Kundapra.com ಕುಂದಾಪ್ರ ಡಾಟ್ ಕಾಂ

ಹೇರಂಜಾಲು ಸ.ಹಿ.ಪ್ರಾ ಶಾಲೆ ಹಳೆವಿದ್ಯಾರ್ಥಿ ಸಂಘ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿಕ್ಷಣ ಸಂಸ್ಥೆ ಪರಿಣಾಮಕಾರಿಯಾಗಿ ಹೊಣೆ ನಿರ್ವಹಿಸಲು ಕರ್ತವ್ಯಶೀಲ ಶಿಕ್ಷಕರ, ಪ್ರೋತ್ಸಾಹಕ ಪಾಲಕರ, ಹಳೆವಿದ್ಯಾರ್ಥಿಗಳ, ಹೊಣೆಗಾರರಾದ ಜನಪ್ರತಿನಿಧಿಗಳ ಮತ್ತು ಶಿಕ್ಷಣ ಪ್ರೇಮಿ ಸಾರ್ವಜನಿಕರ ಬೆಂಬಲ ಬೇಕು. ಇವರೆಲ್ಲರ ಸಹಕಾರವಿದ್ದಲ್ಲಿ ಯಶಸ್ಸು ಸಾಧ್ಯ ಎಂದು ಭಗವದ್ಗೀತಾ ಸಪ್ತಾಹ ಆಚರಣಾ ಸಮಿತಿಯ ಎಚ್. ನಾಗೇಶ್ ರಾವ್ ಹೇಳಿದರು.

ಹೇರಂಜಾಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹಳೆವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಯಾವುದೇ ಸಂಸ್ಥೆಯನ್ನು ಆರಂಭಿಸುವ ಸ್ಥಾಪಕ ವ್ಯಕ್ತಿಯ ತ್ಯಾಗ, ಪರಿಶ್ರಮ ಹಾಗೂ ನಿಷ್ಠೆಯಿಂದ ಕೂಡಿದ ಪ್ರಾಮಾಣಿಕ ಸೇವೆಯಿಂದ ಮಾತ್ರ ಅದು ಅಭಿವೃದ್ಧಿ ಕಾಣಲು ಸಾಧ್ಯ. ಆತನ ದೂರದೃಷ್ಠಿತ್ವದ ಮುಖಂಡತ್ವದಲ್ಲಿ ಸಮಾನ ಮನಸ್ಕ ಸಹಚರರು ಆತನನ್ನು ಹಿಂಬಲಿಸುತ್ತಾರೆ. ಈ ವ್ಯವಸ್ಥೆಯಿಂದ ಸಂಸ್ಥೆ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.

ನಂತರ ಗ್ರಾಮವಿಕಾಸ ಸಮಿತಿ ಮಂಡಲ ಪ್ರಮುಖ್, ಗ್ರಾಪಂ ಸದಸ್ಯ ಪರಂಜ್ಯೋತಿ ಐತಾಳ್ ಮಾತನಾಡಿ, ಪೋಷಕರಲ್ಲಿ ಮನೆಮಾಡಿರುವ ಆಂಗ್ಲ ಮಾಧ್ಯಮ ಶಿಕ್ಷಣದ ವ್ಯಾಮೋಹದಿಂದ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಸೊರಗುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಇಂದು ಸರ್ಕಾರದ ಆದೇಶದಂತೆ ಅಧಿಕೃತವಾಗಿ ಅಸ್ಥಿತ್ವಕ್ಕೆ ಬಂದ ಹಳೆವಿದ್ಯಾರ್ಥಿ ಸಂಘ ನೂತನ ಯೋಜನೆಗಳನ್ನು ರೂಪಿಸುತ್ತಿದೆ. ಶಿಕ್ಷಣದ ಮೂಲಕ ಬದುಕಿನ ಬೆಳಕು ಪಡೆದ ಸಂಸ್ಥೆಗಳನ್ನು ಬೆಂಬಲಿಸಬೇಕಾದ ಹೊಣೆ ಹಳೆವಿದ್ಯಾರ್ಥಿಗಳಿಗೆ ಇದೆ. ಗುಣಮಟ್ಟದ ಶಿಕ್ಷಣ ನೀಡಲು ಸರಕಾರ ಎಷ್ಟೇ ಪ್ರಯತ್ನ ನಡೆಸಿದರೂ ಅದರಲ್ಲಿ ಸಾರ್ವಜನಿಕರು ಸಹಭಾಗಿತ್ವ ನೀಡದಿದ್ದರೆ ಆ ಪ್ರಯತ್ನ ಸಫಲವಾಗದು. ಅ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ನಮ್ಮ ಶಾಲೆ ಹಾಗೂ ಗ್ರಾಮವನ್ನು ಸರ್ವತೋಮುಖ ಅಭಿವೃದ್ಧಿಯತ್ತ ಕೊಂಡೊಯ್ಯುವ ಎಂದರು.

ಅಧ್ಯಕ್ಷತೆವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷೆ ಜಲಜಾಕ್ಷಿ ಗಾಣಿಗ ನೂತನ ಸಂಘವನ್ನು ಉದ್ಘಾಟಿಸಿದರು. ಉಪಾಧ್ಯಕ್ಷೆ ಅಮಿತಾ ಶೆಟ್ಟಿ, ಧಗ್ರಾಯೋ ಮೇಲ್ವಿಚಾರಕಿ ರಮಣಿ, ಸಿಆರ್‌ಪಿ ಶ್ರೀಕಾಂತ್ ಕಾಮತ್, ಗ್ರಾಮವಿಕಾಸ ಸಮಿತಿ ತಾಲೂಕು ಪ್ರಮುಖ್ ಪ್ರಸನ್ನ ಕುಮಾರ್, ಮಾಲಿಂಗ ಪೂಜಾರಿ, ಮುತ್ತ ಗಾಣಿಗ, ರಘುರಾಮ ಪೂಜಾರಿ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಕವಿತಾ ಕಾಮತ್ ಪ್ರಸ್ತಾವಿಸಿದರು. ಶೋಭ ನಿರೂಪಿಸಿದರು. ನಂತರ ಭಗವದ್ಗೀತಾ ಸಪ್ತಾಹ ಆಚರಣಾ ಸಮಿತಿ, ಧಗ್ರಾಯೋ ಮತ್ತು ಗ್ರಾಮವಿಕಾಸ ಸಮಿತಿ ನೇತೃತ್ವದಲ್ಲಿ ಸಸಿ ವಿತರಣೆ ಹಾಗೂ ವನಮಹೋತ್ಸವ ನಡೆಯಿತು.

 

Exit mobile version