Kundapra.com ಕುಂದಾಪ್ರ ಡಾಟ್ ಕಾಂ

ಪರಸ್ಪರರೊಂದಿಗೆ ಸ್ನೇಹ ವಿಶ್ವಾಸದಿಂದ ಬದುಕುವುದು ಅಗತ್ಯ: ವನಿತಾ ಸ್ನೇಹ ಸಮ್ಮಿಲನದಲ್ಲಿ ವರಮಹಾಲಕ್ಷ್ಮೀ ಹೊಳ್ಳ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಹಕಾರಿ ಸಂಘಗಳು ದೈನಂದಿನ ಆರ್ಥಿಕ ವ್ಯವಹಾರಗಳೊಂದಿಗೆ ಸಾಮಾಜಮುಖಿ ಚಟುವಟಿಕೆಗಳಲ್ಲಿಯೂ ಗಮನ ಹರಿಸಿದಾಗ ಹೆಚ್ಚಿನ ಪ್ರಗತಿ ಕಾಣಲು ಸಾಧ್ಯವಿದೆ. ಸದಸ್ಯರು ಸ್ವಾವಲಂಭಿ ಬದುಕಿಗೆ ಅಗತ್ಯವಾದ ನೆರವು ಪಡೆದು, ಕೌಶಲಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಪರಸ್ಪರರೊಂದಿಗೆ ಸ್ನೇಹ ವಿಶ್ವಾಸದಿಂದ ಬದುಕುವುದೂ ಅಗತ್ಯವಾಗಿದೆ ಎಂದು ಉಪ್ಪುಂದ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ಯು. ವರಮಹಾಲಕ್ಷ್ಮೀ ಹೊಳ್ಳ ಹೇಳಿದರು.

ಅವರು ಉಪ್ಪುಂದ ಶಂಕರ ಕಲಾಮಂದಿರ ಆವರಣದಲ್ಲಿ ಜರುಗಿದ ವನಿತಾ ಸ್ನೇಹ ಸಮ್ಮಿಲನ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿವರ್ಷ ಆಯೋಜಿಸಲಾಗುತ್ತಿರುವ ವನಿತಾ ಸ್ನೇಹ ಸಮ್ಮಿಲನ ಸಂಘದ ಸದಸ್ಯರ ಉತ್ತಮ ಭಾಂದವ್ಯಕ್ಕೆ ಸಾಕ್ಷಿಯಾಗಿದೆ ಎಂದರು.

ಹಿರಿಯ ಸಾಹಿತಿ ಯು. ಚಂದ್ರಶೇಖರ ಹೊಳ್ಳ, ಬೈಂದೂರು ಇನ್ನರ್‌ವ್ಹೀಲ್ ಕ್ಲಬ್ ಲಿಟರಸಿ ಕೋ ಆರ್ಡಿನೇಟರ್ ಸುಜಾತಾ ರಾವ್ ಉಪಸ್ಥಿತರಿದ್ದರು. ಬೈಂದೂರು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಕೆ. ಶಂಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ರಂಗೋಲಿ, ಆಶುಭಾಷಣ, ರಸಪಶ್ನೆ, ಕರಕುಶಲ ವಸ್ತು ತಯಾರಿ, ದಾಸರ ಪದಗಳು, ಹಿಂದಿ ಗೀತೆ, ಸಮೂಹಗಾನ ಮುಂತಾದ ಸ್ವರ್ಧಾ ವಿಜೇತ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಕಾವೇರಿ ವಸ್ತ್ರ ವಿನ್ಯಾಸ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. ರಮೇಶ್ ವೈದ್ಯ ಸ್ವಾಗತಿಸಿ, ವೀಣಾ ಶ್ಯಾನುಭೋಗ್ ವಂದಿಸಿದರು. ಸಾವಿತ್ರಿ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.

Exit mobile version