿಳಿದುಕೊಳ್ಳುವವರ ಸಂಖ್ಯೆಯೂ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಋತುಗಳ ಮಹತ್ವನ್ನು ಹಾಗೂ ಅದಕ್ಕೆ ತಕ್ಕಂತೆ ನಾವು ಅಳವಡಿಸಿಕೊಳ್ಳಬಹುದಾದ ಜೀವನ ಶೈಲಿಯನ್ನು ರೂಡಿಸಿಕೊಳ್ಳಲು ಪುಸ್ತಕದ ಮೂಲಕ ಜ್ಞಾನ ಪಸರಣ ಅಗತ್ಯ ಎಂದು ಸಾಹಿತಿ ಯು. ವರಮಹಾಲಕ್ಷ್ಮೀ ಹೊಳ್ಳ ಹೇಳಿದರು.

ಅವರು ಉಪ್ಪುಂದ ಶಂಕರ ಕಲಾಮಂದಿರದ ಕುಂದ ಅಧ್ಯಯನ ಕೇಂದ್ರದಲ್ಲಿ ಜರುಗಿದ ಸುವಿಚಾರ ಬಳಗದ ತಿಂಗಳ ಕಾರ್ಯಕ್ರಮದಲ್ಲಿ ವೈದ್ಯೆ ಹಾಗೂ ಲೇಖಕಿ ಡಾ. ಅನುರಾಧಾ ಕಾಮತ್ ಅವರು ಬರೆದಿರುವ ’ಋತು ವೈಭವ’ ಋತು ಸಂಬಂಧಿ ವಿಶೇಷತೆಗಳು ಹಾಗೂ ಆರೋಗ್ಯ ಮಾಹಿತಿಯುಳ್ಳ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಋತುಗಳು ನಮ್ಮ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ಯಾವ ಖಾಯಿಲೆ ಬರಬಹುದು, ನಮ್ಮ ಆಹಾರ ವಿಹಾರ ಹೇಗಿರಬೇಕು. ಈ ಸಂದರ್ಭದಲ್ಲಿ ಯಾವ ಯೋಗಾಭ್ಯಾಸ ಉತ್ತಮ. ಯಾವ ಸಂಗೀತ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಲೇಖಕಿ ವಿಸ್ತ್ಕೃತವಾಗಿ ಬರೆದಿದ್ದಾರೆ. ವೈದ್ಯ ವೃತ್ತಿಯೊಂದಿಗೆ ಸಾಹಿತ್ಯ, ಕಲೆ ಹಾಗೂ ಆಧ್ಯಾತ್ಮದ ತುಡಿತ ಅನುರಾಧಾ ಕಾಮತ್ ಅವರಲ್ಲಿದೆ. ಹಾಗಾಗಿಯೇ ಉತ್ತಮ ಪುಸ್ತಕ ಬರೆಯಲು ಸಹಕಾರಿಯಾಗಿದೆ ಎಂದವರು ನುಡಿದರು.

ವೈದ್ಯೆ ಹಾಗೂ ಲೇಖಕಿ ಡಾ. ಅನುರಾಧಾ ಕಾಮತ್ ಆರೋಗ್ಯ ವಿಚಾರವಾಗಿ ಉಪನ್ಯಾಸ ನೀಡಿದರು. ಬಳಿಕ ಅವರನ್ನು ಸನ್ಮಾನಿಸಲಾಯಿತು. ಸುವಿಚಾರ ಬಳಗದ ಅಧ್ಯಕ್ಷ ಬಿ. ರಾಮಕೃಷ್ಣ ಶೇರುಗಾರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕ ಯು. ಚಂದ್ರಶೇಖರ ಹೊಳ್ಳ ಉಪಸ್ಥಿತರಿದ್ದರು. ನಿವೃತ್ತ ಅಧ್ಯಾಪಕ ಸೂಲ್ಯಣ್ಣ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಾಸುದೇವ ಹೆಚ್. ನಾಯ್ಕ್ ವಂದಿಸಿದರು. ಉಪನ್ಯಾಸಕ ಕೇಶವ ನಾಯ್ಕ್ ನಿರೂಪಿಸಿದರು.

Exit mobile version