Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಕೆನರಾ ಬ್ಯಾಂಕಿನ ಹಿರಿಯ ಪ್ರಬಂಧಕ ಓಸ್ವಾಲ್ಡ್ ಕಾರ್ವೆಲ್ಲೊ ನಿವೃತ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಕೆನರಾ ಬ್ಯಾಂಕಿನ ಗಂಗೊಳ್ಳಿ ಶಾಖೆಯಲ್ಲಿ ಬ್ಯಾಂಕಿನ ಸಿಬ್ಬಂದಿಗಳ ವತಿಯಿಂದ ಜರಗಿದ ಬೀಳ್ಕೊಡುಗೆ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದ ಕೆನರಾ ಬ್ಯಾಂಕಿನ ನಿವೃತ್ತ ಪ್ರಬಂಧಕ ಕೆ.ಪಿ.ಭಟ್ ಗ್ರಾಹಕರ ಪ್ರೀತಿ ವಿಶ್ವಾಸ ಗಳಿಸುವುದು ಕಷ್ಟವಾಗಿದ್ದರೂ ಗ್ರಾಹಕರನ್ನು ಆತ್ಮೀಯತೆಯಿಂದ ನೋಡಿಕೊಂಡು ಹಾಗೂ ಗ್ರಾಹಕರ ಅವಶ್ಯಕತೆಗಳಿಗೆ ಸ್ಪಂದಿಸಿ ಉತ್ತಮ ಹೆಸರು ಗಳಿಸಿರುವ ಹಿರಿಯ ಪ್ರಬಂಧಕ ಓಸ್ವಾಲ್ಡ್ ಕಾರ್ವೆಲ್ಲೊ ನಿವೃತ್ತಿ ಹೊಂದುತ್ತಿರುವುದು ಬ್ಯಾಂಕಿಗೆ ತುಂಬಲಾರದ ನಷ್ಟವಾಗಿದೆ. ಬ್ಯಾಂಕಿನ ಗ್ರಾಹಕರು ಇಂತಹ ಉತ್ತಮ ಪ್ರಬಂಧಕರ ಸೇವೆಯನ್ನು ಸದಾ ಸ್ಮರಿಸುತ್ತಿರುತ್ತಾರೆ. ಇವರ ವೃತ್ತಿ ಜೀವನದ ಅನುಭವ ಹಾಗೂ ಸೇವೆ ಕಿರಿಯ ಸಿಬ್ಬಂದಿಗಳಿಗೆ ಮಾರ್ಗದರ್ಶನವಾಗಲಿದೆ ಎಂದು ಹೇಳಿದರು.

ಕಳೆದ ಎರಡು ವರ್ಷಗಳಿಂದ ಕೆನರಾ ಬ್ಯಾಂಕಿನ ಗಂಗೊಳ್ಳಿ ಶಾಖೆಯ ಹಿರಿಯ ಪ್ರಬಂಧಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದುತ್ತಿರುವ ಹಿರಿಯ ಶಾಖಾ ಪ್ರಬಂಧಕ ಓಸ್ವಾಲ್ಡ್ ಕಾರ್ವೆಲ್ಲೊ ಅವರನ್ನು ಸಿಬ್ಬಂದಿಗಳ ಪರವಾಗಿ ಅಭಿನಂದಿಸಿ ಬೀಳ್ಕೊಡಲಾಯಿತು. ಕೆನರಾ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ 37 ವರ್ಷಗಳ ಕಾಲ ಸಲ್ಲಿಸಿದ ಸುಧೀರ್ಘ ಸೇವೆಯನ್ನು ಸ್ಮರಿಸಿಕೊಂಡ ಓಸ್ವಾಲ್ಡ್ ಕಾರ್ವೆಲ್ಲೊ ಸಹಕರಿಸಿದ ಗ್ರಾಹಕರಿಗೆ ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಗ್ರಾಹಕರ ಪರವಾಗಿ ಉದ್ಯಮಿ ಎಚ್.ದಿನಕರ ಶೆಟ್ಟಿ ಹರ್ಕೂರು, ಎನ್.ಅಜಿತ್ ನಾಯಕ್, ಬಿ.ರಾಘವೇಂದ್ರ ಪೈ, ಸಿಬ್ಬಂದಿಗಳ ಪರವಾಗಿ ನಿರ್ಮಲ್ ಕುಮಾರ್, ಆಶ್ಲೆ ಮೈಕಲ್, ರಾಜೀವ, ಇಂದಿರಾ ಭಟ್, ಬಿ.ಸುಂದರ, ಪ್ರಮೋದ ಗಾಣಿಗ, ಜಿ.ಗಂಗಾಧರ ಪೈ, ರಾಜೇಂದ್ರ ಜಿ.ಟಿ. ಶುಭ ಹಾರೈಸಿದರು. ಪ್ರಮೋದ ಗಾಣಿಗ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

 

Exit mobile version