Kundapra.com ಕುಂದಾಪ್ರ ಡಾಟ್ ಕಾಂ

ಸಂಗೀತ ಹೃದಯಕ್ಕೆ ಹತ್ತಿರವಾದ ಭಾಷೆ: ಎಸ್. ಜನಾರ್ದನ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಂಗೀತ ಕೇಳುಗರ ಮನಸ್ಸನ್ನು ಅರಳಿಸುತ್ತದೆ. ಕಿವಿ ಮತ್ತು ಹೃದಯವನ್ನು ತೆರೆದು ಆಸ್ವಾದಿಸುವ ಗುಣ ಅದಕ್ಕೆ ಬೇಕು. ಮನಸ್ಸನ್ನು ಕೇಂದ್ರಿತವಾಗಿಟ್ಟುಕೊಂಡು ಸಂಗೀತದಿಂದ ಪರಿವರ್ತನೆಯೂ ಸಾಧ್ಯವಿದೆ. ಉತ್ತಮ, ಆಹ್ಲಾದಕರ ಸಂಗೀತದಿಂದ ಸಕಾರಾತ್ಮಕ ಪರಿಣಾಮವೂ ಆಗಬಲ್ಲುದು ಎಂಬುದನ್ನು ಪ್ರಯೋಗಗಳಿಂದ ಕಂಡುಕೊಳ್ಳಲಾಗಿದೆ. ಸಂಗೀತವು ಹೃದಯಕ್ಕೆ ಸಾಕಷ್ಟು ಹತ್ತಿರವಾದ ಭಾಷೆಯಾಗಿದೆ ಎಂದು ಮರವಂತೆ ಸಾಧನಾ ಜನಾರ್ದನ ಪ್ರತಿಷ್ಠಾನ ರಿ. ಪ್ರವರ್ತಕ, ಪತ್ರಕರ್ತ ಎಸ್. ಜನಾರ್ದನ ಹೇಳಿದರು.

ಮರವಂತೆ ಸಾಧನಾ ಜನಾರ್ದನ ಪ್ರತಿಷ್ಠಾನ ರಿ. ಆಶ್ರಯದಲ್ಲಿ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಕಲಾವಿದ ಶಂಭು ಗುಡ್ಡಮ್ಮಾಡಿ ಮತ್ತು ಬಳಗದವರಿಂದ ನಾಡಾ-ಗುಡ್ಡೆಹೋಟೆಲ್‌ನ ರೆ. ಫಾ. ರಾಬರ್ಟ್ ಝಡ್ ಎಂ. ಡಿಸೋಜ ಸ್ಮಾರಕ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಬುಧವಾರ ಮಧ್ಯಾಹ್ನ ಜರುಗಿದ ವಿಶೇಷ ಘಟಕ ಯೋಜನೆಯಡಿ ಪ್ರಾಯೋಜಿತ ಸುಗಮ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿ ಪತ್ರಕರ್ತ ರಾಜೇಶ್ ಕೆ. ಸಿ. ಮಾತನಾಡಿ ಯುವಜನರಲ್ಲಿ ಸಂಗೀತದ ಅಭಿರುಚಿ ಬೆಳೆಯಬೇಕು. ಶುದ್ಧ, ಶಾಸ್ತ್ರೀಯ ಮಾದರಿಯ ಸಂಗೀತವನ್ನು ಪ್ರೀತಿಸುವ ಮನೋಭಾವ ಹೆಚ್ಚಬೇಕು ಎಂದರು.

ಪ್ರಾಂಶುಪಾಲ ಮನೋಹರ ಆರ್. ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಗೀತಕ್ಕೆ ಮನಸ್ಸನ್ನು ಪರಿವರ್ತಿಸುವ ಗುಣವಿದೆ. ಶೃದ್ಧೆ ಮತ್ತು ಮಾನಸಿಕ ಏಕಾಗ್ರತೆಗೆ ಸಂಗೀತ ಸಹಕಾರಿ ಎಂದರು. ಮುಖ್ಯ ಅತಿಥಿ ರೇಷ್ಮಾ ಕಿರಣ್ ಲೋಬೋ, ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿಗಳಾದ ಪ್ರೇಮರಾಜ್, ಶ್ರೀಕಾಂತ್, ಡೆಬ್ರಿಲ್, ಕಿಶೋರ್ ಮತ್ತು ಅಂತೋನಿ ಮೊದಲಾದವರು ಉಪಸ್ಥಿತರಿದ್ದರು.

ಕಿರಿಯ ತರಬೇತಿ ಅಧಿಕಾರಿ ದಿನೇಶ್ ಕೆ. ಸ್ವಾಗತಿಸಿದರು. ಆಕಾಶವಾಣಿ ಕಲಾವಿದ ಚಂದ್ರ ಕೆ. ಹೆಮ್ಮಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಿರಿಯ ತರಬೇತಿ ಅಧಿಕಾರಿ ರಾಘವೇಂದ್ರ ಆಚಾರ್ಯ ಬೇಲ್ತೂರು ಕಾರ್ಯಕ್ರಮ ನಿರ್ವಹಿಸಿದರು. ಕಿರಿಯ ತರಬೇತಿ ಅಧಿಕಾರಿ ವಿನಾಯಕ ಕಾಮತ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಂಭು ಗುಡ್ಡಮ್ಮಾಡಿ ಮತ್ತು ಸಹಗಾಯಕರು ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಗೀತೆಗಳನ್ನು ಪ್ರಸ್ತುತಪಡಿಸಿದರು. ಪಕ್ಕವಾದ್ಯದಲ್ಲಿ ಕೃಷ್ಣ ಕಾಮತ್ ಕೀಬೋರ್ಡ್ ಮತ್ತು ಅಶೋಕ್ ಸಾರಂಗ ರಿದಮ್ ಪ್ಯಾಡ್‌ನಲ್ಲಿ ಸಹಕರಿಸಿದರು.

 

Exit mobile version