Kundapra.com ಕುಂದಾಪ್ರ ಡಾಟ್ ಕಾಂ

ಸ್ವಾತಂತ್ರ್ಯ ಹೋರಾಟದ ಕಥೆ ಹಾಗೂ ಹಳ್ಳಿಗಳ ವಾಸ್ತವವನ್ನು ಜನಕ್ಕೆ ತಲುಪಿಸಲು ಮಾಧ್ಯಮ ವಿಫಲ: ಪಿ. ಸಾಯಿನಾಥ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಇಂದಿನ ಸರಕಾರ ಹಾಗೂ ಮಾಧ್ಯಮಗಳು ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಇಂದಿನ ಜನಾಂಗಕ್ಕೆ ತಲುಪಿಸಲು ವಿಫಲವಾಗುತ್ತಿವೆ. ಇನ್ನು ನಾಲ್ಕೈದು ವರ್ಷಗಳಲ್ಲಿ ಹೊಸ ತಲೆಮಾರಿಗೆ ನಮ್ಮ ಸ್ವಾತಂತ್ರ್ಯ ಹೋರಾಟದ ಕಥನಗಳನ್ನು ತಲುಪಿಸಬಲ್ಲವರು ಇಲ್ಲವಾದ ಬಳಿಕ, ಸ್ವಾತಂತ್ರ್ಯ ಹೋರಾಟ ಹಾಗೂ ಹೋರಾಟಗಾರರೊಂದಿಗಿನ ದೇಶದ ಕೊನೆಯ ಕೊಂಡಿಯೂ ಕಳೆದು ಹೋಗಲಿದೆ. ಈಗಾಗಲೇ ದೇಶದ ಸ್ವಾತಂತ್ರ್ಯ ಹೋರಾಟದ ಭವ್ಯ ಇತಿಹಾಸದ ಬಗ್ಗೆ ಯಾವುದೇ ಮಾಹಿತಿಯೇ ಇಲ್ಲದ ಯುವಜನಾಂಗವೊಂದು ನಮ್ಮ ಮುಂದಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪಾಲಗುಮ್ಮಿ ಸಾಯಿನಾಥ್ ಕಳವಳ ವ್ಯಕ್ತಪಡಿಸಿದರು.

ಉಡುಪಿ ಪುರಭವನದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ವತಿಯಿಂದ ತಲ್ಲೂರ್ಸ್ ಇನ್ಫೊವ್ಯಾಲಿಡೇಷನ್ಸ್‌ನ ದಶಮಾನೋತ್ಸವದ ಅಂಗವಾಗಿ ನಡೆದ ತಲ್ಲೂರು ನುಡಿಮಾಲೆ ‘ಕರಾವಳಿ ಕಟ್ಟು’ ದತ್ತಿ ಉಪನ್ಯಾಸ ಮಾಲೆಯಲ್ಲಿ ‘ಡಿಜಿಟಲ್ ಯುಗದಲ್ಲಿ ಗ್ರಾಮೀಣ ಭಾರತ ಕಥನ’ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡುತ್ತಾ “ದೇಶದ ಗ್ರಾಮೀಣ ಭಾಗದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ನೂರಾರು ಕಥೆಗಳನ್ನು, ಇತಿಹಾಸವನ್ನು ನಾವಿಂದು ಓದುವುದಿಲ್ಲ. ಭಾರತ ತನ್ನ ಬಹುತ್ವವನ್ನು ಅತ್ಯಂತ ವೇಗವಾಗಿ ಕಳೆದುಕೊಳ್ಳುತ್ತಿದೆ. ಭಾರತದ ಗ್ರಾಮೀಣ ಪ್ರದೇಶಗಳು ಭೂಮಿಯ ಮೇಲಿನ ಅತ್ಯಂತ ಸಂಕೀರ್ಣ ಭಾಗವಾಗಿದೆ. ಭಾಷೆ ಮತ್ತು ಸ್ಥಳೀಯ ಉದ್ಯೋಗಗಳು ನಶಿಸುವ ಮೂಲಕ ಗ್ರಾಮೀಣ ಭಾರತದ ವೈವಿಧ್ಯತೆಗೆ ಅತೀ ದೊಡ್ಡ ಅಪಾಯ ಎದುರಾಗುತ್ತಿದೆ ಎಂದರು.

