Kundapra.com ಕುಂದಾಪ್ರ ಡಾಟ್ ಕಾಂ

ರೋಟರಿ ವಲಯ 1 ರ ಅಸಿಸ್ಟೆಂಟ್ ಗವರ್ನರ್ ಆಗಿ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕುಂದಾಪುರ ತಾಲೂಕಿನ ಗಾವಳಿಯ ಅಲಂಕಾರ್ ಟೈಲ್ಸ್ ಆಂಡ್ ಬ್ರಿಕ್ಸ್ ಇಂಡಸ್ಟ್ರಿಸ್‌ನ ಆಡಳಿತ ನಿರ್ದೇಶಕ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಅವರು 2018-19 ರ ಸಾಲಿನ ರೋಟರಿ ಜಿಲ್ಲೆ 3182 ರ ವಲಯ 1 ರ ಅಸಿಸ್ಟೆಂಟ್ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ.

ವಲಯ ಹಾಗೂ ಜಿಲ್ಲಾ ಮಟ್ಟದಲ್ಲಿ ಇವರ ರೋಟರಿ ಸೇವೆಯನ್ನು ಗಮನಿಸಿ 2018-19 ರ ಸಾಲಿನ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿಯವರು ಈ ಆಯ್ಕೆ ಮಾಡಿದ್ದು, ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿಯವರು 2002 ರಲ್ಲಿ ರೋಟರಿ ಕ್ಲಬ್ ಅಂಪಾರಿನ ಸ್ಥಾಪಕ ಸದಸ್ಯರಾಗಿ ರೋಟರಿ ಚಟುವಟಿಕೆಗೆ ಪಾದಾರ್ಪಣೆ ಮಾಡಿದವರು. 2012-13ರಲ್ಲಿ ರೋಟರಿ ಕುಂದಾಪುರದ ಅಧ್ಯಕ್ಷರಾಗಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಸಂಘಟಿಸಿರುವುದರ ಜೊತೆಗೆ ಕ್ಲಬ್‌ನ ಸದಸ್ಯರ ಸಂಖ್ಯೆಯನ್ನು ನೂರರ ಗಡಿ ದಾಟಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅತ್ಯುತ್ತಮ ಸಂಘಟಕರಾಗಿರುವ ಇವರ ಅಧ್ಯಕ್ಷತೆಯಲ್ಲಿ ರೋಟರಿ ಜಿಲ್ಲೆ 3180 ರಲ್ಲಿ ರೋಟರಿ ಕ್ಲಬ್ ಕುಂದಾಪುರ ದ್ವಿತೀಯ ಅತ್ಯುತ್ತಮ ಕ್ಲಬ್ ಪ್ರಶಸ್ತಿಗೆ ಭಾಜನವಾಗಿತ್ತು.

ಅನಂತರದ ವರ್ಷಗಳಲ್ಲಿ ವಲಯ ಹಾಗೂ ಜಿಲ್ಲೆಯಲ್ಲಿ ರೋಟರಿಯ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದ್ದು, ಹವ್ಯಾಸಿ ಯಕ್ಷಗಾನ ಹಾಗೂ ನಾಟಕ ಕಲಾವಿದರಾಗಿ, ಆಜ್ರಿ – ಕೊಡ್ಲಾಡಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾಗಿ, ಕೊಡ್ಲಾಡಿ – ನೀರಾವಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ, ಪ್ರಸ್ತುತ ನೀರಾವಳಿ ದೇವಸ್ಥಾನದ ಆಡಳಿತ ಸಮಿತಿಯ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 

Exit mobile version