Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ ಗ್ರಾಪಂ : ಎಸ್. ಜನಾರ್ದನ ಸ್ಪರ್ಧೆ ಇಲ್ಲ.

Janardhan Sಮರವಂತೆ: ಕಳೆದ ಹದಿನೈದು ವರ್ಷಗಳಿಂದ ಮರವಂತೆ ಗ್ರಾಮ ಪಂಚಾಯತ್ ಸದಸ್ಯರಾಗಿ, ಎರಡು ಅವಧಿಗೆ ಅಧ್ಯಕ್ಷರಾಗಿ, ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸಿರುವ ಎಸ್. ಜನಾರ್ದನ ಅಭಿಮಾನಿಗಳ ಬಲವಂತದ ಹೊರತಾಗಿಯೂ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ವಯೋಮಾನ ಬಯಸುವ ವಿಶ್ರಾಂತಿ ಮತ್ತು ಅನ್ಯರಿಗೆ ಅವಕಾಶ ಕಲ್ಪಿಸುವ ಅಗತ್ಯ ಮನಗಂಡು ಅವರು ಈ ನಿರ್ಧಾರಕ್ಕೆ ಬಂದಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎರಡು, ಮೂರು ರಾಜಕೀಯ ಪಕ್ಷಗಳ ಬೆಂಬಲಿತ ಸದಸ್ಯರಿಂದ ಕೂಡಿದ್ದ ಮರವಂತೆ ಗ್ರಾಮ ಪಂಚಾಯತ್ ಹದಿನೈದು ವರ್ಷಗಳುದ್ದಕ್ಕೆ ಆಡಳಿತ ಮತ್ತು ಅಭಿವೃದ್ಧಿ ವಿಚಾರದಲ್ಲಿ  ರಾಜಕೀಯ ರಹಿತವಾಗಿ ಕೆಲಸಮಾಡಿದೆ. ಎಲ್ಲ ಪಕ್ಷಗಳ ಮುಖಂಡರೊಂದಿಗೆ, ಉನ್ನತ ಅಧಿಕಾರಿಗಳೊಂದಿಗೆ ಸಂಬಂಧ ಇರಿಸಿಕೊಂಡು, ಅವರಿಂದ ಅಗತ್ಯವಿರುವ ನೆರವು ಪಡೆದು ಗ್ರಾಮದ ಅಭಿವೃದ್ಧಿಗೆ ಶ್ರಮವಹಿಸಿ ದುಡಿದಿದೆ. ಗ್ರಾಮದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಿ, ಅದರ ಆಕರಗಳನ್ನು ಯೋಜನೆ ತಯಾರಿ ಮತ್ತು ಫಲಾನುಭವಿಗಳ ಆಯ್ಕೆಗೆ ಆಧಾರವಾಗಿರಿಸಿಕೊಂಡಿದೆ. ಸಮುದಾಯದ ವಂತಿಗೆ ಸಂಗ್ರಹಿಸಿ ಸ್ವಚ್ಛಗ್ರಾಮ ಮತ್ತು ಸ್ವಜಲಧಾರಾ ಯೋಜನೆ ಅನುಷ್ಠಾನಿಸಿದೆ. ಗ್ರಾಮದ ಎಲ್ಲ ಮನೆಗಳು ಶೌಚಾಲಯ ಹೊಂದಿವೆ. ಕುಡಿಯುವ ನೀರಿನ ಯೋಜನೆಗಳನ್ನು ಪಡೆದುಕೊಂಡು, ನೀರಿನ ಸಮಸ್ಯೆಗೆ ಗರಿಷ್ಠಸಾಧ್ಯ ಪರಿಹಾರ ಕಂಡುಕೊಂಡಿದೆ. ನೀರುಪೂರೈಕೆಯನ್ನು ಕ್ರಮಬದ್ಧಗೊಳಿಸಿ, ಶುಲ್ಕ ಸಂಗ್ರಹಿಸಿ, ವಿದ್ಯುತ್ ಬಿಲ್ ಪಾವತಿಯಲ್ಲಿ ಕ್ಲಪ್ತತೆ ಕಾಪಾಡಿಕೊಂಡಿದೆ. ಸಾಮಾಜಿಕ ನ್ಯಾಯ ಪಾಲನೆಗೆ ಗರಿಷ್ಠ ಒತ್ತು ನೀಡಿದೆ. ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಹಾರ ಭದ್ರತೆ ವಿಚಾರಗಳಲ್ಲೂ ಮಹತ್ವದ ಪಾತ್ರ ನಿರ್ವಹಿಸಿದೆ. ಜನತಾ ಜೀವವೈವಿಧ್ಯ ದಾಖಲಾತಿ ನಡೆಸಿ, ಪುಸ್ತಕ ರೂಪದಲ್ಲಿ ಪ್ರಕಟಿಸಿದೆ. ತೆರಿಗೆ ಆಕರಣೆ ಮತ್ತು ಸಂಗ್ರಹದಲ್ಲಿ ಕಟ್ಟುನಿಟ್ಟಿನ ಕ್ರಮವಹಿಸಿದೆ. ಬ್ಯಾಂಕ್ ಶಾಖೆಗೆ ಕಟ್ಟಡ ಒದಗಿಸುವ ಮೂಲಕ ಸಂಪನ್ಮೂಲ ಹೆಚ್ಚಿಸಲಾಗಿದೆ. ಪಂಚಾಯಿತಿ ಮೀನುಗಾರಿಕಾ ಹೊರಬಂದರು ಕಾಮಗಾರಿಗೆ ಪರಿಸರ ಇಲಾಖೆ ಒಡ್ಡಿದ್ದ ಆತಂಕವನ್ನು ಸಕಾಲಿಕ ಕ್ರಮದ ಮೂಲಕ ನಿವಾರಿಸಿದೆ. ಹೆದ್ದಾರಿ ರೆಸ್ಟ್ ಏರಿಯಾ ನಿರ್ಮಾಣಕ್ಕೆ ನಡೆದಿದ್ದ ಪರಿಶಿಷ್ಟ ಜಾತಿಯ ಮತ್ತು ಮೀನುಗಾರರ ವಸತಿ ಪ್ರದೇಶದ ಜಮೀನು ಸ್ವಾಧೀನ ಪ್ರಕ್ರಿಯೆಗೆ ತಡೆಯೊಡ್ಡಿದೆ. ದಾನಿ ಡಾ. ಪಿ. ದಯಾನಂದ ಪೈ ಅವರ ನೆರವಿನಿಂದ ಸುಂದರ ಪಂಚಾಯತ್ ಸೌಧ ನಿರ್ಮಿಸಿಕೊಂಡಿದೆ. ಸುವರ್ಣಗ್ರಾಮ ಯೋಜನೆಯ ಮೂಲಕ ಸಭಾಭವನ, ಪುಸ್ತಕಾಲಯ, ಗ್ರಾಮ ಕರಣಿಕರ ಕಚೇರಿ, ಸ್ವಸಹಾಯ ಸಂಘ Pಮ್ಮಟ ನಿರ್ಮಾಣ, ರಸ್ತೆ ಮೇಲ್ಮೈ ಅಭಿವೃದ್ಧಿ ನಡೆಸಿದೆ. ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿದೆ. ಒಂದು ರಸ್ತೆಗೆ ಕೇಂದ್ರೀಕೃತ ಸೋಲಾರ್ ಬೀದಿದೀಪ ಅಳವಡಿಸಿದೆ. ಇವೆಲ್ಲ ವಿಶಿಷ್ಟ ಸಾಧನೆಗಳಿಗೆ ಪ್ರತಿಯಾಗಿ ಅದು ರಾಷ್ಟ್ರೀಯ ನಿರ್ಮಲ ಗ್ರಾಮ ಪುರಸ್ಕಾರ, ರಾಷ್ಟೀಯ ಪಂಚಾಯತ್ ರಾಜ್ ಸಬಲೀಕರಣ ಪುರಸ್ಕಾರ, ರಾಜ್ಯ ಗಾಂಧಿಗ್ರಾಮ ಪ್ರಶಸ್ತಿ, ಜಿಲ್ಲಾ ಮಟ್ಟದ ರಜತ ನೈರ್ಮಲ್ಯ ಪ್ರಶಸ್ತಿ ಮತ್ತು ಒಟ್ಟು ರೂ. ೨೫ ಲಕ್ಷ ನಗದು ಬಹುಮಾನ ಗಳಿಸಿದೆ. ಇವೆಲ್ಲದರ ಹಿಂದೆ ತಾನು ನಿರ್ಣಾಯಕ ಪಾತ್ರ ವಹಿಸಿದ್ದೇನೆ ಎಂದು ತಿಳಿಸಿರುವ ಎಸ್, ಜನಾರ್ದನ ಹದಿನೈದು ವರ್ಷಗಳ ಅವಧಿಯಲ್ಲಿ ಮರವಂತೆ ಗ್ರಾಮ ಪಂಚಾಯತ್ ರಾಜ್ಯ ಮತ್ತು ರಾಷ್ಟಮಟ್ಟದಲ್ಲಿ ಒಂದು ಮಾದರಿ ಪಂಚಾಯತ್ ಎಂದು ಗುರುತಿಸ್ಪಟ್ಟಿದ್ದು ಆ ಸಂತೋಷ, ಸಂತೃಪ್ತಿಯಿಂದ ನಿರ್ಗಮಿಸುತ್ತಿದ್ದೇನೆ. ಅದರ ಸಾಧನೆಗೆ ಕಾರಣರಾದ ಅನ್ಯ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ, ಮೇಲಿನ ಸ್ತರದ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಂಘ, ಸಂಸ್ಥೆಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಮುಂದೆಯೂ ಮರವಂತೆ ಗ್ರಾಮಸಭೆಯ ಸದಸ್ಯನಾಗಿ ಸಕ್ರಿಯನಾಗಿರುವುದರ ಜತೆಗೆ ಅಧಿಕಾರ ವಿಕೇಂದ್ರೀಕರಣ ಮತ್ತು ಗ್ರಾಮೀಣಾಭಿವೃದ್ಧಿ ವಿಚಾರದಲ್ಲಿ ಹಿಂದಿನಂತೆ ದುಡಿಯುವುದಾಗಿ ತಿಳಿಸಿದ್ದಾರೆ.

Exit mobile version