Site icon Kundapra.com ಕುಂದಾಪ್ರ ಡಾಟ್ ಕಾಂ

ವಕ್ವಾಡಿ: ಗುರುಕುಲ ಶಿಕ್ಷಕಿಯರಿಗೆ ವಿಶೇಷ ಕಾರ್ಯಾಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ವಕ್ವಾಡಿ ಗುರುಕುಲ ವಿದ್ಯಾ ಸಂಸ್ಥೆಯು ಪ್ರತಿ ವರ್ಷದಂತೆ ಈ ಬಾರಿ ಕೂಡ ಶಿಕ್ಷಕಿಯರಿಗಾಗಿ ವಿಶೇಷ ಕಾರ‍್ಯಾಗಾರವೊಂದನ್ನು ಆಯೋಜಿಸಿತ್ತು.

ಈ ಕಾರ‍್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಡಾ.ಶೆರಿನ್.ಪಿ ಆಂತೋನಿ, ಮೇಲ್ವಿಚಾರಕಿ/ನಿರ್ದೇಶಕಿ ಹಾಗೂ ಮಕ್ಕಳ ಮನೋತಜ್ಞೆ ಬೆಂಗಳೂರು ಮತ್ತು ಕು. ರಕ್ಷಿತಾ ಜೊತೆಗಿದ್ದರು.

ವಿಶೇಷ ಚಟುವಟಿಕೆಯನ್ನು ಶಿಕ್ಷಕಿಯರಿಗೆ ನೀಡಲಾಯಿತು ಹಾಗೂ ವಿವಿಧ ವಸ್ತುಗಳನ್ನು ನೆಲದ ಮೇಲೆ ಕ್ರಮವಾಗಿ ಜೋಡಿಸಲಾಗಿತ್ತು. ಶಿಕ್ಷಕಿಯರು ಒಂದು ವಸ್ತುವನ್ನು ಆಯ್ಕೆ ಮಾಡಿ ಆ ವಸ್ತುವಿನ ಗುಣ ವಿಶೇಷದ ಜೊತೆ ನಮ್ಮ ಯಾವ ಗುಣವನ್ನು ಹೊಂದಾಣಿಕೆ ಮಾಡಬಹುದು ಎಂಬುದನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ತೋರಿಸಿದರು. ಈ ರೀತಿಯ ವಿವಿಧ ಕ್ರಿಯಾತ್ಮಕ ಚಟುವಟಿಕೆಗಳನ್ನು ಶಿಕ್ಷಕಿಯರಿಗೆ ತಿಳಿಸಿದರು. ತರಗತಿ ಕೋಣೆಯಲ್ಲಿ ಮಕ್ಕಳನ್ನು ಪ್ರಾಯೋಗಿಕವಾಗಿ ವಿವಿಧ ಕಾರ‍್ಯ ಚಟುವಟಿಕೆಗಳಲ್ಲಿ ಹೇಗೆ ತೋಡಗಿಸಿಕೊಳ್ಳಬಹುದು ಹಾಗೂ ಮಕ್ಕಳು ಸ್ವ ಇಚ್ಛೆಯಿಂದ ತಮ್ಮ ಅಭಿಪ್ರಾಯ ಆಲೋಚನೆಗಳನ್ನು ಹೇಗೆ ಕ್ರಿಯಾಶೀಲವಾಗಿ ಹೊರಹಾಕಲು ಬೇಕಾದ ವಾತಾವರಣವನ್ನು ಹೇಗೆ ಸೃಷ್ಟಿಸಬಹುದು ಎಂಬುದನ್ನು ತಿಳಿಸಿದರು. ಮಕ್ಕಳ ಜೊತೆಗಿನ ಶಿಕ್ಷಕರ ಸಂಬಂಧ ಹೇಗಿರಬೇಕು, ಎಂಬ ವಿಚಾರಗಳನ್ನು ಎಳೆ- ಎಳೆಯಾಗಿ ಕೆಲವು ನೈಜ ಕತೆಗಳ ಮೂಲಕ ವಿವರಿಸಿದರು. ಮಕ್ಕಳು ಒಂದು ಮರಳಿನ ರಾಶಿ ಇದ್ದಂತೆ ಅದರ ಮೇಲೆ ವಿವಿಧ ಚಿತ್ರಗಳನ್ನು ಬಿಡಿಸಿ ಹೇಗೆ ಮರಳಿನ ರಾಶಿಗೆ ಒಂದು ಸುಂದರ ಆಕಾರ ಬರುವಂತೆ ಚಿತ್ರಗಾರ ಮಾಡುತ್ತಾನೆ, ಅದೇ ರೀತಿ ಶಿಕ್ಷಕರು ಕೂಡ ಮುತುವರ್ಜಿವಹಿಸಿ ಮಕ್ಕಳ ಜೊತೆ ಬೆರೆಯಬೇಕಾಗುತ್ತದೆ ಎಂಬುದನ್ನು ಮನಮುಟ್ಟುವಂತೆ ವಿವರಿಸಿದರು. ಒಂದು ವಸ್ತುವನ್ನು ಹಲವು ಸಂದರ್ಭದಲ್ಲಿ ತಮ್ಮ ವಿಶೇಷ ಪರಿಕಲ್ಪನೆಯೊದಿಗೆ ಸುಂದರವಾಗಿ ಹೇಗೆ ವರ್ಣಿಸಬಹುದು ಎಂದುವುದನ್ನು ತಿಳಿಸಿದರು.

ಒಟ್ಟಿನಲ್ಲಿ ಇಡೀ ದಿನದ ತರಬೇತಿ ಕಾರ‍್ಯಾಗಾರವು ಶಿಕ್ಷಕಿಯರಿಗೆ ಉಪಯುಕ್ತ ಮಾಹಿತಿಯ ಜೊತೆಗೆ ಅವರ ಹುಮ್ಮಸ್ಸನ್ನು ಇಮ್ಮುಡಿಗೊಳಿಸುವಲ್ಲಿ ಸಹಕಾರಿಯಾಯಿತು.

ಕಾರ‍್ಯಕ್ರಮವನ್ನು ಮುಖ್ಯ ಶಿಕ್ಷಕಿ ವಿಶಾಲಾ ಶೆಟ್ಟಿ ನಿರೂಪಿಸಿದರು.

 

Exit mobile version