Kundapra.com ಕುಂದಾಪ್ರ ಡಾಟ್ ಕಾಂ

ನಮ್ಮ ಸರಕಾರ ನುಡಿದಂತೆ ನಡೆಯುತ್ತಿದೆ. ನನಗೆ ರೈತರ ಕಷ್ಟಗಳ ಅರಿವಿದೆ: ಸಿ.ಎಂ. ಸಿದ್ಧರಾಮಯ್ಯ

ವಾರಾಹಿ ನೀರಾವರಿ ಯೋಜನೆಯ ಪ್ರಥಮ ಹಂತಹ ಕಾಮಗಾರಿ ಲೋಕಾರ್ಪಣೆ

ಸಿದ್ಧಾಪುರ: ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಎಲ್ಲಾ ನೀರಾವರಿ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ನಮ್ಮ ಸರಕಾರ ಹೆಚ್ಚಿನ ಒತ್ತು ನೀಡಿದ್ದು ಅದರಲ್ಲಿ ವಾರಾಹಿ ಯೋಜನೆಯೂ ಸೇರಿದೆ. ಕೂಡ್ಲು ಸಂಗಮದ ಪಾದಯಾತ್ರೆ ಸಮಯದಲ್ಲಿ ನೀಡಿದ ವಾಗ್ದಾನದಂತೆ ಪ್ರತಿ ವರ್ಷ ನೀರಾವರಿ ಯೋಜನೆಗೆ 10 ಸಾವಿರ ಕೋಟಿ ಹಣವನ್ನು ವ್ಯಯಿಸುತ್ತಿದ್ದು, ಈ ಬಾರಿ ಮುಂಗಡ ಪತ್ರದಲಿ 12 ಸಾವಿರ ಕೋಟಿ ಹಣವನ್ನು ಮೀಸಲಿರಿಸಲಾಗಿದೆ ಎಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ಅವರು ಹೊಳೆಶಂಕರನಾರಾಯಣ ವಾರಾಹಿ ನೀರಾವರಿ ಯೋಜನೆಯ ಪೂರ್ಣಗೊಂಡ ಪ್ರಥಮ ಹಂತದ ಕಾಮಗಾರಿಯನ್ನು ಲೋಕಾರ್ಪಣೆಗೊಳಿಸಿದ ಬಳಿಕ ಸಿದ್ಧಾಪುರದ ಫ್ರೌಡಶಾಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಂದಿನ 2 ವರ್ಷಗಳಲ್ಲಿ ವಾರಾಹಿ ಯೋಜಯು ಸಂಪೂರ್ಣಗೊಳ್ಳಲಿದ್ದು, ಸುಮಾರು 40 ಸಾವಿರ ಎಕರೆ ಕೃಷಿ ಭೂಮಿಗೆ ನೀರುಣಿಸಲಿದೆ. ಈ ಬಗ್ಗೆ ಯಾರೂ ಕೂಡ ಸಂಶಯ ಹಾಗೂ ಆತಂಕ ಇಟ್ಟುಕೊಳ್ಳಬಾರದು ಎಂದರು.

35 ವರ್ಷಗಳಿಂದ ಈ ವಾರಾಹಿ ಯೋಜನೆಯ ಬಗ್ಗೆ ಜನ ನಿರೀಕ್ಷೆಯನ್ನಿಟ್ಟುಕೊಂಡು ಕಾದಿದ್ದಾರೆ. ಕರಾವಳಿ ಭಾಗದ ಜನರು ಸಹನಶೀಲರು ಎಂಬುದಕ್ಕೆ ಇದೇ ಸಾಕ್ಷಿ. ಇಷ್ಟು ವರ್ಷಗಳ ಕಾಲ ನಿಷ್ಕ್ರಿಯವಾಗಿ ಉಳಿದಿದ್ದ ಯೋಜನೆಗೆ ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮರುಜೀವ ನೀಡಿದ್ದು ಸುಮಾರು 60 ಶೇಖಡಾ ಕಾಮಗಾರಿಯನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗಿದೆ ಎಂದರು.

