Kundapra.com ಕುಂದಾಪ್ರ ಡಾಟ್ ಕಾಂ

ಮಕ್ಕಳಲ್ಲಿ ಸಂಸ್ಕೃತಿಯ ಅರಿವು ಮೂಡಿಸಿ: ಬಣಕರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಷನ್ (ರಿ.) ಕುಂದಾಪುರ ಅಭಿಯೋಗ ಇಲಾಖೆ ಕುಂದಾಪುರ, ಹಿರಿಯ ನಾಗರಿಕರ ವೇದಿಕೆ ಕುಂದಾಪುರ ಇವರ ಸಂಯಕ್ತ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಕುಂದಾಪುರದ ಹೊಟೇಲ್ ಪಾರಿಜಾತ ಸ್ನೇಹ ಸಭಾಂಗಣದಲ್ಲಿ ಜರುಗಿತು.

೨ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಚಂದ್ರಶೇಖರ ಬಣಕರ ಅವರು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ವಿಶ್ವ ಹಿರಿಯರ ದಿನವನ್ನು ಆಚರಿಸುವ ಅಗತ್ಯ ಇತ್ತೇ ಇನ್ನುವ ಪ್ರಶ್ನೆ ಎಲ್ಲರಿಗೂ ಮೂಡುವುದು ಸಹಜ. ಆದರೆ ಇಂದು ಹಿರಿಯ ನಾಗರಿಕರ ಮೇಲೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಹಾಗೂ ಅವರಿಗೆ ಸಾಮಾಜಿಕ ಬೆಂಬಲ ಸೂಚಿಸಲು ಸರಕಾರ ಈ ಕಾನೂನುನ್ನು ಜಾರಿಗೆ ತಂದಿದೆ. ನಮ್ಮ ಮಕ್ಕಳಿಗೆ ಚಿಕ್ಕಿಂದಿನಲ್ಲೇ ಸಂಸ್ಕ್ರತಿಯ ಬಗ್ಗೆ ಅರಿವು ಉಂಟು ಮಾಡುವ ಬಗ್ಗೆ ಜಾಗೃತಿ ಮೂಡಿಸಿದರೆ ಇಂತಹ ಕಾನೂನುನ್ನು ಜಾರಿಗೆ ತರುವ ಅವಶ್ಯಕತೆ ಇಲ್ಲವಾಗಿತ್ತು ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಕುಂದಾಪುರ ಬಾರ್ ಅಸೋಸಿಯೇಷನ್ (ರಿ.) ಕುಂದಾಪುರ ಇದರ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ ಮಾತನಾಡಿ, ದೇಶದಲ್ಲಿ ಬಹಳಷ್ಟು ಕಾನೂನುಗಳು ಇದ್ದರೆ ಸಾಕಾಗುವುದಿಲ್ಲ, ಅವುಗಳು ಜನರನ್ನು ಮುಟ್ಟಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಬಹಳಷ್ಟು ಸಹಕಾರಿ. ಕಾನೂನು ಅರಿವು ಕಾರ್ಯಕ್ರಮದಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಕುಂದಾಪುರ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಕೆ.ಜಿ. ರಮಾನಂದ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರದ ಹಿರಿಯ ನ್ಯಾಯವಾದಿ ರಾಮದಾಸ್ ನಾಯ್ಕ ಅವರು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಮಹತ್ವ ಹಾಗೂ ಇದು ಇಂದು ಎಷ್ಟು ಪ್ರಸುತ್ತ ಎನ್ನುವುದರ ಬಗ್ಗೆ ಮಾಹಿತಿ ನೀಡಿದರು. ಪತ್ರಕರ್ತ ಯು.ಎಸ್. ಶೆಣೈ ಅವರು ತಮ್ಮ ಅನುಭವವನ್ನು ಹಂಚಿಸಿಕೊಂಡರು. ಹಿರಿಯ ನಾಗರಿಕ ವೇದಿಕೆಯ ಪುಂಟಲೀಕ ಗಾಣಿಗ ಸ್ವಾಗತಿಸಿ, ನ್ಯಾಯವಾದಿ ಧನಂಜಯ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Exit mobile version