ಮಹಾರಾಷ್ಟ್ರದ ಸತಾರ ಜಿಲ್ಲೆಯ ಸಾಂಗ್ಲಿಯಲ್ಲಿರುವ ೯೪ರ ಹರೆಯ ಸ್ವಾತಂತ್ರ್ಯ ಹೋರಾಟಗಾರ ರಾಮಚಂದ್ರ ಶ್ರೀಪತಿ ಲಾಡ್‌ನಂಥವರ ಹೋರಾಟದ ಕಥೆ ನಮಗೆ ಬೇಡವಾಗಿದೆ. ಸತಾರದಲ್ಲಿ ಲಾಡ್ ನೇತೃತ್ವದಲ್ಲಿ ಪ್ರತಿ ಸರಕಾರ್ ರಚಿಸಿ ತೂಫಾನ್ ಸೇನೆ ಕಟ್ಟಿ ಬ್ರಿಟಿಷರಿಗೆ ೧೯೪೩ರಲ್ಲಿ ಸಡ್ಡುಹೊಡೆದ ರೋಚಕ ಕಥೆಯನ್ನು ಕೇಳುವವರೇ ಇಲ್ಲವಾಗಿದ್ದಾರೆ. ತಮ್ಮ ಪ್ರಾಂತ್ಯದಲ್ಲಿ ಸಾಗುತ್ತಿದ್ದ ರೈಲನ್ನು ತಡೆದು ಅದರಲ್ಲಿದ್ದ ಸರಕಾರದ ನೌಕರರಿಗೆ ಸಾಗಿಸುತ್ತಿದ್ದ ಸಂಬಳದ ದುಡ್ಡನ್ನು ದೋಚಿದ್ದನ್ನು, ಈಗಲೂ ಅದನ್ನು ಅಷ್ಟೇ ಜೋರಾಗಿ ಸಮರ್ಥಿಸಿಕೊಂಡು ರಸವತ್ತಾಗಿ ವರ್ಣಿಸುವ ಲಾಡ್‌ರ ಮಾತನ್ನು ಕೇಳುವವರೇ ಇಲ್ಲವಾಗಿದ್ದಾರೆ ಎಂದರು.

ಕಳೆದ ೫೦ ವರ್ಷಗಳಲ್ಲಿ ದೇಶದಲ್ಲಿ ೨೫೫ ಭಾರತೀಯ ಭಾಷೆಗಳು ಶಾಶ್ವತವಾಗಿ ಅಳಿದುಹೋಗಿವೆ. ತಾನು ಒರಿಸ್ಸಾದ ಕಾಳಹಂಡಿಯಿಂದ ಕೊರಾಪಟ್ಣದ ೨೪೦ ಕಿ.ಮೀ.ದೂರವನ್ನು ಕ್ರಮಿಸುವಾಗ ೪೦ ವಿಧದ ಭಾಷೆಗಳನ್ನು ಜನ ಮಾತನಾಡುವುದನ್ನು ಕಿವಿಯಾರೆ ಕೇಳಿದ್ದೇನೆ. ಆದರೆ ಇಂದು ಈ ವೈವಿಧ್ಯತೆ ಎಂಬುದು ಶಾಶ್ವತವಾಗಿ ಅಳಿಸಿಹೋಗುತ್ತಿದೆ. ತ್ರಿಪುರದಲ್ಲಿ ಒಂದು ಆದಿವಾಸಿಗಳ ಗುಂಪಿನ ಕೇವಲ ೩೦೦ ಮಂದಿ ಮಾತ್ರ ಉಳಿದಿದ್ದು, ಇವರಲ್ಲಿ ಕೇವಲ ಏಳು ಮಂದಿ ಮಾತ್ರ ಅವರ ಭಾಷೆಯನ್ನು ಮಾತನಾಡಬಲ್ಲವರಾಗಿದ್ದಾರೆ. ಅವರೊಂದಿಗೆ ಆ ಭಾಷೆಯೂ ಅಳಿಯುತ್ತದೆ ಎಂದರು.

