Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಮಧ್ಯಸ್ಥಿಕೆದಾರರ ಮತ್ತು ಸಂಧಾನಕಾರರ ದಿನಾಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಷನ್ (ರಿ.) ಕುಂದಾಪುರ ಮತ್ತು ಅಭಿಯೋಗ ಇಲಾಖೆ ಕುಂದಾಪುರ ಇವರ ಸಂಯಕ್ತ ಆಶ್ರಯದಲ್ಲಿ ಮಧ್ಯಸ್ಥಿಕೆದಾರರ ಮತ್ತು ಸಂಧಾನಕಾರರ ದಿನಾಚರಣೆ ಕುಂದಾಪುರ ಬಾರ್ ಅಸೋಸಿಯೇಶನ್ ಸಭಾಂಗಣದಲ್ಲಿ ಜರುಗಿತು.

ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಇದರ ಅಧ್ಯಕ್ಷರಾದ, ಗೌರವಾನ್ವಿತ ಡಿ.ಪಿ ಕುಮಾರ ಸ್ವಾಮಿ ಇವರು ಕಾರ್ಯಕ್ರಮವನ್ನು ಉದ್ಘಾಟಸಿ, ಯಾವುದೇ ಪ್ರಕರಣಗಳನ್ನು ಸಂಧಾನ ಮಾಡುವ ಮೊದಲು ಮಧ್ಯಸ್ಥಿಕೆದಾರರು ಪಕ್ಷಗಾರರ ಮನೋಸ್ಥಿತಿಯನ್ನು ಮೊದಲಿಗೆ ಅರಿತು ಸಂಧಾನ ಪ್ರಕ್ರಿಯೆಯನ್ನು ನಡೆಸಿದರೆ ಅವರು ನಡೆಸಿರುವ ಸಂಧಾನ ಯಶ್ವಸಿಯಾಗಲು ಸಾಧ್ಯ. ಎಂದು ಹೇಳಿದರು.

ಕುಂದಾಪುರ ಬಾರ್ ಅಸೋಸಿಯೇಷನ್ (ರಿ.) ಕುಂದಾಪುರ ಇದರ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಮಧ್ಯಸ್ಥಿಕೆಯಿಂದ ರಾಜಿಯಾದ ಪ್ರಕರಣಗಳಲ್ಲಿ ಸೋಲು-ಗೆಲುವಿನ ಪ್ರಶ್ನೆ ಉದ್ಭವಿಸದೇ ಇರುವುದರಿಂದ ಕಕ್ಷಿಗಾರರಲ್ಲಿ ದ್ವೇಷ ಭಾವನೆ ಇರುವುದಿಲ್ಲ ಬದಲಾಗಿ ಇಬ್ಬರ ನಡುವೆ ಸಾಮರಸ್ಯದ ಭಾವನೆ ಮೂಡುದಲ್ಲದೇ ನ್ಯಾಯಾಲಯದ ಅಮೂಲ್ಯ ಸಮಯ ಉಳಿಯುತ್ತದೆ ಹಾಗೂ ಕಕ್ಷಿಗಾರರ ಅಮೂಲ್ಯ ಸಮಯ ಹಾಗೂ ಹಣ ಉಳಿತಾಯ ಸಾಧ್ಯ, ಯಾವುದೇ ಪ್ರಕರಣವನ್ನು ರಾಜಿಯಿಂದ ಮುಕ್ತಾಯಗೊಳಿಸಲು ಮಧ್ಯಸ್ಥಿಕೆದಾರರ ಕೌಶಲ್ಯ ಬಹಳ ಮುಖ್ಯ ಅದರ ಜೊತೆಗೆ ವಕೀಲರ ಸಹಕಾರ ಕೂಡಾ ಬಹಳ ಮುಖ್ಯ ಎಂದರು.

ಸಂಪನ್ಮೂಲ ವ್ಯಕ್ತಿ, ಕುಂದಾಪುರದ ವಕೀಲರಾದ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಇವರು ಮಧ್ಯಸ್ಥಿಕೆದಾರರನ್ನು ಪಕ್ಷಗಾರರಿಗೆ ಪರಿಚಯ ಮಾಡಿಕೊಳ್ಳುವ ಕಲೆಯೂ ಕೂಡಾ ಪ್ರಕರಣಗಳು ರಾಜಿಯಾಗಲು ಪ್ರಧಾನ ಪಾತ್ರ ವಹಿಸುತ್ತದೆ. ಎರಡೂ ಪ್ರಕರಣಗಳನ್ನು ಸಮಾನವಾಗಿ ಕಾಣುವ ಗುಣ ಮಧ್ಯಸ್ಥಿಕೆದಾರನಲ್ಲಿರಬೇಕು. ಮಧ್ಯಸ್ಥಿಕೆ ಮಾಡುವಾಗ ಮಧ್ಯಸ್ಥಿಕೆಗಾರರ ಮನಸ್ಸು ಶಾಂತ ಚಿತ್ತದಿಂದ ಇದ್ದು ತಾಳ್ಮೆಯಿಂದ ಎರಡೂ ಪಕ್ಷಗಾರರ ಅಹವಾಲುವನ್ನು ಕೇಳಿ ತನ್ನದೇ ಆದ ’ಕೌಶಲ್ಯ’ ದಿಂದ ಪಕ್ಷಗಾರರ ಮನವೊಲಿಸಿ ಪ್ರಕರಣಗಳನ್ನು ತೀರ್ಮಾನಿಸಲು ಸಾಧ್ಯ ಎಂದು ಹೇಳಿದರು. ಕುಂದಾಪುರದ ನ್ಯಾಯವಾದಿ ಶರತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು, ಕೈಲಾಡಿ ಬಾಲಕೃಷ್ಣ ಶೆಟ್ಟಿ ವಂದಿಸಿದರು.

 

Exit mobile version