ರೈತರಿಗೆ ಮಾತ್ರ ರೈತರ ಕಷ್ಟ ಗೊತ್ತು
ಸ್ವತಃ ವ್ಯವಸಾಯ ಮಾಡಿದವರಿಗೆ ರೈತರ ಕಷ್ಟವೇನು ಎಂಬುದು ಗೊತ್ತು. ಆದರೆ ರೈತರ ಕಷ್ಟಸುಖ ಗೊತ್ತಿಲ್ಲದವರು ಗಂಟೆಗಟ್ಟಲೆ ಮಾತನಾಡುತ್ತಾರೆ. ರೈತನೊಬ್ಬನ ಬಳಿ ಎಷ್ಟೇ ಜಮೀನಿದ್ದರೂ ಕೂಡ ಆತ ನಾಲ್ಕನೇಯ ದರ್ಜೆಯ ನೌಕರನಷ್ಟು ಸಂತೋಷವಾಗಿರುವುದಿಲ್ಲ. ನಾವುಗಳು ವ್ಯವಸಾಯ ಮಾಡಿದ್ದೇವೆ. ನಮಗೆ ರೈತರ ನೋವು ಅರ್ಥವಾಗುತ್ತದೆ. ಹಾಗಾಗಿ ಕೃಷಿ ಭೂಮಿಗಳಿಗೆ ನೀರು ನೀಡುವುದು ನಮ್ಮ ಮೊದಲ ಆದ್ಯತೆ ಎನ್ನುತ್ತಾ ಪರೋಕ್ಷವಾಗಿ ಮಣ್ಣಿನ ಮಕ್ಕಳ ಕುಟುಂಬದವರನ್ನು ಜಾಡಿಸಿದರು.

ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಚಿಂತನೆ
ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಮೊದಲ ಒಂದು ಸಮಿತಿಯನ್ನು ನೇಮಕ ಮಾಡಿ ಅದರ ಸಾಧಕ ಬಾಧಕಗಳನ್ನು ಚರ್ಚಿಸಿ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ವಿರೋಧ ಪಕ್ಷದವರ ಗೈರು
ವಿರೋಧ ಪಕ್ಷದ ಯಾವೊಬ್ಬ ನಾಯಕರೂ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸದಿರುವುದನ್ನು ಟೀಕಿಸಿದ ಮುಖ್ಯಮಂತಿ ಸಿದ್ಧರಾಮಯ್ಯ, ಆರೋಪಗಳನ್ನು ಮಾಡುವವರು ನನ್ನ ಎದುರೇ ಆರೋಪ ಮಾಡಿದರೆ ಅಲ್ಲಿಯೇ ಉತ್ತರಿಸಲು ಸುಲಭವಾಗುತ್ತೆ. ಅದರ ಬದಲಿಗೆ ಎಲ್ಲಿಯೋ ಕುಳಿತು ಆರೋಪ ಮಾಡಿ ಸಮಯ ಹರಣ ಮಾಡುವುದು ಸರಿಯಲ್ಲ ಎಂದರು.

ಗ್ರಾ.ಪಂ. ಚುನಾವಣೆಗಳನ್ನು ಮುಂದೂಡಿಲ್ಲ
ಗ್ರಾಮ ಪಂಚಾಯತ್ ಚುನಾವಣೆಗಳನ್ನು ಮುಂದೂಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಆದರೆ ಚುನಾವಣೆಯನ್ನು ಮುಂದೂಡುವ ಪ್ರಶ್ನೆಯೇ ಇಲ್ಲ. ಬದಲಿಗೆ ಕಡ್ಡಾಯ ಮತದಾನ, ಗ್ರಾ.ಪಂ ಅಧ್ಯಕ್ಷರ ಅಧಿಕಾರಾವಧಿ ೫ವರ್ಷಕ್ಕೆ ಏರಿಕೆ, ಪುರುಷ ಮಹಿಳಾ ಮೀಸಲಾತಿಯನ್ನು ೫೦-೫೦ರಷ್ಟಕ್ಕೆ ತಿದ್ದುಪಡಿ ಮುಂತಾದ ಬದಲಾವಣಿಗಳನ್ನು ತರಲಾಗುತ್ತಿದೆ ಎಂದರು

