Kundapra.com ಕುಂದಾಪ್ರ ಡಾಟ್ ಕಾಂ

ಯಡ್ತರೆ ಮನೆತನದ ಹಿರಿಕ ಎ. ಅಣ್ಣಪ್ಪ ಶೆಟ್ಟಿ ಇನ್ನಿಲ್ಲ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬ್ಯೆಂದೂರು: ಯಡ್ತರೆ ಮನೆತನದ ಹಿರಿಕ ಆಲಂದೂರು ಅಣ್ಣಪ್ಪ ಶೆಟ್ಟಿ (76) ಅವರು ತಮ್ಮ ಸ್ವಗೃಹದಲ್ಲಿ ಇಂದು ನಿಧನರಾದರು. ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ಸಹಕಾರಿ ಕ್ಷೇತ್ರದಲ್ಲಿ ತೋಡಗಿಸಿಕೊಂಡಿದ್ದ ಅವರು ಯಡ್ತರೆ ಮನೆತನದಲ್ಲಿ ಓರ್ವ ಪ್ರಮುಖರೆನಿಸಿಕೊಂಡಿದ್ದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಟ್ರಸ್ಟಿಗಳಾಗಿ, ವಣಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅನುವಂಶಿಯ ಆಡಳಿತ ಮೊಕ್ತೇಸರರಾಗಿ, ಬೈಂದೂರು ಶ್ರೀ ಸೇನೆಶ್ವರ ದೇವಸ್ಥಾನ, ಬ್ಯೆಂದೂರು ಶ್ರೀ ವೆಂಕಟರಮಣ ದೇವಸ್ಥಾನಗಳ ಮಾಜಿ ಅಧ್ಯಕ್ಷರಾಗಿ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಬೈಂದೂರು ಮಂಡಲದ ಪಂಚಾಯತಿಯ ಮಾಜಿ ಅಧ್ಯಕ್ಷರಾಗಿದ್ದರು. ಬ್ಯೆಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾಗಿ ಸಹಕಾರಿ ರಂಗದಲ್ಲಿ ಗುರುತಿಸಿಕೊಂಡಿದ್ದರು. ಸಾಮಾಜಿಕ ರಂಗದಲ್ಲಿ ತೊಡಗಿಸಿಕೊಂಡಿದ್ದರು.

ಅಣ್ಣಪ್ಪ ಶೆಟ್ಟರ ಕುಟುಂಬಿಕರು ದೊಡ್ಡ ಜಮಿನ್ದಾರರಾಗಿದ್ದರು. ಉಳುವವನೇ ಹೊಲದೊಡೆಯ ಎಂಬ ಕಾನೂನು ಜಾರಿಯಾದ ಸಂದರ್ಭ ಅಣ್ಣಪ್ಪ ಶೆಟ್ಟರು ಹಾಗೂ ಅವರ ತಂದೆ ತಮ್ಮ ಒಕ್ಕಲುಗಳಿಗೆ ಗೇಣಿ ಪಡೆಯುವುದನ್ನು ತಾವಾಗಿಯೇ ಇಲ್ಲಿಸಿದ್ದರು. ಒಕ್ಕಲುಗಳು ಉಳುವೆ ಮಾಡುತ್ತಿದ್ದ ಜಮೀನನ್ನು ಯಾವುದೇ ತಕರಾರಿಲ್ಲದೇ ಅವರಿಗೇ ಬಿಟ್ಟುಕೊಟ್ಟಿದ್ದರು. ಆ ಸಂದರ್ಭದಲ್ಲಿ ಒಂದಿಷ್ಟೂ ತಗಾದೆ ತೆಗೆಯದೇ ಪ್ರತಿನಿತ್ಯವೂ ಕೋರ್ಟಿಗೆ ತೆರಳಿ ಒಕ್ಕಲುಗಳಿಗೆ ಜಮೀನು ಬಿಟ್ಟುಕೊಡಲು ತಮ್ಮ ತಕರಾರಿಲ್ಲ ಎಂದು ಹೇಳಿಬರುತ್ತಿದ್ದ ಉದಾರತೆಯನ್ನು ಇಂದಿಗೂ ಕೆಲವರು ಸ್ಮರಿಸುತ್ತಾರೆ.

ಮೃತರು ನಾಲ್ಕು ಪುತ್ರರನ್ನು ಅಗಲಿದ್ದಾರೆ. ಬ್ಯೆಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾ ಕೆ.ಡಿ.ಪಿ ಸದಸ್ಯ ಎಸ್.ರಾಜು ಪೂಜಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಸೇರಿದಂತೆ ಹಲವರು ಮೃತರ ಅಂತಿಮ ದರ್ಶನ ಪಡೆದರು.

 

Exit mobile version