Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ನೂತನ ಶಾಸಕ ಬಿ.ಎಮ್.ಸುಕುಮಾರ್ ಶೆಟ್ಟಿಯವರಿಗೆ ಅಭಿನಂದನಾ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಯಡ್ತರೆ ಜೆ.ಎನ್‌.ಆರ್. ಕಲಾಮಂದಿರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಬೈಂದೂರು ನೂತನ ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಅವರು ಮಾತನಾಡಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಗಲಿರುಳೆನ್ನದೇ ದುಡಿದ ಪರಿಶ್ರಮದ ಫಲವಾಗಿ ಈ ಭಾರಿ ಬೈಂದೂರು ವಿಧಾನಸಭಾ ಚುನಾವಣೆಯಲ್ಲಿ ೨೪ ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಅಲ್ಲಿನ ಮೂಲ ಸೌಲಭ್ಯದ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜೀವನದಲ್ಲಿ ಎಂದೂ ಸೋಲನ್ನು ಕಾಣದ ನನಗೆ ಕಳೆದ ಚುನಾವಣೆಯ ಸೋಲು ಸ್ವಲ್ಪಮಟ್ಟಿನ ಆಘಾತವಾದರೂ ಕೂಡಾ ಧೃತಿಗೆಡದೇ ಐದು ವರ್ಷಗಳಕಾಲ ಕ್ಷೇತ್ರದ ಜನರ ಸಂಪರ್ಕ ಇಟ್ಟುಕೊಂಡು ಅವರೆಲ್ಲರ ವಿಶ್ವಾಸಗಳಿದ್ದೇನೆ. ಆ ನೆಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಮತದಾರರು ಅತ್ಯಧಿಕ ಮತಗಳಿಂದ ನನಗೆ ಆಶೀರ್ವದಿಸಿದ್ದಾರೆ. ನನ್ನ ಜೀವನ, ನಾನು ಮಾಡುವ ವ್ಯವಹಾರಗಳು ತೆರೆದಿಟ್ಟ ಪುಸ್ತಕದಂತೆ ಎಂದ ಅವರು ತಾಯಿ ಮೂಕಾಂಬಿಕೆಯ ಅನುಗ್ರಹದಿಂದ ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಸೇವಕನಂತೆ ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಪ್ರಾಮಾಣಿಕತೆಯಿಂದ ಶ್ರಮಿಸುವುದಾಗಿ ಹೇಳಿದರು.

ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಈ ಸಂದರ್ಭ ಬೈಂದೂರಿನ ನೂತನ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರನ್ನು ಬೈಂದೂರು ಬಿಜೆಪಿ ಮಂಡಲದ ವತಿಯಿಂದ ಸನ್ಮಾನಿಸಲಾಯಿತು. ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಬಿಜೆಪಿ ಸಕ್ರಿಯ ಕಾರ್ಯಕರ್ತ ಪುನೀತ ಪೂಜಾರಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಜಿಪಂ ಸದಸ್ಯರಾದ ಕೆ. ಬಾಬು ಶೆಟ್ಟಿ, ತಾಪಂ ಸದಸ್ಯರಾದ ಪುಷ್ಪರಾಜ್ ಶೆಟ್ಟಿ, ಮಾಲಿನಿ.ಕೆ, ಮಹೇಂದ್ರ ಪೂಜಾರಿ, ಸುಜಾತ ದೇವಾಡಿಗ, ಶ್ಯಾಮಲಾ ಕುಂದರ್, ಬೈಂದೂರು ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಭಟ್, ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ, ಪಕ್ಷದ ನಾನಾ ಮೋರ್ಚಾದ ಪದಾಧಿಕಾರಿಗಳಾದ ಶರತ್‌ಕುಮಾರ ಶೆಟ್ಟಿ, ಪ್ರಿಯದರ್ಶಿನಿ ದೇವಾಡಿಗ, ದಿವಾಕರ ಶೆಟ್ಟಿ, ಜೈಸನ್ ಎಂ.ಡಿ, ಆನಂದ ಖಾರ್ವಿ, ವೀರಭದ್ರ ಶೆಟ್ಟಿ, ಶಿವರಾಜ್ ಪೂಜಾರಿ, ಮಂಜು ದೇವಾಡಿಗ, ಜಗನ್ನಾಥ ಮೊಗವೀರ ಉಪಸ್ಥಿತರಿದ್ದರು.

ಕ್ಷೇತ್ರದ ಮತದಾರರು ನನ್ನ ಮೇಲಿಟ್ಟ ಅಭಿಮಾನಕ್ಕೆ ಚ್ಯುತಿ ಬಾರದಂತೆ ಅವರ ಸೇವಕನಾಗಿ ಕೆಲಸ ಮಾಡುತ್ತೇನೆ. ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮೊದಲ ಆದ್ಯತೆಯಾಗಿದೆ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕನಸು ಕಂಡಿದ್ದು, ಅದನ್ನು ನನಸನ್ನಾಗಿಸಿ ರಾಜ್ಯಕ್ಕೆ ಮಾದರಿ ಕ್ಷೇತ್ರವಾಗಿ ರೂಪಿಸುತ್ತೇನೆ.- ಬಿ.ಎಂ. ಸುಕುಮಾರ ಶೆಟ್ಟಿ, ಶಾಸಕರು ಬೈಂದೂರು ಕ್ಷೇತ್ರ

 

Exit mobile version