Kundapra.com ಕುಂದಾಪ್ರ ಡಾಟ್ ಕಾಂ

ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ: ಕುಂದಾಪುರ-ಉಡುಪಿ ನ್ಯಾಯವಾದಿಗಳ ತಂಡಕ್ಕೆ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಾಸನದಲ್ಲಿ ನಡೆದ ರಾಜ್ಯ ಮಟ್ಟದ ಎಲ್ಲಾ ಬಾರ್ ಅಸೋಸಿಯೇಶನ್‌ಗಳಲ್ಲದೆ ಇತರ ತಂಡಗಳು ಸೇರಿದಂತೆ ೪೨ ಬಲಿಷ್ಠ ಕ್ರಿಕೆಟ್ ತಂಡಗಳು ಭಾಗವಹಿಸಿದ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಕುಂದಾಪುರ ಮತ್ತು ಉಡುಪಿ ವಕೀಲರ ಜಂಟೀ ತಂಡವು ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಹಾಸನ ಬಾರ್ ಅಸೋಸಿಯೇಶನ್ ನೇತೃತ್ವದಲ್ಲಿ ನಡೆದ ಪ್ರತಿಷ್ಠಿತ ವಕೀಲರ ಕ್ರೀಡಾಕೂಟದಲ್ಲಿ ವಕೀಲರಾದ ಸಚಿನ್ ಕುಮಾರ್ ಶೆಟ್ಟಿ ಮತ್ತು ರಾಘವೇಂದ್ರ ಚರಣ್ ನಾವುಡ ರ ನೇತೃತ್ವದ ಉಡುಪಿ-ಕುಂದಾಪುರ ವಕೀಲರ ತಂಡ ಎರಡು ದಿನಗಳ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯದ ಪ್ರತಿಷ್ಠಿತ ತಂಡಗಳನ್ನು ಸೋಲಿಸುವುದರ ಮುಖಾಂತರ ರಾಜ್ಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಕ್ರೀಡಾಕೂಟದಲ್ಲಿ ಕುಂದಾಪುರ-ಉಡುಪಿ ತಂಡವು ಗುಲ್ಬರ್ಗ, ಸಕಲೇಶಪುರ, ಗದಗ, ಬೆಳಗಾವಿ, ಯಾದಗೀರ್, ಬೆಂಗಳೂರು ತಂಡಗಳನ್ನು ಸೋಲಿಸಿ ಫೈನಲ್ ಹಂತಕ್ಕೆ ತಲುಪಿತ್ತು. ಈ ಪಂದ್ಯಾಟದಲ್ಲಿ ಕುಂದಾಪುರದ ವಕೀಲರಾದ ವಿಶ್ವನಾಥ ಶೆಟ್ಟಿ ಹಾಗೂ ಲಿಂಗಪ್ಪ ರವರುಗಳು ಪಂದ್ಯ ಪುರುಶೋತ್ತಮ ಪ್ರಶಸ್ತಿ ಮತ್ತು ಜಗದೀಶ ರಾವ್ ಉತ್ತಮ ಕ್ಷೇತ್ರ ರಕ್ಷಕ ಪ್ರಶಸ್ತಿ ಪಡೆದರು.

ಜವಾಬ್ದಾರಿಯುತ ೬ ಓವರ್‌ಗಳ ಫೈನಲ್ ಪಂದ್ಯಾಟದಲ್ಲಿ ಬಲಿಷ್ಠ ಮೈಸೂರು ವಕೀಲರ ತಂಡದ ವಿರುದ್ಧ ೮೧ ರನ್‌ಗಳನ್ನು ಕುಂದಾಪುರ-ಉಡುಪಿ ತಂಡ ಕಲೆ ಹಾಕಿದ್ದು, ಉಡುಪಿ ವಕೀಲರಾದ ದಿವ್ಯೇಶ್ ಶೆಟ್ಟಿ ೪ ಸಿಕ್ಸರ್‌ಗಳು ಹಾಗೂ ಕುಂದಾಪುರದ ವಕೀಲರಾದ ಲಿಂಗಪ್ಪರವರು ೩ ಸಿಕ್ಸರ್‌ಗಳನ್ನು ಸಿಡಿಸಿದರು. ಜವಾಬ್ದಾರಿಯುತ ಆಟವಾಡಿದ ನಾಯಕ ರಾಘವೇಂದ್ರ ಚರಣ್ ಒಂದು ಸಿಕ್ಸರ್ ನೊಂದಿಗೆ ತಂಡವನ್ನು ಅಂತ್ಯದವರೆಗೆ ಆದರಿಸಿದರು. ಮಾರಕ ಬೌಲಿಂಗ್‌ನ್ನು ನಡೆಸಿದ ವಿಶ್ವನಾಥ ಶೆಟ್ಟಿ, ಜಗದೀಶ ರಾವ್ ಮತ್ತು ನಾಯಕ ಸಚಿನ್ ತಂಡದ ಗೆಲುವಲ್ಲಿ ಪ್ರಧಾನ ಪಾತ್ರವಹಿಸಿದರು.

