Kundapra.com ಕುಂದಾಪ್ರ ಡಾಟ್ ಕಾಂ

ಪರಿಸರ ಸ್ವಚ್ಛತೆ; ಕಾಳಜಿ ವಹಿಸಿ: ರಾಜೇಶ್‌ ಕಾವೇರಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಮಳೆಗಾಲ ಆರಂಭವಾದ ಬೆನ್ನಲ್ಲೇ ಮಲೇರಿಯಾ, ಡೆಂಗ್ಯೂ ಮೊದಲಾದ ಕಾಯಿಲೆಗಳ ಆಗಮನವಾಗುತ್ತದೆ. ಈ ಹಿನ್ನಲೆಯಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚು ನಿಗಾ ವಹಿಸಬೇಕಾಗಿದೆ. ಸೊಳ್ಳೆಗಳು ಈ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದ್ದು ಸೊಳ್ಳೆಗಳು ಉತ್ಪತ್ತಿಯಾಗದ ಹಾಗೇ ನಮ್ಮ ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಕುಂದಾಪುರ ಪುರಸಭೆಯ ಉಪಾಧ್ಯಕ್ಷ ರಾಜೇಶ್‌ ಕಾವೇರಿ ಹೇಳಿದರು.

ಅವರು ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಹಿಂದುಳಿದ ವರ್ಗಗಳ ಇಲಾಖೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕುಂದಾಪುರ ಪುರಸಭೆಯ ಅಧ್ಯಕ್ಷೆ ವಸಂತಿ ಸಾರಂಗ ಅಧ್ಯಕ್ಷತೆ ವಹಿಸಿ ಮಲೇರಿಯಾ ವಿರೋಧಿ ಮಾಸಾಚರಣೆಯ ಕರಪತ್ರ ಬಿಡುಗಡೆಗೊಳಿಸಿದರು.

ಮುಖ್ಯ ಅತಿಥಿಗಳಾಗಿ ತಾಲೂಕು ಬಿಸಿಎಂ ವಿಸ್ತರಣಾಧಿಕಾರಿ ಬಸವರಾಜ್‌, ಫ್ರೆಂಡ್ಸ್‌ ಸರ್ಕಲ್‌ ಮೀನು ಮಾರ್ಕೆಟ್‌ ರಸ್ತೆ ಕುಂದಾಪುರ ಇದರ ಗೌರವಾಧ್ಯಕ್ಷ ಶೀನ ಖಾರ್ವಿ, ಸಂಪನ್ಮೂಲ ವ್ಯಕ್ತಿ ತಾಲೂಕು ಎನ್‌.ಬಿ.ಡಿ.ಸಿ.ಸಿ. ಅಧಿಕಾರಿ ಡಾ| ಪ್ರೇಮಾನಂದ, ಡಾ| ಉಮೇಸ್‌ ನಾಯಕ್‌ ಉಪಸ್ಥಿತರಿದ್ದರು.

ತಾಲೂಕು ಆರೋಗ್ಯ ಅಧಿಕಾರಿ ಡಾ| ನಾಗಭೂಷಣ್‌ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿ ತಾ| ಎನ್‌.ಬಿ.ಡಿ. ಸಿ.ಸಿ. ಅಧಿಕಾರಿ ಡಾ| ಪ್ರೇಮಾನಂದ ಅವರು ಮಾಹಿತಿ ನೀಡಿದರು.

Exit mobile version