Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಶ್ರೀ ರಾಮನಾಥ ಸುಹಾಸಿನಿ ದೇವರ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಗಂಗೊಳ್ಳಿಯ ಮಡಿ ಲೈಟ್‌ಹೌಸ್ ಸಮೀಪದಲ್ಲಿನ ಶ್ರೀ ರಾಮನಾಥ ಸುಹಾಸಿನಿ ಮತ್ತು ಸಪರಿವಾರ ದೇವರ ನೂತನ ಶಿಲಾಮಯ ದೇವಸ್ಥಾನ ಲೋಕಾರ್ಪಣೆ ಹಾಗೂ ನಂದಿಕೇಶ್ವರ, ಮಹಾಸತಿ, ಯಕ್ಷೀ ಸಪರಿವಾರ ದೇವರ ಸಹಿತ ಶ್ರೀ ರಾಮನಾಥ ಸುಹಾಸಿನಿ ದೇವರ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವ ಸಮಾರಂಭ ಜರುಗಿತು.

ಈ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಹಂಗಾರಕಟ್ಟೆ ಶ್ರೀ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಜ್ಞಾನ ವಿಜ್ಞಾನಕ್ಕೆ ಋಷಿ ಮುನಿಗಳ ಕೊಡುಗೆ ಅಪಾರವಾದುದು. ಆಧ್ಯಾತ್ಮಿಕ ಹಾಗೂ ಮಾನಸಿಕ ಶಾಂತಿಗೆ ಜ್ಞಾನಯಜ್ಞ ಅವಶ್ಯಕ. ದೇವಾಲಯಗಳು ಶ್ರದ್ಧೆ ಮತ್ತು ಭಕ್ತಿಯನ್ನು ಪ್ರಕಟಪಡಿಸುವ ಮಾಧ್ಯಮ. ಮಂದಿರಗಳ ಮಹತ್ವವನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳಬೇಕು. ದೇವಾಲಯಗಳಿಗೆ ನಿತ್ಯ ನಿರಂತರ ಹೋಗುವುದರಿಂದ ಜೀವನದಲ್ಲಿ ಆಧ್ಯಾತ್ಮಿಕ ಚಿಂತೆಗಳು ಬೆಳೆದು ಜೀವನಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ. ದೇವಾಲಯಗಳಲ್ಲಿ ಭಜನೆ ಪ್ರತಿನಿತ್ಯ ನಡೆಯಬೇಕು. ದೇವರ ನಾಮಸ್ಮರಣೆಯಿಂದ ಜೀವನದಲ್ಲಿ ಸಿದ್ಧಿ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.

ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಕೋ.ಶಿವಾನಂದ ಕಾರಂತ, ಗುಡ್ಡಮ್ಮಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವಿಷ್ಣುಮೂರ್ತಿ ಐತಾಳ್, ಶಿಲ್ಪಿ ಸುಬ್ರಹ್ಮಣ್ಯ ಆಚಾರ್ಯ, ಸ್ಥಳೀಯ ಮುಖಂಡ ಶ್ರೀನಿವಾಸ ಖಾರ್ವಿ, ದೇವಸ್ಥಾನದ ಗೌರವಾಧ್ಯಕ್ಷ ತಿಮ್ಮಪ್ಪ ಖಾರ್ವಿ, ದೇವಳದ ಅಧ್ಯಕ್ಷ ಮಡಿ ಅನಂತ ಖಾರ್ವಿ, ಮಡಿ ಸೀತಾರಾಮ ಖಾರ್ವಿ, ಶ್ರೀ ರಾಮನಾಥ ಸುಹಾಸಿನಿ ಸಂಘದ ಅಧ್ಯಕ್ಷೆ ರಾಧಾ ಸುರೇಶ ಖಾರ್ವಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ.ನಾಗರಾಜ ಖಾರ್ವಿ ಕೊಲ್ಲೂರು ಮತ್ತಿತರರು ಉಪಸ್ಥಿತರಿದ್ದರು.

ಗಣಾ ಚಂದ್ರ ಖಾರ್ವಿ ಸ್ವಾಗತಿಸಿದರು. ಕೆ.ಸುರೇಶ ಖಾರ್ವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಘವೇಂದ್ರ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು. ಮಡಿ ವಿಶ್ವನಾಥ ಖಾರ್ವಿ ವಂದಿಸಿದರು.

 

Exit mobile version