ನುಡಿದಂತೆ ನಡೆದ ಸರಕಾರ:
ನಮ್ಮ ಸರಕಾರ ನುಡಿದಂತೆ ನಡೆಯುತ್ತಿದೆ. ಚುನಾವಣೆಯ ವೇಳೆಯನ್ನು ಪ್ರನಾಳಿಕೆಯಲ್ಲಿ ನೀಡಿದ ೧೬೦ ಭರವಸೆಗಳಲ್ಲಿ ೧೦೦ ಭರವಸೆಗಳನ್ನು ಈಗಾಗಲೇ ಕಾರ್ಯರೂಪಕ್ಕೆ ತರಲಾಗಿದೆ. ಬಡವರು, ಹಿಂದುಳಿದ ವರ್ಗಗಳ ಜನರಿಗೆ ಸರಕಾರ ವಿವಿಧ ಯೋಜನೆಗಳನ್ನು ರೂಪಿಸುವುದರ ಮೂಲಕ ಅವರು ಸಮಾಜದಲ್ಲಿ ಸ್ವಾಭಿಮಾನ, ಗೌರವ, ಆರೋಗ್ಯಯುತವಾಗಿ ಬದುಕುವಂತೆ ಪ್ರೋತ್ಸಾಹಿಸಿದೆ ಎಂದರು.

ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ್ ಮಾತನಾಡಿ ಉಡುಪಿ ಜಿಲ್ಲೆಯ ಇತಿಹಾಸದಲ್ಲಿಯೇ ಇಂದು ಐತಿಹಾಸಿಕ ದಿನ. 560ಕೋಟಿ ರೂ. ವೆಚ್ಚದ ಕಾಮಗಾರಿಯ ಮೊದಲ ಹಂತವನ್ನು ಪೂರ್ಣಗೊಳಿಸಿ 216 ಹೆಕ್ಟೆರ್ ಭೂಮಿಗೆ ನೀರು ಹರಿಸುತ್ತಿದ್ದೇವೆ. ಒಟ್ಟಾರಿ 16 ಸಾವಿರ ಹೆಕ್ಟೆರ್ ಭೂಮಿಗೆ ನೀರು ಹರಿಸಲು ಮುಂದಿನ 2 ವರ್ಷಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.

ವಿವಿಧ ಯೋಜನೆಗಳ ಫಲಾನುಬಾವಿಗಳಿಗೆ ಸಾಂಕೇತಿಕವಾಗಿ ಸವಲತ್ತುಗಳನ್ನು ವಿತರಿಸಲಾಯಿತು, ವಿವಿಧ ಬೇಡಿಕೆಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲ ಪೂಜಾರಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ವಿಧಾನ ಪರಿಷತ್ ಶಾಸಕ ಕೆ. ಪ್ರತಾಪಚಂದ್ರ ಶೆಟ್ಟಿ, ಜಿ.ಪಂ ಸದಸ್ಯ ಮಮತಾ ಶೆಟ್ಟಿ, ತಾ.ಪಂ ಸದಸ್ಯರಾದ ರಾಜು ಪೂಜಾರಿ, ಕೊಲ್ಲೂರು ರಮೇಶ್ ಗಾಣಿಗ, ಜಿಲ್ಲಾಧಿಕಾರಿ ಡಾ. ವಿಶಾಲ ಕಾಂಗ್ರೆಸ್ ಮುಖಂಡ ಎಂ. ಎ. ಗಪೂರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕರಾರಿ ಎಂ ಕನಗವಲ್ಲಿ, ಕುಂದಾಪುರ ತಾಲೂಕು ಉಪವಿಭಾಗಾಧಿಕಾರಿ ಚಾರುಲತಾ, ತಹಶೀಲ್ದಾರದಾದ ಗಾಯತ್ರಿ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಆರ್. ರುದ್ರಯ್ಯ ಸ್ವಾಗತಿಸಿದರು.

Exit mobile version