Site icon Kundapra.com ಕುಂದಾಪ್ರ ಡಾಟ್ ಕಾಂ

ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳನ್ನು ಪ್ರಯೋಗಶೀಲರನ್ನಾಗಿಸಬೇಕು: ವಸಂತ ಹೆಗ್ಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಾರಿಕಾಂಬಾ ಯೂತ್ ಕ್ಲಬ್ (ಹವ್ಯಾಸಿ ಕಲಾತಂಡ) ಕಳವಾಡಿ ಬೈಂದೂರು, ಸುದ್ದಿ ಟಿವಿ, ಬೈಂದೂರು ವಲಯ ಅರಣ್ಯ ಇಲಾಖೆ ಇವರ ಜಂಟಿ ಆಶ್ರಯದಲ್ಲಿ ನಿರಂತರ ಗಿಡ ನೆಡುವ ಅಭಿಯಾನ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭ ಮಯ್ಯಾಡಿ ಎಸ್.ಡಿ.ಎಮ್. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ನಿರಂತರ ಗಿಡ ನೆಡುವ ಅಭಿಯಾನವನ್ನು ಬೈಂದೂರು ವಲಯ ಅರಣ್ಯಾಧಿಕಾರಿ ಗೋವಿಂದ ಪಟಗಾರ್ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ, ಪರಿಸರ ದಿನಾಚರಣೆಯಂದು ಮಾತ್ರ ಗಿಡ ನೆಡುವ ಕಾರ್ಯಕ್ರಮ ನಡೆಯುತ್ತದೆ. ಇತ್ತಿಚೀನ ದಿನಗಳಲ್ಲಿ ವನಮಹೋತ್ಸವ ಎನ್ನುವುದು ಫ್ಯಾಶನ್ ಆಗಿದೆ. ಆದರೆ ಕಳವಾಡಿ-ಬೈಂದೂರು ಮಾರಿಕಾಂಬಾ ಯೂತ್ ಕ್ಲಬ್‌ನ ಸದಸ್ಯರು ನಿರಂತವಾಗಿ ಗಿಡ ನೆಡುವ ಕಾರ್ಯ ಬಹಳ ಶ್ಲಾಘನೀಯ ಎಂದರು.

ಕಳವಾಡಿ-ಬೈಂದೂರು ಮಾರಿಕಾಂಬಾ ಯೂತ್ ಕ್ಲಬ್‌ನ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಬೈಂದೂರು ಸಿನಿಯರ್ ಸಿಟಿಜನ್ ಅಸೋಷಿಯೇಶನ್ ಅಧ್ಯಕ್ಷ ವಸಂತ ಹೆಗ್ಡೆ ಮಾತನಾಡಿ, ಪರಿಸರ ಸಂರಕ್ಷಣೆ ಕುರಿತು ಶಾಲೆ-ಕಾಲೇಜು ವಿದ್ಯಾರ್ಥಿಗಳಲ್ಲಿ ನಿರಂತರ ಜಾಗೃತಿ ಮೂಡಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳನ್ನು ಪ್ರಯೋಗಶೀಲರನ್ನಾಗಿಸಬೇಕು. ಮನೆಗೊಂದು ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು. ಯಾವುದೇ ಕಾಯಿಲೆ ಮುಕ್ತ ಸಮಾಜ ನಿರ್ಮಾಣಕ್ಕೆ ಉತ್ತಮ ಪರಿಸರ ಅಗತ್ಯ. ಹೀಗಾಗಿ ಮನೆಗೊಂದು ವನವಿರಬೇಕು, ಸಾಧ್ಯವಾಗದಿದ್ದರೆ ಕನಿಷ್ಠ ಒಂದು ಗಿಡವನ್ನಾದರೂ ಪೋಷಿಸಬೇಕು ಎಂದರು.

ಸುದ್ದಿಯ ಟಿವಿಯ ಜಿಲ್ಲಾ ವರದಿಗಾರ ಸಂದೇಶ್ ಶೆಟ್ಟಿ ಆಜ್ರಿ, ಅಧ್ಯಾಪಕ ಗುರುರಾಜ್ ಶೆಟ್ಟಿ, ಮಯ್ಯಾಡಿ ಎಸ್.ಡಿ.ಎಮ್. ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯ ಹನುಮಂತ ಜಿ., ಉಡುಪಿ ಜಿಲ್ಲಾ ನೆಹರು ಯುವ ಕೇಂದ್ರ ಸಂಯೋಜಕ ಉದಯ್ ಮರಾಠಿ ಉಪಸ್ಥಿತರಿದ್ದರು.

ಬೈಂದೂರು ವಲಯ ಅರಣ್ಯ ಇಲಾಖೆಯ ವತಿಯಿಂದ ೬ನೇ ತರಗತಿಯ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ವಿವಿಧ ಗಿಡಗಳನ್ನು ನೀಡಿದರು. ಹಾಗೇ ಸುದ್ಧಿ ಟಿವಿಯ ಮುಖ್ಯಸ್ಥ ಶಶಿಧರ ಭಟ್ ಇವರು ಕೊಡುಗೆ ನೀಡಿದ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ನೀಡಿದರು.

ಕಳವಾಡಿ-ಬೈಂದೂರು ಮಾರಿಕಾಂಬಾ ಯೂತ್ ಕ್ಲಬ್‌ನ ನಿಕಟಪೂರ್ವಾಧ್ಯಕ್ಷ ಪದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಸ್ವಾಗತಿಸಿದರು, ಗುರುರಾಜ್ ಶೆಟ್ಟಿ ಉಪ್ಪುಂದ ಪ್ರಾಸ್ತಾವಿಕ ಮಾತನಾಡಿದರು, ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು, ಕ್ಲಬ್‌ನ ಕಾರ್ಯದರ್ಶಿ ಸುಬ್ರಹ್ಮಣ್ಯ ಪೂಜಾರಿ ವಂದಿಸಿದ್ದರು.

Exit mobile version