Kundapra.com ಕುಂದಾಪ್ರ ಡಾಟ್ ಕಾಂ

ಸಿಪಿಐ(ಎಂ) ಬೈಂದೂರು ವಲಯ ಸಮ್ಮೇಳನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಸಿಪಿಐ(ಎಂ) ಪಕ್ಷದ ಅಖಿಲ ಭಾರತ ೨೨ನೇ ಮಹಾ ಅಧಿವೇಶನ ಜರಗಲಿರುವುದರ ಪೂರ್ವಭಾವಿಯಾಗಿ ದೇಶದ ಎಲ್ಲಾ ರಾಜ್ಯ, ಜಿಲ್ಲಾ, ತಾಲೂಕು ವಲಯವಾರು ಸಮ್ಮೇಳನಗಳು ಜರಗುತ್ತಿದ್ದು, ಸಿಪಿಐ(ಎಂ) ಪಕ್ಷದ ಪ್ರಾಥಮಿಕ ಘಟಕದ ಶಾಖಾ ಸಮ್ಮೇಳನಗಳು ಜರಗುತ್ತಿದ್ದು, ಸಿಪಿಐ(ಎಂ) ಪಕ್ಷದ ಪ್ರಾಥಮಿಕ ಘಟಕದ ಶಾಖಾ ಸಮ್ಮೇಳನಗಳು ಸಂಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಸಿಪಿಐ(ಎಂ) ಬೈಂದೂರು ವಲಯ ಸಮ್ಮೇಳನವು ಹೆಮ್ಮಾಡಿ ಆದರ್ಶ ಯುವಕ ಮಂಡಲದ ಸಭಾಂಗಣದ ಅಬ್ರಹಾಂ ಕರ್ಕಡ ವೇದಿಕೆಯಲ್ಲಿ ಯಶಸ್ವಿಯಾಗಿ ಜರಗಿತು.

ಸಿಪಿಐ(ಎಂ) ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಸಮ್ಮೇಳನದ ಉದ್ಘಾಟನೆ ಮಾಡುತ್ತಾ ದೇಶದಲ್ಲಿ ದುಡಿಯುವ ಜನರ ಐಕ್ಯತೆಯನ್ನು ಜಾತಿ, ಧರ್ಮ, ಭಾಷೆಗಳನ್ನು ಬಳಸಿ ವಿಚಿದ್ರಗೊಳಿಸುವ ಸಂಘ ಪರಿವಾರದ ಹುನ್ನಾರಕ್ಕೆ ಪ್ರತಿರೋಧ ಒಡ್ಡಬೇಕು. ಸಾಮೂಹಿಕ ಕ್ರಾಂತಿಕಾರಿ ಕಮ್ಯೂನಿಸ್ಟ್ ಪಕ್ಷವನ್ನು ಸಂಘಟಿಸುವಲ್ಲಿ ಕಾರ್ಯಕರ್ತರು ಮುಂದಾಗಬೇಕು ಎಂದು ಹೇಳಿದರು. ಅವರು ಮುಂದುವರಿದು ಮಾತನಾಡುತ್ತಾ, ಬಡತನ/ಸಮಸ್ಯೆಗಳನ್ನು ಪರಿಹರಿಸಲು ಬಂಡವಾಳಶಾಹಿಗೆ ಸಾಮರ್ಥ್ಯವೂ ಇಲ್ಲ, ನೈತಿಕತೆಯೂ ಇಲ್ಲ ಎಂದು ಟೀಕಿಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮುಖಂಡ ರಾಜೀವ ಪಡುಕೋಣೆ ವಹಿಸಿದ್ದರು. ಕೆ.ಶಂಕರ, ಮಹಾಬಲ ವಡೇರ ಹೋಬಳಿ, ಎಚ್. ನರಸಿಂಹ, ಯು. ದಾಸಭಂಡಾರಿ, ಸಂತೋಷ ಹೆಮ್ಮಾಡಿ, ನಾಗರತ್ನ ನಾಡಾ, ಜಿ.ಡಿ. ಪಂಜು, ಅಣ್ಣಪ್ಪ ಶೇರುಗಾರ, ಲಕ್ಷ್ಮಣ ಮೂವತ್ತುಮುಡಿ, ಉಪಸ್ಥಿತರಿದ್ದರು. ಸಮ್ಮೇಳನದ ಆರಂಭದಲ್ಲಿ ಸಿಪಿಐ(ಎಂ) ಮುಖಂಡ ವೆಂಕಟೇಶ ಕೋಣಿ ಪಕ್ಷದ ಧ್ವಜಾರೋಹಣ ನೆರವೇರಿಸಿದರು.

ನಂತರ ಜರಗಿದ ಪ್ರತಿನಿಧ್ಯ ಅಧಿವೇಶನದಲ್ಲಿ ಬೈಂದೂರು ವಲಯ ಕಾರ್ಯದರ್ಶಿ ಸುರೇಶ ಕಲ್ಲಾಗರ ಗತ ಸಾಲಿನ ಚಟುವಟಿಕೆಯ ವರದಿ ಮಂಡಿಸಿದರು. ಮನೆ, ನಿವೇಶನ ರಹಿತರ ಭೂಮಿ ಹಕ್ಕಿನ ಹೋರಾಟ ತೀವ್ರ ಗೊಳಿಸುವುದು, ಬೈಂದೂರು ತಾಲೂಕು ಸರ್ವಾಗೀಣ ಅಭಿವೃದ್ಧಿಗೆ ಸೇನಾಪುರದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಒತ್ತಾಯಿಸಿ, ಹಾಗೂ ಬೆಂಗಳೂರು-ಕಾರವಾರ ರೈಲು ಮಾರ್ಗದಲ್ಲಿ ಹೆಚ್ಚುವರಿ ರಾತ್ರಿ ರೈಲು ಹಾಸನ-ಕುಣಿಗಲ್ ಮಾರ್ಗವಾಗಿ ಓಡಿಸಬೇಕು ಇತ್ಯಾದಿ ನಿರ್ಣಯಗಳನ್ನು ಅಂಗೀಕರಿಸಿ, ಮುಂದಿನ ದಿನಗಳಲ್ಲಿ ಈ ಹೋರಾಟಗಳನ್ನು ತೀವ್ರಗೊಳಿಸುವುದಕ್ಕೆ ತೀರ್ಮಾನ ಕೈಗೊಳ್ಳಲಾಯಿತು. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ. ಶಂಕರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸಿಪಿಐ(ಎಂ)ಬೈಂದೂರು ವಲಯ ಸಮಿತಿಗೆ ಸುರೇಶ್ ಕಲ್ಲಾಗರ ಕಾರ್ಯದರ್ಶಿಯಾಗಿ ಒಟ್ಟು ೧೩ ಮಂದಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕೊನೆಯಲ್ಲಿ ವೆಂಕಟೇಶ ಕೋಣಿ ಎಲ್ಲರಿಗೂ ಅಭಿನಂದಿಸಿದರು.

Exit mobile version