Kundapra.com ಕುಂದಾಪ್ರ ಡಾಟ್ ಕಾಂ

ನಾಗೂರಿನಲ್ಲಿ ಗಾನಕುಸುಮ ಸಂಗೀತ ಸ್ವರ್ಧೆ – 2018 ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಕುಸುಮ ಫೌಂಡೇಶನ್ ಆಶ್ರಯದಲ್ಲಿ ಹಮ್ಮಿಕೊಂಡ ಗಾನಕುಸುಮ-೨೦೧೮ ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆ ನಾಗೂರು ಬ್ಲಾಸಂ ಸಂಗೀತ ಮತ್ತು ನೃತ್ಯ ಶಾಲೆಯ ಕೆ.ಎ.ಎಸ್. ಆಡಿಟೋರಿಯಂನಲ್ಲಿ ಉದ್ಘಾಟನೆಗೊಂಡಿತು.

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಯಾರದ್ದೋ ಮಾತುಗಳನ್ನು ಕೇಳಿ ಬರುವ ಬದುಕಿನ ಮೌಲ್ಯಕಿಂತಲೂ ಅನುಭವದಿಂದಲೇ ಒದಗುವ ಮೌಲ್ಯಗಳು ಉತ್ತಮವಾಗಿರುತ್ತದೆ. ಸಾಂಸ್ಕೃತಿಕ ಲೋಕದಿಂದ ಇಂತಹ ಅನುಭವ ಮತ್ತು ಜೀವನ ಮೌಲ್ಯಗಳು ಸಿಗುತ್ತವೆ ಎಂದು ಹೇಳಿದರು.

ಕಲೆ ಮತ್ತು ಸಾಹಿತ್ಯದ ಪ್ರೀತಿ ಜೀವನದಲ್ಲಿ ಹೊಸ ಬದುಕನ್ನು ರೂಪಿಸುತ್ತದೆ. ಹಾಗೆಯೇ ಸಂಗೀತ ಇದು ಕೇವಲ ಒಂದೇ ವೇದಿಕೆಗೆ ಸೀಮಿತವಾಗದೇ ಇತರೆಡೆ ಸಿಕ್ಕ ಅವಕಾಶಗಳನ್ನು ಕೂಡಾ ಬಳಸಿಕೊಳ್ಳುವಂತಾಗಬೇಕು. ಸಂಗೀತ ಸಾರಸ್ವತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಾನ್ ದಿಗ್ಗಜರುಗಳು ಮಕ್ಕಳಿಗೆ ಸ್ಪೂರ್ತಿಯಾಗಬೇಕು. ಇದಕ್ಕೆ ಹೆತ್ತವರು ಕೂಡಾ ಪ್ರೇರಣೆ ನೀಡಬೇಕು. ಇಂದಿನ ಮಕ್ಕಳು ಸಾಮಾಜಿಕ ಜಾಲತಾಣಗಳ ಸುಳಿಗೆ ಸಿಕ್ಕಿ ಮಾನಸಿಕವಾಗಿ ಕುಗ್ಗಿ ಹೋಗುತ್ತಿರುವ ವಿಚಾರವನ್ನು ಪಾಲಕರು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದ ಅವರು ಗ್ರಾಮೀಣ ಪರಿಸರದ ಸೂಪ್ತ ಪ್ರತಿಭೆಗಳು ಅವಕಾಶ ವಂಚಿತರಾಗಬಾರದು ಎಂಬ ಧ್ಯೇಯವನ್ನಿಟ್ಟು ಸತತ ನಾಲ್ಕು ವರ್ಷಗಳನ್ನು ಪೂರೈಸಿ ಯಶಸ್ವೀ ಐದನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಮೂಲಕ ಜಿಲ್ಲೆಯ ಸಂಗೀತಾಸಕ್ತರನ್ನು ಒಗ್ಗೂಡಿಸಿ ಬಾಲ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಕುಸುಮಾ ಫೌಂಡೇಶನ್ ಕಾರ್ಯ ಇತರ ಸಂಸ್ಥೆಗಳಿಗೆ ಮಾದರಿ ಎಂದು ಶ್ಲಾಘಿಸಿದರು.

ಸಂಸ್ಥೆಯ ಪ್ರವರ್ತಕ ನಳಿನ್‌ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಗಾನಕುಸುಮ ಗ್ರಾಮೀಣ ಪ್ರತಿಭೆಗಳಿಗೆ ಒದಗಿಸಬಹುದಾಗ ಉತ್ತಮ ಸಂಗೀತ ವೇದಿಕೆಯಾಗಿದ್ದು, ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ವಿಜೇತರಿಗೆ ಕುಸುಮಾಂಜಲಿ-೨೦೧೮ ಕಾರ್ಯಕ್ರಮದಲ್ಲಿ ಪ್ರಸಿದ್ಧ ವೃತ್ತಿಪರ ಕಲಾವಿದರೊಂದಿಗೆ ಹಾಡುವ ಅವಕಾಶ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ತೀರ್ಪುಗಾರರಾಗಿ ಆಗಮಿಸಿದ ಆಕಾಶವಾಣಿ ಕಲಾವಿದರಾದ ಚಂದ್ರಶೇಖರ ಕೆದ್ಲಾಯ ಬ್ರಹ್ಮಾವರ, ಪಲ್ಲವಿ ತುಂಗ, ಭಾಸ್ಕರ ಆಚಾರ್ಯ ಬಸ್ರೂರು, ಸಂಸ್ಥೆಯ ನಿರ್ದೇಶಕ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕ ವಿಶ್ವನಾಥ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಜಿಲ್ಲೆಯಾದ್ಯಂತ ಸುಮಾರು ೭೦ಕ್ಕೂ ಹೆಚ್ಚು ಮಕ್ಕಳು ಆಡಿಷನ್‌ನಲ್ಲಿ ಭಾಗವಹಿಸಿದರು.

 

Exit mobile version