ಸಚಿನ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ಲಿಂಗಪ್ಪ, ದಿವ್ಯೇಶ್ ಶೆಟ್ಟಿ ಹಾಗೂ ಜಗದೀಶ ರವರು ವೈಯಕ್ತಿಕ ಪ್ರಶಸ್ತಿಗಳಿಗೆ ಭಾಜನರಾದರು. ಮೈಸೂರು ತಂಡದ ಗೌತಮ ಮಂದಣ್ಣ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ರಾಘವೇಂದ್ರ ನಾವಡ ಹಾಗೂ ಸಚಿನ್ ರವರ ನೇತೃತ್ವದ ಕುಂದಾಪುರ-ಉಡುಪಿ ವಕೀಲರ ತಂಡ ಸಂಘಟಿತ ದಾಳಿ, ಬ್ಯಾಟಿಂಗ್ ಮತ್ತು ಕ್ಷೇತ್ರ ರಕ್ಷಣೆಯಲ್ಲಿ ಯಶಸ್ವಿಯಾಗಿ ಪ್ರಥಮ ಪ್ರಶಸ್ತಿಯನ್ನು ಪಡೆಯಿತು.

ಹಾಸನದ ಶಾಸಕರಾದ ಹೆಚ್ ಎಸ್ ಪ್ರಕಾಶ್, ಹಾಸನ ಜಿಲ್ಲಾ ಬಾರ್ ಅಸೋಸಿಯೇಶನ್ ಅಧ್ಯಕ್ಷರಾದ ಶ್ರೀ ಎಂ. ಡಿ. ವೆಂಕಟೇಶ್, ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಕಾನೂನು ಸೇವೆಗಳ ಪ್ರಾಧೀಕಾರದ ಸದಸ್ಯ ಕಾರ್ಯದರ್ಶಿ ವಿಜಯ್ ಕುಮಾರ್ ರೈ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಭ್ಯರ್ಥಿ ಹಾಗೂ ಹಾಸನದ ನ್ಯಾಯವಾದಿ ಕೆ. ಪಿ. ಶೇಖರ್, ಹಾಸನ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್ ಎನ್ ರಾಜೀವ್, ಸ್ಪೋಟ್ಸ್ ಆಂಡ್ ರಿಕ್ರೀಯೇಷನ್ ಕ್ಲಬ್ ನ ಅಧ್ಯಕ್ಷರಾದ ಬಿ ಸಿ ನಟರಾಜ್ ಮುಂತಾದವರು ಉಪಸ್ಥಿತರಿದ್ದರು.

ಉಡುಪಿ ಬಾರ್ ಅಸೋಸಿಯೇಶನ್ ಅಧ್ಯಕ್ಷರಾದ ಹೆಚ್. ರತ್ನಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಬ್ಬಾರ್ ಮತ್ತು ಕುಂದಾಪುರ ಬಾರ್ ಅಸೋಸಿಯೇಶನ್ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ರವೀಶ್ಚಂದ್ರ ಶೆಟ್ಟಿ ಹಾಗೂ ಉಡುಪಿಯ ವಕೀಲರಾದ ದೇವರಾಜ್ ಶೆಟ್ಟಿಗಾರ್, ಗಣೇಶ್ ಮಟ್ಟು ಮತ್ತು ಚಂದ್ರರವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.

 

Exit mobile version