Kundapra.com ಕುಂದಾಪ್ರ ಡಾಟ್ ಕಾಂ

ಕೆಎಸ್‌ಆರ್‌ಟಿಸಿ ಬಸ್ ಸಿಬ್ಬಂದಿಗಳಿಗೆ ಖಾಸಗಿ ಬಸ್ ಏಜೆಂಟರ್ ಬೆದರಿಕೆ: ನಾಗರಿಕ ಹೋರಾಟ ಸಮಿತಿ ಖಂಡನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕುಂದಾಪುರ-ಗಂಗೊಳ್ಳಿ ನಡುವೆ ಸಂಚರಿಸುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ಸಿಬ್ಬಂದಿಗಳಿಗೆ ಕುಂದಾಪುರದಲ್ಲಿ ಕೆಲ ಖಾಸಗಿ ಬಸ್ ಏಜೆಂಟರು ಬೆದರಿಕೆ ಹಾಕುತ್ತಿರುವ ಘಟನೆಯನ್ನು ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿ ತೀವ್ರವಾಗಿ ಖಂಡಿಸಿದ್ದು, ಖಾಸಗಿ ಬಸ್ ಏಜೆಂಟರ ಅಮಾನವೀಯ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ನಾಗರಿಕ ಹೋರಾಟ ಸಮಿತಿ ತಿಳಿಸಿದೆ.

ಕಳೆದ ಎಂಟು ವರ್ಷಗಳಿಂದ ಕುಂದಾಪುರ-ಗಂಗೊಳ್ಳಿ ನಡುವೆ ಸಂಚರಿಸುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಖಾಸಗಿ ಬಸ್‌ಗಳು ನೀಡುತ್ತಿರುವ ತೊಂದರೆ ಇನ್ನೂ ಮುಂದುವರಿದ್ದು, ಅನಗತ್ಯ ತೊಂದರೆ ನೀಡುತ್ತಿರುವ ಹಾಗೂ ಸಂಘರ್ಷ ಮತ್ತು ಪೈಪೋಟಿಗೆ ಕಾರಣವಾಗುತ್ತಿರುವ ಖಾಸಗಿ ಬಸ್ಸುಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾ ಪ್ರಾದೇಶಿಕ ಪ್ರಾಧಿಕಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಆರ್‌ಟಿಓ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಈ ಬಗ್ಗೆ ಕ್ರಮಕೈಗೊಳ್ಳದ ಅಧಿಕಾರಿಗಳು ಬಸ್ ಮಾಲೀಕರಿಗೆ ಎಚ್ಚರಿಕೆ ನೀಡಿ ಕೈ ತೊಳೆದುಕೊಂಡಿದ್ದಾರೆ. ಸಂಬಂಧಪಟ್ಟ ಇಲಾಖಾಧಿಕಾರಿಗಳು ಕಾನೂನು ರೀತ್ಯಾ ಕ್ರಮಕೈಗೊಳ್ಳದಿರುವುದರಿಂದ ಇದೀಗ ಪುನ: ಕೆಲವು ಖಾಸಗಿ ಬಸ್ಸುಗಳು ಕುಂದಾಪುರ-ಗಂಗೊಳ್ಳಿ ನಡುವೆ ಸಂಚರಿಸುತ್ತಿರುವ ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಕೆಲವು ಖಾಸಗಿ ಬಸ್ಸುಗಳು ಕಿರುಕುಳ, ತೊಂದರೆ ನೀಡುತ್ತಿದ್ದಾರೆ ಮತ್ತು ಕೆಲವು ಖಾಸಗಿ ಬಸ್ ಏಜೆಂಟರು ಕೆಎಸ್‌ಆರ್‌ಟಿಸಿ ಬಸ್ ಸಿಬ್ಬಂದಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ.

ಕುಂದಾಪುರ-ಗಂಗೊಳ್ಳಿ ನಡುವೆ ಸಂಚರಿಸುತ್ತಿರುವ ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ತೊಂದರೆ ನೀಡುತ್ತಿರುವ ಖಾಸಗಿ ಬಸ್ಸುಗಳು ವಿರುದ್ಧ ಸಂಬಂಧಪಟ್ಟ ಇಲಾಖಾಧಿಕಾರಿಗಳು ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಮತ್ತು ಕುಂದಾಪುರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಿಬ್ಬಂದಿಗಳಿಗೆ ಬೆದರಿಕೆ ಹಾಕುತ್ತಿರುವ ಖಾಸಗಿ ಬಸ್ ಏಜೆಂಟರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಖಾಸಗಿ ಬಸ್ ಮಾಲೀಕರ ಲಾಭಿಗೆ ಮಣಿದು ಕ್ರಮಕೈಗೊಳ್ಳದಿದ್ದಲ್ಲಿ ಗಂಗೊಳ್ಳಿ ನಾಗರಿಕರೊಂದಿಗೆ ಕುಂದಾಪುರದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎಸ್.ಚಿಕ್ಕಯ್ಯ ಪೂಜಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Exit mobile version