Kundapra.com ಕುಂದಾಪ್ರ ಡಾಟ್ ಕಾಂ

ಕುಂಭಾಶಿ ಮಕ್ಕಳ ಮನೆಯಲ್ಲಿ ಸುಗಮ ಸಂಗೀತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಾರ್ಕೂರು ರಂಗನಕೆರೆ ಹುಭಾಶಿಕ ಯುವ ಕೊರಗರ ವೇದಿಕೆ ಆಶ್ರಯದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಿರಿಜನ ಉಪಯೋಜನೆ ಪ್ರಾಯೋಜಿತ ಕಾರ್ಯಕ್ರಮದಡಿ ಕುಂಭಾಶಿ ಮಕ್ಕಳ ಮನೆಯಲ್ಲಿ ಸುಗಮ ಸಂಗೀತ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಲತಾ ಎಸ್. ಶೆಟ್ಟಿ ಸಾಮಾಜಿಕವಾಗಿ ಮತ್ತುಶೈಕ್ಷಣಿಕವಾಗಿ ಹಿಂದುಳಿದಿರುವ ಕೊರಗ ಸಮುದಾಯದ ಮಕ್ಕಳಲ್ಲಿ ಎಲ್ಲರಂತೆ ಸುಪ್ತವಾಗಿರುವ ಪ್ರತಿಭೆ ಇದೆ. ಸರಿಯಾದ ಮಾರ್ಗದರ್ಶನ ಮತ್ತು ಅವಕಾಶ ದೊರೆತರೆ ಮಾತ್ರ ಅದು ಪ್ರಕಟಗೊಳ್ಳಲು ಸಾಧ್ಯ. ಸಂಘಟನೆಗಳು ಲಭ್ಯ ನೆರವು ಪಡೆದು ಅವಕಾಶ ಕಲ್ಪಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ವಾಣಿ ಅಡಿಗ ಇಂತಹ ಕಾರ್ಯಕ್ರಮಗಳನ್ನು ಆಗಾಗ ನಡೆಸುವ ಮೂಲಕ ಕೊರಗ ಮಕ್ಕಳ ಪ್ರತಿಭಾ ಪೋಷಣೆಗೆ ಮುಕ್ತ ಅವಕಾಶ ಕಲ್ಪಿಸಬೇಕು ಎಂದರು. ಗ್ರಾಮ ಪಂಚಾಯತ್ ಸದಸ್ಯೆ ಸಾಲು, ಸಾಮಾಜಿಕ ಕಾರ್ಯಕರ್ತ ಕೊರ್ಗಿ ವಿಠಲ ಶೆಟ್ಟಿ, ಕೋಟ ಪಡುಕೆರೆ ಲಕ್ಷ್ಮೀ ಸೋಮ ಬಂಗೇರ ಪದವಿ ಕಾಲೇಜಿನ ಉಪನ್ಯಾಸಕಿ ಪ್ರಮೀಳಾ ಜೆ. ವಾಜ್, ಅಂಕೋಲೆಯ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ಶಿಕ್ಷಕಿ ಜಯಶ್ರೀ, ಜಿಲ್ಲಾ ಯುವ ಕೊರಗ ಸಂಘಟನೆಯ ಅಧ್ಯಕ್ಷ ಸುದರ್ಶನ್, ಸಮುದಾಯದ ಮುಖಂಡರಾದ ಶೇಖರ್ ಮರವಂತೆ, ಲಕ್ಷ್ಮಣ ಬೈಂದೂರು, ಗಣೇಶ್ ಬಾರ್ಕೂರು, ಗಣೇಶ್ ಕುಂದಾಪುರ ಉಪಸ್ಥಿತರಿದ್ದರು. ರಾಜೇಶ್ ಸ್ವಾಗತಿಸಿ, ಸಾವಿತ್ರಿ ವಂದಿಸಿದರು. ವಿನೀತಾ ನಿರೂಪಿಸಿದರು. ಸಮುದಾಯದ ಗಾಯಕಿ ಕು. ಅಶ್ವಿನಿ ಬಳಗ ಸುಗಮ ಸಂಗೀತ ಪ್ರಸ್ತುತಪಡಿಸಿತು.

Exit mobile version