ಮಾಧ್ಯಮಗಳು ಇಂದು ದೇಶದ ಒಟ್ಟು ಜನಸಂಖ್ಯೆಯ ಶೇ.೭೦ರಷ್ಟಿರುವ ವರ್ಗವನ್ನು ಸಂಪೂರ್ಣವಾಗಿ ಕಡೆಗಣಿಸಿವೆ. ಅಭಿವೃದ್ಧಿ, ಬೆಳವಣಿಗೆ ಎಂಬುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂಬ ಸ್ಥಿತಿ ಎದುರಾಗಿದೆ ಎಂದರು. ದೇಶದ ೬೭ರಿಂದ ೭೦ಶೇ. ಮಂದಿ ಗ್ರಾಮೀಣ ಪ್ರದೇಶದಲ್ಲಿದ್ದು, ಅವರಿಗೆ ಮಾಧ್ಯಮಗಳಲ್ಲಿ ಪ್ರಾಮುಖ್ಯತೆಯೇ ಸಿಗುತ್ತಿಲ್ಲ. ಅದು ಸಹ ರೈತರ ಆತ್ಮಹತ್ಯೆ ಅಥವಾ ದೊಡ್ಡ ಮಟ್ಟದ ದುರಂತ ಸುದ್ದಿಗಳಿಗೆ ಮಾತ್ರ ಸಿಮಿತವಾಗಿದೆ. ದೆಹಲಿ ಮುಂಬೈ ಚೆನೈನಂತಹ ಮಹಾನಗರದ ಸುದ್ದಿಗಳಿಗೆ ಹೆಚ್ಚಿನ ಮಹತ್ವ ದೊರಕುತ್ತಿರುವ ಪರಿಣಾಮ ದೇಶದ ಯುವ ಜನತೆಗೆ ಶೇ.೭೦ರಷ್ಟು ಜನರ ಸ್ಥಿತಿಗತಿಗಳ ಬಗೆಗೆ ಮಾಹಿತಿಯೇ ಇಲ್ಲದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಪಿ.ಸಾಯಿನಾಥ್ ಅವರ ಉಪನ್ಯಾಸದ ಬಳಿಕ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ, ಕತೆಗಾರ, ಅರ್ಥಶಾಸ್ತ್ರಜ್ಞ ಪ್ರೊ.ಎಂ.ಎಸ್ ಶ್ರೀರಾಮ್, ಲೇಖಕ, ಅಂಕಣಕಾರ, ಪ್ರಾಧ್ಯಾಪಕ ಡಾ ಎ.ನಾರಾಯಣ ಅವರು ಸಂವಾದ ನಡೆಸಿದರು. ಪತ್ರಕರ್ತ ಜಿ.ಎನ್.ಮೋಹನ್ ಸಂವಾದ ನಡೆಸಿಕೊಟ್ಟರು.

ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಟ್ರಸ್ಟಿಗಳಲ್ಲೊಬ್ಬರಾದ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಅಂಕಣ ಬರಹಗಳ ಸಂಗ್ರಹ ‘ನುಣ್ಣನ್ನಬೆಟ್ಟ’ವನ್ನು ಪಿ.ಸಾಯಿನಾಥ್ ಅವರು ಬಿಡುಗಡೆಗೊಳಿಸಿದರು. ಬಳ್ಳಾರಿ ಕೃಷ್ಣದೇವರಾಯ ವಿವಿಯ ಪ್ರೊ.ರಾಬರ್ಟ್ ಜೋಸ್ ಪುಸ್ತಕವನ್ನು ಪರಿಚಯಿಸಿ ದರೆ, ಸತೀಶ್ ಚಪ್ಪರಿಕೆ ಅತಿಥಿಗಳನ್ನು ಪರಿಚಯಿಸಿದರು. ಖ್ಯಾತ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ಅತಿಥಿಗಳನ್ನು ಸ್ವಾಗತಿಸಿದರು. ರಾಜಾರಾಂ ತಲ್ಲೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಐವನ್ ಡಿಸಿಲ್ವ ಹಾಗೂ ರಾಮಕೃಷ್ಣ ಹೇರ್ಳೆ ವಂದಿಸಿದರು. ಉಪನ್ಯಾಸಕಿ ಸುಮಾ ಕಾರ್ಯಕ್ರಮ ನಿರೂಪಿಸಿದರು.

Exit mobile version