Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ದೇವಳದಲ್ಲಿ ಸಾಲಿನಲ್ಲಿ ನಿಲ್ಲುವ ಯಾತ್ರಿಕರಿಗೆ ಚಪ್ಪರ ನಿರ್ಮಾಣ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಸರತಿಯಲ್ಲಿ ಮಳೆ ಹಾಗೂ ಬಿಸಿಲಿನ ತಾಪದ ಅನುಭವವಾಗದಂತೆ ಹೊರ ಪೌಳಿಯಲ್ಲಿ ಸರತಿ ಸಾಲಿನ ನೆರಳಿಗೆ ’ಗಾಲ್ವ ನೂಮ್ ಶೀಟ್’ನ ಚಪ್ಪರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಭಕ್ತರ ಆಶ್ರಯಕ್ಕೆ ಸಮರ್ಪಣೆಯಾಗಿದೆ.

ತಮಿಳುನಾಡಿನ ಭಕ್ತರೋರ್ವರ ಕಾಣಿಕೆಯ ಅನುದಾನದೊಡನೆ ಮಿಕ್ಕುಳಿದ ಹಣವನ್ನು ಕ್ರೋಢಿಕರಿಸಿ ರೂ. 11 ಲಕ್ಷ ವೆಚ್ಚದಲ್ಲಿ ’ಗಾಲ್ವ ಲೂಮ್ ಶೀಟ್’ನಿಂದ ಆಕರ್ಷಣೀಯ ನೆರಳಿನ ಚಪ್ಪರ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗಿದೆ. ದೇಶದ ನಾನಾ ಕಡೆಯಿಂದ ಆಗಮಿಸುವ ಸಹಸ್ರಾರು ಸಂಖ್ಯೆಯ ಭಕ್ತರಿಗೆ ದೇವಿ ದರ್ಶನಕ್ಕೆ ಗಂಟೆಗಟ್ಟಲೇ ಬಿಸಿಲು ಹಾಗೂ ಮಳೆಯಲ್ಲಿ ನಿಲ್ಲಬೇಕಾದ ಪ್ರಸಂಗವನ್ನು ಅರಿತ ಭಕ್ತರೋರ್ವರು ನೆರಳಿನ ಚಪ್ಪರದ ನಿರ್ಮಾಣಕ್ಕೆ ದೇಣಿಗೆ ನೀಡುವುದರ ಮೂಲಕ ಭಕ್ತರಿಗೆ ನೆರವಾಗಿರುತ್ತಾರೆ.

ವರ್ಷಂಪ್ರತಿಯ ರಥೋತ್ಸವದ ಸಂದರ್ಭದಲ್ಲಿ ರಥ ಸಂಚಾರಕ್ಕೆ ನೆರಳಿನ ಚಪ್ಪರವನ್ನು ತೆಗೆಯುವ ಅನಿವಾರ್ಯತೆ ಇರುವುದರಿಂದ ಅದಕ್ಕೆ ಪೂರಕವಾದ ವ್ಯವಸ್ಥೆಯನ್ನು ’ಗಾಲ್ವ ಲೂಮ್ ಶೀಟ್’ ನಲ್ಲಿ ಅಳವಡಿಸಲಾಗಿದ್ದು ಯಾವುದೇ ಕ್ಷಣದಲ್ಲಿ ಅದನ್ನು ಬೇರ್ಪಡಿಸುವ ವ್ಯವಸ್ಥೆ ಒದಗಿಸಲಾಗಿದೆ ಎಂದು ದೇಗುಲದ ಎಂಜಿನಿಯರ್ ಪ್ರದೀಪ್ ತಿಳಿಸಿದ್ದಾರೆ.

 

 

Exit mobile version