ಕುಂದಾಪುರ: ಕುಂದಾಪುರ ಮಣ್ಣಿನ ಮಕ್ಕಳಲ್ಲಿ ಕ್ರೀಯಾಶೀಲ ವ್ಯಕ್ತಿತ್ವವಿದೆ. ನಮ್ಮ ಜನಪದೀಯ, ಸಾಂಪ್ರದಾಯಿಕ ಕಲೆಗಳಾದ ಯಕ್ಷಗಾನ, ಹೂವಿನಕೋಲು ಮುಂತಾದವುಗಳನ್ನು ಅವರಿಂದ ಅನಾವರಣಗೊಳ್ಳುವ ಪರಿಯೇ ಬೇರೆಯದ್ದಾಗಿರುತ್ತದೆ. ಕಲೆಯಲ್ಲಿ ನೈಜತೆಯನ್ನು ಕಟ್ಟಿಕೊಡುವ ಗಟ್ಟಿತನ ಅವರಲ್ಲಿದೆ ಎಂದು ಹಂಪಿ ವಿವಿ ಮಾಜಿ ಕುಲಪತಿ ಡಾ| ಬಿ. ಎ. ವಿವೇಕ ರೈ ಹೇಳಿದರು.
ಅವರು ಭಂಡಾರ್ಕಾರ್ಸ್ ಕಾಲೇಜಿನ ಸುವರ್ಣ ಮಹೋತ್ಸವದ ನೆನಪಿನ ಸಂಚಿಕೆ ‘ಹೊನ್ನ ಭಂಡಾರ’ವನ್ನು ಡಾ| ಶಾಂತಾರಾಮ್ ಬಯಲು ರಂಗಮಂಟಪದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.
ಸಾವಿರಾರು ಬರಹಗಾರರು, ಕಲಾವಿದರುಗಳನ್ನು ಸಮಾಜಕ್ಕೆ ನೀಡಿರುವ ಹೆಮ್ಮ ಭಂಡಾರ್ಕಾರ್ಸ್ ಕಾಲೇಜಿನದ್ದು. ಇಲ್ಲಿ ಶಿಕ್ಷಣದೊಂದಿಗೆ ರಂಗಭೂಮಿಗೆ ಪ್ರಾಧಾನ್ಯತೆ ನೀಡಿರುವುದು ವಿಶೇಷವಾದುದು ಎಂದು ಅವರು ನುಡಿದರು.
ಮುಖ್ಯ ಅತಿಥಿ ನಾಟಕಕಾರ ಡಾ| ಹೆಚ್. ಎಸ್. ಶಿವಪ್ರಕಾಶ್ ಮಾತನಾಡಿ ರಂಗ ಸಂಸ್ಕೃತಿ ರಂಗಭೂಮಿಯ ಪ್ರಜಾಸತ್ತಾತ್ಮಕ ಕಲೆ. ಯಾವುದೇ ದೇಶದಲ್ಲಿ ಇದಕ್ಕೆ ಅಡ್ಡಿ ಉಂಟಾದರೇ ಅದು ದೇಶದ ಪ್ರಜಾಸತ್ತಾತ್ಮಕತೆಗೆ ಉಂಟಾದ ಅಡ್ಡಿ ಎಂದೇ ಅರ್ಥ. ಆಧುನಿಕ ರಂಗಭೂಮಿ ಸಂವಹನ ಸಾಧ್ಯತೆಗಳನ್ನು ವೃದ್ಧಿಸಿಕೊಂಡು ಹೆಚ್ಚು ವಿಕೇಂದ್ರಿಕರಣಗೊಳ್ಳಬೇಕು ಎಂದರು
ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಆಡಳಿತಾಧಿಕಾರಿ ಡಾ| ಎಚ್ ಶಾಂತಾರಾಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ನಾರಾಯಣ ಶೆಟ್ಟಿ ಸ್ವಾಗತಿಸಿದರು. ಸ್ಮರಣ ಸಂಚಿಕೆಯ ಸಂಪಾದಕ ವಸಂತ ಬನ್ನಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಪ್ರಾಧ್ಯಾಪಕ ರಂಜಿತ್ ಕುಮಾರ್ ಶೆಟ್ಟಿ ನಿರೂಪಿಸಿದರು.
ಬಳಿಕ ಹಳೆ ವಿದ್ಯಾರ್ಥಿಗಳು ಮತ್ತು ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ಡಾ| ಹೆಚ್. ಎಸ್. ಶಿವಪ್ರಕಾಶ್ ರಚಿಸಿ, ಸದಾಶಿವ ನೀವಾಸಂ ನಿರ್ದೇಶಿಸಿದ ಮದುವೆ ಹೆಣ್ಣು ನಾಟಕ ಪ್ರದರ್ಶನಗೊಂಡಿತು.