Kundapra.com ಕುಂದಾಪ್ರ ಡಾಟ್ ಕಾಂ

ಬಡಗುತಿಟ್ಟಿನ ಸ್ತ್ರೀ ವೇಷಧಾರಿ ಶಶಿಕಾಂತ ಶೆಟ್ಟಿಗೆ ಡಾ ಹೆಚ್. ಶಾಂತಾರಾಮ್ ಯಕ್ಷಗಾನ ಪುರಸ್ಕಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಕ್ಷಗಾನದಲ್ಲಿ ಪಾತ್ರೋಚಿತ ನಟನೆ, ರಂಗನಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಪುರಾಣ ಪ್ರಸಂಗಗಳ ಜವಾಬ್ದಾರಿಯುತ ಪಾತ್ರಗಳಾದ ಭೀಷ್ಮ ವಿಜಯದ ಅಂಬೆ, ದಕ್ಷಯಜ್ಞದ ಗೌರಿ, ದ್ರೌಪದಿ ವಸ್ತ್ರಾಪಹರಣದ ದ್ರೌಪದಿ ಇತ್ಯಾದಿ ಪಾತ್ರಗಳ ಸ್ಪಷ್ಟ ಚಿತ್ರಣವನ್ನು ಒದಗಿಸಿ ಅಸಂಖ್ಯಾತ ಕಲಾಪ್ರೇಕ್ಷಕರ ಮನ ಗೆದ್ದದ್ದು ಮಾತ್ರವಲ್ಲದೆ ಕಾಲ್ಪನಿಕ ಪ್ರಸಂಗಗಳಲ್ಲಿಯೂ ತಮ್ಮ ಕಲಾ ಪ್ರೌಢಿಮೆಯನ್ನು ಪ್ರದರ್ಶಿಸುತ್ತಿರುವ ಬಡಗುತಿಟ್ಟಿನ ಯುವ ಸ್ತ್ರೀ ವೇಷಧಾರಿ ಶ್ರೀ ಶಶಿಕಾಂತ ಶೆಟ್ಟಿ ಇವರಿಗೆ ೨೦೧೭ನೇ ಸಾಲಿನ ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರ ನೀಡುವುದಾಗಿ ಪುರಸ್ಕಾರ ಸಮಿತಿಯು ನಿರ್ಧರಿಸಿದೆ.

ಇಲ್ಲಿನ ಭಂಡಾರ್‌ಕಾರ್ಸ್ ಕಾಲೇಜು ಸತತ ೪೧ ವರ್ಷಗಳಿಂದ ನವಂಬರ್ ೧ ಕನ್ನಡ ರಾಜ್ಯೋತ್ಸವದಂದು ರಾಜ್ಯೋತ್ಸವ ತಾಳಮದ್ದಳೆಯನ್ನು ನಡೆಸಿಕೊಂಡು ಬರುತ್ತಿದೆ. ಇದರೊಂದಿಗೆ ಯಕ್ಷಗಾನದಲ್ಲಿ ವಿಶಿಷ್ಟ ಸಾಧನೆಯನ್ನು ಮಾಡುತ್ತಿರುವ ಭರವಸೆಯ ಯುವ ಕಲಾವಿದರಿಗೆ ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರವನ್ನು ಸತತ ಆರು ವರ್ಷಗಳಿಂದ ನೀಡುತ್ತಾ ಬಂದಿದೆ. ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನಡೆಯಲಿರುವ ತಾಳಮದ್ದಳೆಯ ಜೊತೆಗೆ ಈ ಪುರಸ್ಕಾರ ನೀಡುವುದಾಗಿ ಕಾಲೇಜಿನ ಪ್ರಕಟಣೆ ತಿಳಿಸಿದೆ.

Exit mobile version