Kundapra.com ಕುಂದಾಪ್ರ ಡಾಟ್ ಕಾಂ

ಜು.18: ನಾಗೂರಿನಲ್ಲಿ ಜಿಲ್ಲಾ ಧ್ವನಿ ಬೆಳಕು ಸಂಯೋಜಕರ ಸಂಘಟನೆ ವಾರ್ಷಿಕೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬ್ಯೆಂದೂರು: ಧ್ವನಿ ಬೆಳಕು ಸಂಯೋಜಕರ ಸಂಘಟನೆಯ 6ನೇ ಜಿಲ್ಲಾ ವಾರ್ಷಿಕ ಮಹಾಸಭೆ ಹಾಗೂ 6ನೇ ವಾರ್ಷಿಕೋತ್ಸವ ಕಾರ್ಯಕ್ರಮವು ನಾಗೂರು ಶಾಂತೇರಿ ಕಾಮಾಕ್ಷಿ ಸಭಾಭವನದಲ್ಲಿ ಜರುಗಲಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಧ್ವನಿಬೆಳಕು ಸಂಘದ ಸದಸ್ಯರಿಗೆ ವೈದ್ಯಕೀಯ ತಪಾಸಣೆ, ಉತ್ತಮ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾನಿಧಿ, ಸದಸ್ಯರಿಗೆ ಆರೋಗ್ಯ ವಿಮೆ ಸೇರಿದಂತೆ ಇತರೆ ಕಾರ್ಯಕ್ರಮಗಳು ನಡೆಯಲಿರುವುದು ಎಂದು ಉಡುಪಿ ಜಿಲ್ಲಾ ಧ್ವನಿ ಬೆಳಕು ಸಂಯೋಜಕರ ಸಂಘಟನೆಯ ಜಿಲ್ಲಾಧ್ಯಕ್ಷ ಎಚ್. ಉದಯ ಆಚಾರ್ಯ ಹೇಳಿದರು.

ಅವರು ನಾಗೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಉಡುಪಿ ಜಿಲ್ಲೆಯ ಧ್ವನಿ ಬೆಳಕು ಸಂಯೋಜಕರು ಸೇರಿ ಜಿಲ್ಲೆಯ ಎಲ್ಲ ವೃತ್ತಿ ಬಾಂಧವರನ್ನು ಒಟ್ಟುಗೂಡಿಸಿ ಒಂದೇ ಸಿದ್ಧಾಂತವನ್ನು ರೂಢಿಸಿಕೊಂಡು, ಉತ್ತಮ ಸೇವೆಯನ್ನು ನೀಡುವ ಸಲುವಾಗಿ ಸದುದ್ದೇಶದಿಂದ ಸಂಘಟನೆ ರಚನೆಗೊಂಡಿದ್ದು ಬ್ಯೆಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾರ್ಕಳ ಹಾಗೂ ಕಾಪು ವಲಯಗಳ ೭೦೦ ಸದಸ್ಯರಿದ್ದಾರೆ ಎಂದರು. ಉಚಿತ ವೈದ್ಯಕೀಯ ಶಿಬಿರ, ಆರ್ಥಿಕವಾಗಿ ಹಿಂದುಳಿದವರ ಮನೆಗಳಿಗೆ ಉಚಿತ ವಿದ್ಯುತ್ ವೈರಿಂಗ್ ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ಸಂಘಟನೆ ತೊಡಗಿಸಿಕೊಂಡಿದೆ ಎಂದರು.

ವಾರ್ಷಿಕ ಮಹಾಸಭೆ:
ಜು.18 ಮಹಾ ಸಭೆ ಬ್ಯೆಂದೂರು ವಲಯದಲ್ಲಿ 6ನೇ ಜಿಲ್ಲಾ ವಾರ್ಷಿಕ ಮಹಾಸಭೆ ನಾಗೂರು ಶಾಂತೇರಿ ಕಾಮಾಕ್ಷಿ ಸಭಾಭವನದಲ್ಲಿಬೆಳಗ್ಗೆ 9 ಗಂಟೆಗೆ ನಡೆಯಲ್ಲಿದೆ. ಉಡುಪಿ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸದಸ್ಯರ ಮಾಹಿತಿ ಕೈಪಿಡಿ ಬಿಡುಗೊಡೆಗೊಳಿಸಲಿದ್ದಾರೆ. ಆರು ವಲಯಗಳ ಆಯ್ದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಹಿರಿಯ ಸದಸ್ಯರಿಗೆ ಸಮ್ಮಾನ ಮಾಡಲಾಗುತ್ತದೆ. ಈ ಭಾರಿಯಿಂದ ಉನ್ನತ ವ್ಯಾಸಂಗ ಮಾಡುವ ಸಂಘದ ಸದಸ್ಯರ ಮಕ್ಕಳಿಗೆ ಅರ್ಹತೆಗೆ ಅನುಗುಣವಾಗಿ ವಿದ್ಯಾನಿಧಿಯನ್ನು, ಸದಸ್ಯರಿಗೆ ಆರೋಗ್ಯ ವಿಮೆ ಹಾಗೂ ಧನಸಹಾಯ ಮಾಡಲಾಗುತ್ತಿದ್ದು ಶ್ರೀಗಳು ಚಾಲನೆ ನೀಡಲಿದ್ದಾರೆ ಎಂದರು.

ಮಧ್ಯಾಹ್ನ 3ಗಂಟೆಗೆ ಸಂಘಟನೆಯ 6ನೇ ವಾರ್ಷಿಕೋತ್ಸವ ನಡೆಯಲಿದ್ದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಭಾಗವಹಿಸಲಿದ್ದಾರೆ. ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕಾಲ ಮಿತಿ ಯಕ್ಷಗಾನ ನಡೆಯಲಿದೆ ಎಂದವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಾಮೋದರ್, ಬ್ಯೆಂದೂರು ವಲಯ ಅಧ್ಯಕ್ಷ ಶಶಿಧರ್ ಶೆಣೈ, ಕುಂದಾಪುರ ಅಧ್ಯಕ್ಷ ರೋನಿ ಬೆರೆಟ್ಟೊ, ಬ್ರಹ್ಮಾವರ ಅಧ್ಯಕ್ಷ ಪುಂಡಲೀಕ ಕಾಮತ್, ಉಡುಪಿ ಅಧ್ಯಕ್ಷ ಅನಿಲ್‌ಕುಮಾರ್, ಜಿಲ್ಲಾ ಕೋಶಾಧಿಕಾರಿ ಸಂತೋಷ ಶೆಟ್ಟಿಗಾರ್, ಬಾಲಕೃಷ್ಣ, ಮೊದಲಾದವರು ಉಪಸ್ಥಿತರಿದ್ದರು.

Exit mobile version