Kundapra.com ಕುಂದಾಪ್ರ ಡಾಟ್ ಕಾಂ

ಸಾಹಿತ್ಯ ಓದು ಒತ್ತಡ ರಹಿತ ಜೀವನಕ್ಕೆ ನೆರವಾಗುವುದು: ಭುವನೇಶ್ವರಿ ಹೆಗಡೆ

?

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ನಮ್ಮಲ್ಲಿ ಕೀಳರಿಮೆ ಸ್ವಮರುಕ ಬೆಳೆಯಲು ಬಿಡಬಾರದು. ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಎದುರಾಗುವ ಅನೇಕ ಕಷ್ಟಗಳನ್ನು ಹಾಗೂ ಸಮಸ್ಯೆಗಳನ್ನು ಎದುರಿಸಲು ಸಾಹಿತ್ಯಗಳು ಸಹಕಾರಿಯಾಗುತ್ತದೆ. ಮನುಷ್ಯನನ್ನು ಸರಿದಾರಿಗೆ ಕೊಂಡೊಯ್ಯುವ ಮತ್ತು ಮನಸ್ಸನ್ನು ಮೃದುವನ್ನಾಗಿಸುವ ಶಕ್ತಿ ಸಾಹಿತ್ಯಕ್ಕಿದೆ. ವಿವಿಧ ಪ್ರದೇಶಗಳ ವೈಶಿಷ್ಟ್ಯ ಭಾಷೆ ಪ್ರಾಕಾರಗಳನ್ನು ಪರಿಚಯಿಸುವ ಶಕ್ತಿ ಸಾಹಿತ್ಯಕ್ಕಿದೆ. ಹೀಗಾಗಿ ಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳು ಸಾಹಿತ್ಯದ ಬಗ್ಗೆ ಒಲವು ಮೂಡಿಸಿಕೊಂಡು ಸಾಹಿತ್ಯ ಕ್ಷೇತ್ರ ಬೆಳೆಯಲು ಸಹಕಾರಿಯಾಗಬೇಕು ಎಂದು ಮಂಗಳೂರಿನ ಹಾಸ್ಯ ಸಾಹಿತ್ಯದ ಲೇಖಕಿ ಭುವನೇಶ್ವರಿ ಹೆಗಡೆ ಹೇಳಿದರು.

ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಸಾಹಿತ್ಯ ವೇದಿಕೆ ಇವರ ಆಶ್ರಯದಲ್ಲಿ ಗಂಗೊಳ್ಳಿ ಯು.ಶೇಷಗಿರಿ ಶೆಣೈ ಸ್ಮರಣಾರ್ಥ ಕುಂದಪ್ರಭ ಕುಂದಾಪುರ ಇವರ ಸಹಭಾಗಿತ್ವದೊಂದಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಬಯಲು ರಂಗ ಮಂದಿರದಲ್ಲಿ ಆಯೋಜಿಸಿದ ೪ನೇ ಉಡುಪಿ ಜಿಲ್ಲಾ ಮಟ್ಟದ ಕಾಲೇಜು ವಿದ್ಯಾರ್ಥಿಗಳ ಸಾಹಿತ್ಯ ಸಮ್ಮೇಳನ ’ಸವಿ-ನುಡಿ ಹಬ್ಬ ೨೦೧೭’ವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಪ್ರಾಯೋಜಿತ ಸಾಹಿತ್ಯ ಸಮ್ಮೇಳನಗಳಿಗಿಂತ ಇಂತಹ ಮಕ್ಕಳ ಸಾಹಿತ್ಯ ಸಮ್ಮೇಳನಗಳು ಔಚಿತ್ಯಪೂರ್ಣವಾಗಿದೆ. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವ ಜೊತೆಗೆ ವಿದ್ಯಾರ್ಥಿಗಳ ಮನಸ್ಸನ್ನು ಗಟ್ಟಿಗೊಳಿಸುವ ಮತ್ತು ಒತ್ತಡ ರಹಿತ ಜೀವನ ಸಾಗಿಸಲು ನೆರವಾಗುವಂತಹ ಸಾಹಿತ್ಯಗಳು ವಿದ್ಯಾರ್ಥಿಗಳಿಗೆ ನೆರವಾಗಬಲ್ಲದು. ಹೀಗಾಗಿ ಈ ಸಾಹಿತ್ಯ ಸಮ್ಮೇಳನ ಸಾರ್ಥಕತೆಯನ್ನು ಕಂಡಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ರೋಹನ್ ಮಾತನಾಡಿ, ಸಮಾಜದಲ್ಲಿ ಸಾಮರಸ್ಯದ ಸಹಬಾಳ್ವೆ ನಡೆಸಲು ಸಮಾಧಾನ ಹಾಗೂ ಮೌಲ್ಯಗಳ ಅಗತ್ಯತೆ ಇದೆ. ಜಾಗತೀಕರಣದ ಈ ಯುಗದಲ್ಲಿ ಸಾಹಿತ್ಯ ಅವಶ್ಯಕವಾಗಿದೆ. ನಮ್ಮ ಬರವಣಿಗೆ ಶೈಲಿಯು ಓದುಗರಲ್ಲಿ ಓದುವ ಹವ್ಯಾಸ ಹುಟ್ಟಿಸುವಂತಿರಬೇಕು. ಮನಸ್ಸಿಗೆ ಮುದ ನೀಡುವ ಸಾಹಿತ್ಯವು ಜನರ ಜೀವನ ಹಾಗೂ ಸಮಾಜದ ಮೇಲೆ ಸಾಹಿತ್ಯ ಪ್ರಭಾವ ಬೀರುತ್ತಿದೆ. ಸಮಾಜದ ಬೆಳೆವಣಿಗೆ ಸಾಹಿತ್ಯ ಅಗಾಧವಾದ ಪರಿಣಾಮ ಬೀರುತ್ತದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಥಿಗಳ ಸಾಹಿತ್ಯ ಸಮ್ಮೇಳನ ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ಆಸಕಿ ಬೆಳೆಸುವ ಸಾಹಿತ್ಯವನ್ನು ಪ್ರೋತ್ಸಾಹಿಸುತ್ತಿರುವ ಸಂಘಟಕರ ಕಾರ್ಯ ಶ್ಲಾಘನೀಯ ಎಂದರು.

ಕುಂದಪ್ರಭ ಸಂಪಾದಕ ಯು.ಎಸ್.ಶೆಣೈ, ಗಂಗೊಳ್ಳಿ ಜಿಎಸ್‌ವಿಎಸ್ ಅಸೋಸಿಯೇಶನ್ ಕಾರ್ಯದರ್ಶಿ ಎಚ್.ಗಣೇಶ ಕಾಮತ್, ಕಾಲೇಜಿನ ಸಂಚಾಲಕ ಎನ್.ಸದಾಶಿವ ನಾಯಕ್, ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಎ.ಎ.ಖಾನ್ ಶುಭ ಹಾರೈಸಿದರು. ಇದೇ ಸಂದರ್ಭ ’ನುಡಿ ಸೇಡರ್’ ಎನ್ನುವ ಸಾಹಿತ್ಯದ ಪುಸ್ತಕವನ್ನು ಲೇಖಕಿ ಭುವನೇಶ್ವರಿ ಹೆಗಡೆ ಬಿಡುಗಡೆಗೊಳಿಸಿದರು. ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ., ಪ್ರೌಢಶಾಲಾ ವಿಭಾಗದ ಪ್ರಭಾರ ಉಪಪ್ರಾಂಶುಪಾಲೆ ಶ್ರೀಲತಾ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಸಂಜನಾ ಸ್ವಾಗತಿಸಿದರು. ಉಪನ್ಯಾಸಕ ಸುಜಯೀಂದ್ರ ಹಂದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿಯರಾದ ಯು.ಚೈತ್ರಾ ಶ್ಯಾನುಭಾಗ್ ಮತ್ತು ಸ್ನೇಹಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ನಮಿತಾ ವಂದಿಸಿದರು.

 

Exit mobile version