Kundapra.com ಕುಂದಾಪ್ರ ಡಾಟ್ ಕಾಂ

ಸಾಹಿತಿ ಶಾಂತಿ ಕೆ. ಅಪ್ಪಣ್ಣ ಅವರಿಗೆ ಡಾ ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಹಿತ್ಯವು ಮೊದಲಾಗಿ ಮಾನವೀಯ ಮತ್ತು ಸಾಮಾಜಿಕ ನೆಲೆಗಳನ್ನು ತನ್ನ ರಚನೆಯಲ್ಲಿ ಹೆಚ್ಚೆಚ್ಚು ವ್ಯಕ್ತಪಡಿಸಬೇಕು. ಎಂದು ಡಾ ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಶಾಂತಿ ಕೆ.ಅಪ್ಪಣ್ಣ ಅವರು ಅಭಿಪ್ರಾಯಪಟ್ಟರು.

ಅವರು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ಡಾ.ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಸಾಹಿತ್ಯ ಮತ್ತು ಸಾಹಿತಿ ಯಾವುದೇ ಪೂರ್ವಾಗ್ರಹಕ್ಕೆ ಒಳಗಾಗದೆ ಸಮಾಜದ ಮಾನವೀಯ ನೆಲೆಗಳಿಗೆ ಸ್ಪಂದಿಸುವ ಹೃದಯವಂತಿಕೆ ಸಾಧ್ಯವಾಗಿಸಿಕೊಳ್ಳಬೇಕು. ತನ್ನ ಮಿತಿಯಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಅರಿತು ನಡೆಯಬೇಕು. ನಿರ್ಧಿಷ್ಠವಾದ ನಿರ್ಧಾರಗಳಿಗೆ ಜೋತುಬೀಳದೆ ಸೃಜನಶೀಲತೆಗೆ ತನ್ನ ಬರವಣಿಗೆಯಲ್ಲಿ ಪ್ರಾಮುಖ್ಯತೆಯನ್ನು ನೀಡಬೇಕು. ಬರವಣಿಗೆ ಸ್ವಭಾವವಾಗಿದೆ. ಅದನ್ನು ಕರಗತ ಮಾಡಿಕೊಳ್ಳಬೇಕಾದರೆ ನಮ್ಮ ಒಳಗಣ್ಣನ್ನು ತೆರೆದು ನೋಡಬೇಕು. ಪ್ರೋತ್ಸಾಹಿಸಬೇಕು ಪೋಷಿಸಬೇಕು. ಹಾಗೆಯೇ ಈ ಪ್ರಶಸ್ತಿಯು ನನ್ನ ಬರವಣಿಗೆಯ ಜವಾಬ್ದಾರಿಗಳನ್ನು ಹೆಚ್ಚಿಸಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಹೆಚ್.ಶಾಂತಾರಾಮ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಹಿತ್ಯವನ್ನು ಓದುವಂತಹ ಪ್ರವೃತ್ತಿ ಬೆಳೆದುಬರಬೇಕು. ನಮ್ಮ ವಿದ್ಯಾಸಂಸ್ಥೆಗಳಲ್ಲಿ ಉತ್ತಮವಾದ ಗ್ರಂಥಾಲಯವಿದೆ. ಅದನ್ನು ಉಪಯೋಗಿಸಿಕೊಂಡು ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳಬೇಕು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಡಾ.ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಶಾಂತಿ ಕೆ.ಅಪ್ಪಣ್ಣ ಅವರ ಮನಸು ಅಭಿಸಾರಿಕೆ ಕುರಿತು ಮಾತನಾಡಿದ ಧಾರವಾಡದ ಡಾ.ವಿನಯ ಒಕ್ಕುಂದ ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆಯನ್ನು ಕೂಡಿಹಾಕುವ ಪ್ರಯತ್ನ ಕೃತಿಯಲ್ಲಿದೆ. ಕನ್ನಡ ಸಾಹಿತ್ಯದ ಪೂರ್ವ ಪರಂಪರೆಯ ಪ್ರಧಾನ ಸಾಹಿತ್ಯ ಮತ್ತು ಮಹಿಳಾ ಸಾಹಿತ್ಯಗಳ ಎಷ್ಟೋ ಕಥೆಗಳು ಈ ಕಥೆಗಳಲ್ಲಿ ಎಳೆಯಾಗಿ ಬಂದಿದೆ. ಸಣ್ಣಕಥೆಗಳು ಬದುಕಿನ ಸಂಗತಿಗಳನ್ನು ಶೋಧಿಸಿ ಅದಕ್ಕೊಂದು ಚೆಂದದ ರೂಪ ಕೊಡುತ್ತವೆ. ಆತ್ಮಗಳ ಛಾಯಾಗ್ರಹಣವೇ ಇಲ್ಲಿ ನಡೆಯುತ್ತವೆ. ಇವರ ಪುಸ್ತಕವು ಪರಂಪರೆಯ ರಚನೆಗಳ ಸತ್ವವನ್ನು ದಾಖಲಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿವೆ. ಹೆಣ್ಣಿನ ಸವಾಲುಗಳನ್ನು ಚಿತ್ರೀಕರಿಸುತ್ತವೆ. ಹಳ್ಳಿ, ನಗರ ಮತ್ತು ಅತಿನಾಗರಿಕತೆಗಳ ನಡುವೆ ಸಮತೋಲನಕಾಯ್ದುಕೊಳ್ಳುವ ಪ್ರಯತ್ನವಿಲ್ಲಿ ಆಗಿದೆ. ಒಟ್ಟಾರೆ ಇದೊಂದಿ ಶ್ರೇಷ್ಠ ಕೃತಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಡಾ.ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾದ ಜಾನಕಿ ಬ್ರಹ್ಮಾವರ, ಕೋಟ ಶಿವಾನಂದ ಕಾರಂತ ಮತ್ತು ಪ್ರೊ. ವಸಂತ ಬನ್ನಾಡಿ ಉಪಸ್ಥಿತರಿದ್ದರು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಡಾ.ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಆಯ್ಕೆ ಸಮಿತಿಯ ಸಂಚಾಲಕರಾದ ಧಾ.ರೇಖಾ ಬನ್ನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ.ಗೊಂಡ ವಂದಿಸಿದರು. ಕನ್ನಡ ಉಪಾನ್ಯಾಸಕ ರಂಜಿತ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version