Kundapra.com ಕುಂದಾಪ್ರ ಡಾಟ್ ಕಾಂ

ಮತದಾನದ ಅರಿವು, ಅರ್ಹ ಅಭ್ಯರ್ಥಿಯ ಆಯ್ಕೆಗೆ ಮತದಾರರ ಜಾಗೃತಿ ಅಭಿಯಾನ: ರಾಜ್ ಬಲ್ಲಾಳ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮತದಾನವೆಂಬುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂಬ ಅರಿವು ಮಾಯವಾಗಿದೆ. ದೂರವಾಗುತ್ತಿದೆ. ಚುನಾವಣೆ ಅಭ್ಯಥಿಯಾಗಬೇಕಾದರೇ ಹಣ ಬೇಕು ಎಂಬ ಭಾವನೆ ಎಲ್ಲರಲ್ಲಿಯೂ ಇದ್ದು, ಜನರಲ್ಲಿನ ಈ ಮನಸ್ಥಿತಿ ಬದಲಾಗಬೇಕಿದೆ. ಹಣದ ಬದಲಿಗೆ ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆರಿಸುವ ಕೆಲಸವಾದಾಗ ಪ್ರಜಾಪ್ರಭುತ್ವಕ್ಕೊಂದು ಅರ್ಥ ಬರುತ್ತದೆ ಎಂದು ನಿರ್ದೇಶಕ, ನಟ ರಾಜ್ ಬಲ್ಲಾಳ್ ಹೇಳಿದರು.

ಅವರು ಬೈಂದೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಮತದಾನವೆಂಬುದು ಅಮೂಲ್ಯವಾದ ಕರ್ತವ್ಯ. ಒಂದು ಮತದಿಂದ ಏನೂ ಆಗದು ಎನ್ನುವ ಬದಲು ಅದೇ ಒಂದು ಮತ ಒಬ್ಬ ಅರ್ಹ ಅಭ್ಯರ್ಥಿಯನ್ನು ಗೆಲ್ಲುವಂತೆ ಇಲ್ಲವೇ ಸೋಲುವಂತೆ ಮಾಡಬಹುದು ಎಂಬ ಅರಿವೂ ಜನಸಾಮಾನ್ಯರಲ್ಲಿಯೂ ಮೂಡಬೇಕು. ಹಣ ಹಾಗೂ ಇತರೇ ಆಮಿಷಗಳಿಗೆ ಬಲಿಯಾಗದೇ ಅರ್ಹರು ಆಯ್ಕೆಯಾಗುವಂತೆ ಆಗಬೇಕು ಎಂಬ ಉದ್ದೇಶದಿಂದ ಮತದಾರರ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ರಾಜ್ಯದ ವಿವಿಧೆಡೆಗಳಲ್ಲಿ ಮತದಾರರ ಜಾಗೃತಿ ಅಭಿಯಾನ ಕೈಗೊಳ್ಳುವ ಉದ್ದೇಶವಿದ್ದು ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಮೊದಲು ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಮತದಾರರ ಜಾಗೃತಿ, ಮತದಾನದ ಕರ್ತವ್ಯ ಬಗ್ಗೆ ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರು ನಿರಂತರ ಸಂವಾದ ನಡೆಸಲಾಗುವುದು. ವಿವಿಧ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದವರು ತಿಳಿಸಿದರು.

 

Exit mobile version