Kundapra.com ಕುಂದಾಪ್ರ ಡಾಟ್ ಕಾಂ

ಹೆದ್ದಾರಿ ಸಮಸ್ಯೆ, ಸರಕಾರಿ ಬಸ್ ವ್ಯವಸ್ಥೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಕ್ರಮ: ಶಾಸಕ ಬಿ.ಎಂ ಸುಕುಮಾರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಕ್ಷೇತ್ರಾದ್ಯಂತ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಯಿಂದ ಕೃಷಿಕರು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೆಲವೆಡೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಏಕಾಏಕಿ ನಿಲ್ಲಿಸಿದ್ದರ ಪರಿಣಾಮ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ದೀನದಯಾಳು ಯೋಜನೆಯಡಿ ವಿದ್ಯುತ್ ಸಂಪರ್ಕ ವಿಳಂಬಕ್ಕೆ ಅಧಿಕಾರಿಗಳು ನೀತಿ ಸಂಹಿತೆಯ ನೆಪ ಹೇಳಿದ್ದಾರೆ. ಈ ಎಲ್ಲಾ ಸಮಸ್ಯೆಗಳೂ ಶೀಘ್ರ ಪರಿಹಾರ ಕಂಡುಕೊಳ್ಳು ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರು ಹೇಳಿದರು.

ಬೈಂದೂರು ಕ್ಷೇತ್ರ ವ್ಯಾಕ್ತಿಯಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯಿಂದಾಗಿ ಹಲವೆಡೆ ಕೃಷಿಭೂಮಿಗಳಿಗೆ ಹೆದ್ದಾರಿಯ ಮಣ್ಣು ನುಗ್ಗುವ ಸ್ಥಿತಿ ಇದೆ. ಸೂಕ್ತ ಚರಂಡಿ ವ್ಯವಸ್ಥೆ ಇದ್ದಲ್ಲರಿಂದ ರಸ್ತೆಯ ಮೇಲೆಯೇ ನೀರು ಹರಿಯುತ್ತಿದೆ. ಬೈಂದೂರು ಒತ್ತಿನಣೆಯಲ್ಲಿ ನಡೆಸಲಾಗಿರುವ ಕಾಮಗಾರಿಯ ಮತ್ತೆ ಕುಸಿಯುವ ಭೀತಿಯಲ್ಲಿದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಈಗಾಗಲೇ ಕಾಮಗಾರಿ ನಡೆಸುತ್ತಿರುವ ಕಂಪೆನಿಯ ಅಧಿಕಾರಿಗಳೊಂದಿಗೆ ಮಾತನಾಡಿ ಎಚ್ಚರಿಕೆಯನ್ನೂ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಪ್ರಾಜೆಕ್ಟ್ ಮ್ಯಾನೆಜರ್ ಅವರೊಂದಿಗೂ ಸಮಾಲೋಚನೆ ನಡೆಸಿದ್ದೇನೆ ಎಂದರು.

ಬೈಂದೂರಿನ ಕೆಲವು ಭಾಗಗಳಲ್ಲಿ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಏಕಾಏಕಿ ನಿಲ್ಲಿಸಿರುವುದು ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಮಾತುಕಡೆ ನಡೆಸಿದ್ದು, ಕೂಡಲೇ ಬಸ್ ಸಂಚಾರ ಪುನರಾರಂಭ ಮಾಡಲಿದ್ದರೇ ಬೈಂದೂರಿನಲ್ಲಿ ಇತರೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಮಾಡಲು ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದ್ದೇನೆ. ಅಧಿಕಾರಿಗಳ ಮತ್ತೆ ಬಸ್ ಸಂಚಾರ ಆರಂಭಿಸುವ ಭರವಸೆ ಇದೆ ಎಂದರು.

ಬೈಂದೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಟೆಂಡರ್ ಆಗಿಲ್ಲ:
ಬೈಂದೂರು ಯಡ್ತರೆಯಲ್ಲಿ ನಿರ್ಮಿಸಲು ಉದ್ದೇಶಿಸಿದರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಈವರೆಗೂ ಟೆಂಡರ್ ಪ್ರಕ್ರಿಯೆ ಆಗಿಲ್ಲ. ಚುನಾವಣಾ ಗಿಮಿಕ್‌ಗಾಗಿ ತರಾತುರಿಯಲ್ಲಿ ಶಿಲನ್ಯಾಸ ಮಾಡಿದ್ದಾರೆ. ಇಲಾಖೆಯಿಂದ ಮಂಜೂರಾತಿ ಪಡೆದ ಕೂಡಲೇ ಶಿಲನ್ಯಾಸ ಮಾಡುವ ಅಗತ್ಯವಿರಲಿಲ್ಲ ಎಂದರು.

ಕ್ಷೇತ್ರದಲ್ಲಿ ಲ್ಯಾಂಡ್ ಆರ್ಮಿ ಮೂಲಕ ನಡೆಸಲಾಗಿರುವ ಬಹುಪಾಲು ಕಾಮಗಾರಿಗಳು ಕಳಪೆಯದ್ದಾಗಿದ್ದು, ಇಲಾಖಾ ಅಭಿಯಂತತರಿಗೆ ಈಗಾಗಲೇ ತಿಳಿಸಿದ್ದೇನೆ. ಸರಕಾರದ ದುಡ್ಡನ್ನು ಗುತ್ತಿಗೆದಾರರಿಗೆ ಕೊಳ್ಳೆ ಹೊಡೆಯುವ ಅವಕಾಶವನ್ನು ಮಾಡಿಕೊಟ್ಟಂತಾಗಿತ್ತು. ಆದರೆ ಇನ್ನು ಮುಂದೆ ಕ್ಷೇತ್ರದಲ್ಲಿ ಇಂತಹ ಕಳಪೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದರು.

ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ:
ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಗಣೇಶ್ ಕಾರ್ಣಿಕ್ ಅವರನ್ನು ಬೆಂಬಲಿಸಿ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡವಂತೆ ಅವರು ಪದವೀಧರರು ಹಾಗೂ ಶಿಕ್ಷಕರಿಗೆ ಅವರ ಮನವಿ ಮಾಡಿದರು.

ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಸಲ್ಲದು:
ಚುನಾವಣೆ ಮುಗಿದ ಬಳಿಕವೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಪಪ್ರಚಾರವನ್ನು ಮಾಡಲಾಗಿತ್ತಿದೆ. ನಾಗರಾಜ ಶೆಟ್ಟಿ  ನೈಕಂಬ್ಳಿ ಎಂಬುವರ ತೇಜೋವಧೆ ಮಾಡುವ ಕೆಲಸವನ್ನು ಮಾಡಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ. ಈಗಾಗಲೇ ಇಂತಹ ಕೃತ್ಯದ ವಿರುದ್ಧ ಬೈಂದೂರು ಶಂಕರನಾರಾಯಣ ಹಾಗೂ ಬೆಂಗಳೂರಿನಲ್ಲಿ ದೂರು ದಾಖಲಿಸಲಾಗಿದ್ದು, ತಪ್ಪಿತಸ್ಥರನ್ನು ಬಂಧಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಬಳಿಯೂ ಮಾತನಾಡಿದ್ದೇನೆ ಎಂದರು.

ಶಿಕ್ಷಣ ವ್ಯವಸ್ಥೆ ಉತ್ತಮಗೊಳಿಸಲು ಆದ್ಯತೆ:
ಬೈಂದೂರು ಕ್ಷೇತ್ರಾದ್ಯಂತ ಇರುವ ಸರಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳ ಉನ್ನತಿಕರಣಕ್ಕೆ ಗರಿಷ್ಠ ಪ್ರಯತ್ನ ಮಾಡಲಾಗುತ್ತಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುವುದರ ಜೊತೆಗೆ ಶಾಲಾ ಎಸ್‌ಡಿಎಂಸಿ ಸಮಿತಿಗಳಲ್ಲಿ ಶಿಕ್ಷಣದಲ್ಲಿ ಆಸಕ್ತಿಯಿರುವ ಪೋಷಕರೇ ತೊಡಗಿಕೊಳ್ಳವಂತೆ ಮಾಡಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ. ಬಾಬು ಶೆಟ್ಟಿ, ಶಂಕರ ಪೂಜಾರಿ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಕಾರ್ಯದರ್ಶಿ ದೀಪಕ್‌ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Exit mobile version