Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ಗೆ 44.34 ಲಕ್ಷ ರೂ. ಲಾಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಬೈಂದೂರು 2016-17ನೇ ಸಾಲಿನಲ್ಲಿ ಒಟ್ಟು 41 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ 44.34 ಲಕ್ಷ ರೂ. ಲಾಭಗಳಿಸಿದೆ. ಹಿಂದಿನ ಆರ್ಥಿಕ ವರ್ಷಗಳಿಗಿಂತ ಸಂಸ್ಥೆಯು ಉತ್ತಮ ಪ್ರಗತಿ ಸಾಧಿಸಿದೆ ಎಂದು ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.

ಭಾನುವಾರ ಸಂಘದ ಪ್ರಧಾನ ಕಛೇರಿಯಲ್ಲಿ ಜರುಗಿದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸಹಕಾರಿಯು 2016-17ನೇ ಸಾಲಿನಲ್ಲಿ ರೂ. 9.19 ಕೋಟಿ ಠೇವಣಿ ಹೊಂದಿದ್ದು 9.53 ಕೋಟಿ ಸಾಲ ನೀಡಿ ಪ್ರಸ್ತುತ ವರ್ಷದಲ್ಲಿ 41 ಕೋಟಿಯಷ್ಟು ವಹಿವಾಟು ನಡೆಸಿದೆ. ಸದಸ್ಯರಿಗೆ ಶೇ.13 ಡಿವಿಡೆಂಟ್ ಘೋಷಿಸಿದೆ ಎಂದರು.

ಕಳೆದ ಸಾಲಿನ ಕಾರ್ಯಯೋಜನೆಯಲ್ಲಿ ನಿಗದಿಪಡಿಸಿದ ಠೇವಣಿ, ಸಾಲ, ಅನುತ್ಪಾದಕ ಸಾಲ, ಸುಸ್ತಿ ಸಾಲ ಹಾಗೂ ಮುಂಗಡ ಲಾಭಗಳಿಕೆಯಲ್ಲಿ ನಿಗದಿತ ಗುರಿಯನ್ನು ಮೀರಿ ಸಂಸ್ಥೆ ಮುನ್ನಡೆಯುತ್ತಿದ್ದರೇ, ಗ್ರಾಹಕರ ಸಹಕಾರ, ನಿಧಿಗಳ ಸಮರ್ಪಕ ನಿರ್ವಹಣೆ, ಸಾಲಗಳ ವಿತರಣೆ ಹಾಗೂ ಸಮಯೋಜಿತ ಹೂಡಿಕೆಗಳಿಂದಾಗಿ ಸಂಘವು ನಿರೀಕ್ಷೆಗೂ ಮೀರಿದ ಪ್ರಗತಿ ಸಾಧಿಸಿದೆ. ಆಡಿಟ್ ವರ್ಗೀಕರಣದಲ್ಲಿ ಸಂಸ್ಥೆ ’ಎ’ ತರಗತಿಯನ್ನು ಹೊಂದಿದೆ ಎಂದರು.

ಸೌಹಾರ್ದ ಸಹಕಾರಿಯ ವ್ಯಾಪ್ತಿಯಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆರ್ಥಿಕ ನೆರವು ನೀಡಲಾಯಿತು. ಈ ಸಂದರ್ಭ ಸಂಘದ ಸರ್ವ ನಿರ್ದೇಶಕರುಗಳು ಉಪಸ್ಥಿತರಿದ್ದರು. ಲಕ್ಷ್ಮೀನಾರಾಯಣ ವೈದ್ಯ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ವಿನಾಯಕ ರಾವ್ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ ಪಿ. ಯಡ್ತರೆ ವಾರ್ಷಿಕ ವರದಿ ವಾಚಿಸಿದರು.

Exit mobile version