ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಸಾಂಸ್ಕೃತಿಕ ಪ್ರೀತಿ ಮಾನವೀಯ ಮೌಲ್ಯ ವೃದ್ಧಿಸಿ ಸಮಾಜಮುಖಿ ಚಿಂತನೆಗಳನ್ನು ಕಲ್ಪಿಸುತ್ತದೆ. ಹಾಗೆಯೇ ಕೇವಲ ಪುಸ್ತಕದ ಜ್ಞಾನ ಜೀವನಕ್ಕೆ ಸಾಕಾಗುವುದಿಲ್ಲ. ಶಿಕ್ಷಣೇತರ ಚಟುವಟಿಕೆಗಳು ಜೀವನದದ್ದುಕ್ಕಕ್ಕೂ ನೆನಪಿನಲ್ಲಿ ಉಳಿದು ಸಾಂಸ್ಕೃತಿಕವಾಗಿ ಎಲ್ಲವನ್ನು ಎದುರಿಸುವ ಧೈರ್ಯ ಮಕ್ಕಳಲ್ಲಿ ತುಂಬಲು ರಂಗ ಶಿಬಿರಗಳು ಸಹಕಾರಿಯಾಗುತ್ತದೆ ಎಂದು ಲಾವಣ್ಯ ಕಲಾಕುಟುಂಬದ ಅಧ್ಯಕ್ಷ ಗಿರೀಶ್ ಬೈಂದೂರು ಹೇಳಿದರು.
ಬೈಂದೂರು ಲಾವಣ್ಯ ರಂಗಮನೆಯಲ್ಲಿ 21 ನೇ ವರ್ಷದ ಮಕ್ಕಳ ರಂಗತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸ್ವಕೇಂದ್ರಿತ ಸಮಾಜ ನಿರ್ಮಾಣವಾಗುತ್ತಿರುವ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ರಂಗ ಚಟುವಟಿಕೆಗಳು ಮುಖ್ಯ ಎಂದೆನಿಸಿಕೊಳ್ಳುತ್ತವೆ. ರಂಗಭೂಮಿಗಳು ಸಮಾಜಕ್ಕೆ ಹೊಸ ಸಂದೇಶ ನೀಡಿ, ಮನುಷ್ಯನ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುವುದಲ್ಲದೇ, ಜೀವನದಲ್ಲಿನ ಲೋಪದೋಷಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ರಂಗ ತರಬೇತಿ ಶಿಬಿರದ ನಿರ್ದೇಶಕ ನಿನಾಸಂ ಪದವೀಧರ ವಾಸುದೇವ ಗಂಗೇರ, ಸಹಾಯಕ ನಿರ್ದೇಶಕ ರೋಶನ್ ಬೈಂದೂರು, ಲಾವಣ್ಯ ಗೌರವಾಧ್ಯಕ್ಷ ಉಪ್ಪುಂದ ಶ್ರೀನಿವಾಸ ಪ್ರಭು, ವ್ಯವಸ್ಥಾಪಕ ಗಣಪತಿ ಎಸ್., ಉಪಾಧ್ಯಕ್ಷ ರವೀಂದ್ರ ಶ್ಯಾನುಭಾಗ್ ಉಪಸ್ಥಿತರಿದ್ದರು.
ಶಿಬಿರದಲ್ಲಿ ಒಟ್ಟು 40 ವಿದ್ಯಾರ್ಥಿಗಳಿದ್ದು, ಚುಟುಕು ಕವಿ ದುಂಡಿರಾಜ್ ಅವರ ‘ಅಧ್ವಾನಪುರ’ ನಾಟಕವನ್ನು ಶಿಬಿರದ ತರಬೇತಿಗೆ ಆಯ್ದುಕೊಳ್ಳಲಾಗಿದೆ. ಎ.29ರಂದು ಇಲ್ಲಿನ ಶ್ರೀ ಶಾರದಾ ವೇದಿಕೆಯಲ್ಲಿ ಈ ನಾಟಕವು ಶಿಬಿರದ ಮಕ್ಕಳಿಂದ ಪ್ರದರ್ಶನಗೊಳ್ಳಲಿದೆ.

