Kundapra.com ಕುಂದಾಪ್ರ ಡಾಟ್ ಕಾಂ

ಎಲ್ಲೂರು: ಕೊಟ್ಟಿಗೆಯಲ್ಲಿದ್ದ 5 ಜೆರ್ಸಿ ದನ ಕಳವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮನೆಯ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ 5 ಜೆರ್ಸಿ ದನಗಳನ್ನು ತಡರಾತ್ರಿ ಕದ್ದೊಯ್ದಿರುವುದಲ್ಲದೇ ಒಂದು ಕರುವನ್ನು ಕತ್ತು ಹಿಸುಕಿ ಸಾಯಿಸಿರುವ ಘಟನೆ ಗೋಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲೂರು ಎಂಬಲ್ಲಿ ನಡೆದಿದೆ. ಎಲ್ಲೂರು ನಿವಾಸಿ ರಾಜೇಶ್ ಕಿಣಿ ಮನೆಯ ಪಕ್ಕದಲ್ಲಿರುವ ಕೊಟ್ಟಿಗೆಯಿಂದ ದನಗಳನ್ನು ಕದ್ದೊಯ್ಯಲಾಗಿದೆ.

ಕೊಟ್ಟಿಗೆಯಲ್ಲಿ ಕಟ್ಟಿದ್ದ 9 ದನಗಳಲ್ಲಿ ಪೈಕಿ 5 ದನಗಳನ್ನು (1.70ಲಕ್ಷ) ಅಪಹರಿಸಿದ ದುಷ್ಕರ್ಮಿಗಳು ಒಂದು ಕರುವನ್ನು ಅಮಾನುಷವಾಗಿ ಕತ್ತು ಹಿಸುಕಿ ಸಾಯಿಸಿದ್ದಾರೆ. ಬುಧವಾರ ಬೆಳಗ್ಗೆ 5 ಗಂಟೆಯ ಸುಮಾರಿಗೆ ಹಾಲು ಕರೆಯಲು ತೆರಳಿದಾಗ ದನಗಳು ನಾಪತ್ತೆಯಾಗಿರುವುದು ಕಂಡು ಬಂದಿದ್ದು, ಬೈಂದೂರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಕುಂದಾಪುರ ಡಿವೈಎಸ್‌ಪಿ ಪ್ರವೀಣ ಕುಮಾರ ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ಹಾಲ್ಕಲ್ ಸಮೀಪದ ಸಿಸಿಟಿವಿ ಪೋಟೇಜ್‌ನ್ನು ಪರಿಶೀಲಿಸಿ ದನಗಳ್ಳರನ್ನು ಶೀಘ್ರ ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ .

ದನಗಳರನ್ನು ಪತ್ತೆ ಮಾಡಲು ಆಗ್ರಹ:
ಎಲ್ಲೂರು, ಹಾಲ್ಕಲ್ ಭಾಗದಲ್ಲಿ ಕೊಟ್ಟಿಗೆ ನುಗ್ಗಿ ದನಗಳ್ಳತನ ಪ್ರಕರಣ ಇದೇ ಮೊದಲಲ್ಲ, ಹಲವು ಸಮಯದಿಂದ ಈ ಭಾಗದಲ್ಲಿ ನಡೆಯುತ್ತಿದೆ, ಈ ಬಗ್ಗೆ ಪೋಲೀಸ್ ಇಲಾಖೆಯ ಗಮನಕ್ಕೂ ತರಲಾಗಿದೆ, ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದರೆ ಇಂದು ೫ ದನಗಳು ಒಟ್ಟಿಗೆ ನಾಪತ್ತೆಯಾಗಿರುವುದು ಆತಂಕಪಡುವಂತಾಗಿದೆ, ಇನ್ನೆರಡು ದಿನದಲ್ಲಿ ದನಗಳ್ಳ ಆರೋಪಿಗಳನ್ನು ಪತ್ತೆ ಹಚ್ಚಬೇಕು ಇಲ್ಲದಿದ್ದರೇ ಸ್ಥಳೀಯ ರೈತರೊಂದಿಗೆ ಬೈಂದೂರು ಪೋಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕುಂದಾಪುರ ತಾಲೂಕು ರೈತ ಸಂಘದ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ, ಕಾರ್ಮಿಕ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಜಂಟಿಯಾಗಿ ಎಚ್ಚರಿಸಿದ್ದಾರೆ. ವೇದಿಕೆಯ ಬೈಂದೂರು ವಲಯ ಅಧ್ಯಕ್ಷ ಪ್ರದೀಪ ದೇವಾಡಿಗ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಶೀಘ್ರ ಆರೋಪಿಗಳನ್ನು ಬಂಧಿಸಬೇಕು. ಅಲ್ಲದೇ ಮುಂದಿನ ದಿನದಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Exit mobile version