Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಜಿಲ್ಲಾ ಮಟ್ಟದ ನಾಲ್ಕನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಇಲ್ಲಿನ ಭಂಡಾರರ್ಕಾರ‍್ಸ್ ಕಾಲೇಜಿನಲ್ಲಿ ಎನ್.ಸಿ.ಸಿ, ಎನ್.ಎಸ್.ಎಸ್, ಯುತ್ ರೆಡಕ್ರಾಸ್, ನೆಹರು ಯುವ ಕೇಂದ್ರ ಉಡುಪಿ, ಶ್ರೀ ಪತಂಜಲಿ ಯೋಗ ಸಮಿತಿ, ಇಂಡಿಯನ್ ರೆಡಕ್ರಾಸ್ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ನಾಲ್ಕನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ-2018 ಕಾರ‍್ಯಕ್ರಮ ನಡೆಯಿತು.

ಕಾರ‍್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಕುಂದಾಪುರ ತಾಲೂಕು ಉಪವಿಭಾಗಾಧಿಕಾರಿ ಭೂಬಾಲನ್ ಮಾತನಾಡಿ ಭಾರತೀಯ ಯೋಗಕ್ಕೆ ಪ್ರಪಂಚದಾದ್ಯಂತ ತನ್ನದೇ ವೈಶಿಷ್ಟ್ಯತೆ ಮತ್ತು ಮಹತ್ವವಿದೆ. ಎರಡುಸಾವಿರ ವರ್ಷಗಳಿಂದ ಭಾರತದಲ್ಲಿ ಯೋಗ ವಿದ್ಯೆ ಇದೆ. ಬೇರೆಬೇರೆ ದೇಶಗಳಲ್ಲಿ ನಮ್ಮ ದೇಶದ ಈ ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟು ಅದನ್ನು ಕಲಿಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯೋಗದ ಬಗ್ಗೆ ವಿಶೇಷ ಜಾಗೃತಿ ಬಂದಿದೆ. ಇದೊಂದು ಒಳ್ಳೆಯ ಬೆಳವಣಿಗೆಯಾಗಿದೆ. ಆದರೆ ಇದು ಎಲ್ಲರಿಗೂ ಸಿಗುವಂತಾಗಬೇಕು. ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಿಗೆ ತಲುಪಬೇಕು. ಯೋಗಕ್ಕೆ ವಯಸ್ಸಿನ ಅಂತರವಿಲ್ಲ. ಎಲ್ಲಾ ವಯಸ್ಸಿನವರು ಯೋಗ ಮಾಡುವುದರೊಂದಿಗೆ ವಯಕ್ತಿಕವಾಗಿ ತಮ್ಮ ದೈಹಿಕ, ಮಾನಸಿಕ ಆರೋಗ್ಯವನ್ನು ಚೆನ್ನಾಗಿರಿಸಿಕೊಳ್ಳಲು ಸಹಕಾರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗುರುವಂದನಾವಚನವನ್ನು ಸ್ವೀಕರಿಸಿದ ಯೋಗಗುರು ರಘುವೀರ್ ನಗರಕರ್ ಮಾತನಾಡಿ ಯೋಗಕ್ಕೆ ಯಾವುದೇ ಭೇದವಿಲ್ಲ. ಮನುಷ್ಯರ ಆರೋಗ್ಯಕ್ಕೆ ಮನಃಶಾಂತಿಗೆ ಯೋಗ ಅಗತ್ಯವಾಗಿ ಬೇಕು. ಯೋಗವೆಂದರೆ ಶಾರೀರಿಕ, ಮಾನಸಿಕ, ಭೌದ್ಧಿಕ, ಆಧ್ಯಾತ್ಮಿಕತೆ ಸಮ್ಮಿಲನವೇ ಯೋಗ. ಇಂತಹ ಶ್ರೇಷ್ಠ ಯೋಗದ ಮೂಲಕ ನಾವೆಲ್ಲ ಒಂದಾಗೋಣ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರರ್ಕಾರ‍್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶ್ರೀ ಪತಂಜಲಿ ಯೋಗ ಸಮಿತಿಯ ಯೋಗ ಗುರು ವಿವೇಕ ಪೈ, ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ವಿಲ್‌ಫ್ರೆಢ್ ಡಿಸೋಜಾ, ಭಂಡಾರ್ಕಾರ‍್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಎಂ.ಗೊಂಡ ಉಪಸ್ಥಿತರಿದ್ದರು.

ಎನ್.ಸಿ.ಸಿ ಅಧಿಕಾರಿ ಶರಣ್ ಕಾರ್ಯಕ್ರಮ ನಿರ್ವಹಿಸಿದರು. ಯುತ್‌ರೆಡ್‌ಕ್ರಾಸ್‌ನ ಸಂಯೋಜಕರಾದ ಸತ್ಯನಾರಾಯಣ ಸ್ವಾಗತಿಸಿ ವಂದಿಸಿದರು.

Exit mobile version