Kundapra.com ಕುಂದಾಪ್ರ ಡಾಟ್ ಕಾಂ

ನಾವು ಬೆಳೆದು ಜಗತ್ತನ್ನು ಬೆಳಗಲು ಜೆಸಿಐ: ಎಎಸ್‌ಎನ್ ಹೆಬ್ಬಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು : ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಪ್ರತಿಭೆ ಇದೆ. ಆದರೆ ಅದರ ವಿಕಾಸಕ್ಕೆ ವೇದಿಕೆ ಬೇಕು. ಜೇಸಿಐ ಅಂತಹ ವೇದಿಕೆ ಎಂದು ಕುಂದಾಪುರ ಜೇಸಿಐ ಸ್ಥಾಪಕಾಧ್ಯಕ್ಷ ಎ. ಎಸ್. ಎನ್. ಹೆಬ್ಬಾರ್ ಹೇಳಿದರು.

ಶನಿವಾರ ಬೈಂದೂರು ರೋಟರಿ ಸಮುದಾಯ ಭವನದಲ್ಲಿ ನಡೆದ ಬೈಂದೂರು ಜೇಸಿಐ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು ಮಾತನಾಡಿದರು.
ಜೇಸಿ ಧ್ಯೇಯವಾಕ್ಯವು ದೇವರಲ್ಲಿ ನಂಬಿಕೆ ಇರಿಸಿಕೊಳ್ಳಬೇಕು ಎನ್ನುತ್ತದೆ. ಆದರೆ ವ್ಯಕ್ತಿಯ ಉದ್ದಾರಕ್ಕೆ ಅದಷ್ಟೇ ಸಾಲದು. ಅದರೊಂದಿಗೆ ಸ್ವಪ್ರಯತ್ನವೂ ಅಗತ್ಯ. ಜೇಸಿ ವ್ಯಕ್ತಿಯ ವಿಕಾಸಕ್ಕೆ ಆದ್ಯತೆ ನೀಡುತ್ತದೆ. ಆ ಮೂಲಕ ಜೇಸಿ ಸದಸ್ಯ ತನ್ನ ಸಾಮಾಜಿಕ ಹೊಣೆ ನಿಭಾಯಿಸುದರ ಜತೆಗೆ ಕೈಗೊಳ್ಳುವ ಉದ್ಯೋಗದಲ್ಲಿ ಯಶಸ್ಸು ಪಡೆಯುವುದೂ ಸಾಧ್ಯವಾಗಬೇಕು ಎನ್ನುವ ಗುರಿ ಹೊಂದಿದೆ ಎಂದು ಅವರು ಹೇಳಿದರು.

ಶಿರೂರು ಜೇಸಿಐ ಪ್ರವರ್ತಿಸಿದ ಬೈಂದೂರು ಸಿಟಿ ಘಟಕವನ್ನು ಉದ್ಘಾಟಿಸಿದ ವಲಯಾಧ್ಯಕ್ಷ ರಾಕೇಶ್ ಕುಂಜೂರ್ ಮಾತನಾಡಿ ಜೇಸಿಐ ವಿಶಾಲ ಸಮುದ್ರ. ಸಮುದ್ರದಲ್ಲಿ ಇರುವ ಮುತ್ತುರತ್ನಗಳು ತೀರದಲ್ಲಿ ನಿಂತು ನೋಡುವವರಿಗೆ ಸಿಗದು. ಅವುಗಳನ್ನು ಪಡೆಯಲು ಸಮುದ್ರದ ಆಳಕ್ಕೆ ಇಳಿಯಬೇಕು. ಜೇಸಿಯಲ್ಲಿ ಹಾಗೆ ತೊಡಗಿಕೊಂಡರೆ ಮಾತ್ರ ಅದು ನೀಡುವ ಫಲಗಳನ್ನು ಪಡೆಯಬಹುದು ಎಂದರು.

ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು ಘಟಕಾಧ್ಯಕ್ಷ ಮಣಿಕಂಠ ದೇವಾಡಿಗ ಮತ್ತು ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಯಶಸ್ಸು ಕೋರಿದರು. ಅತಿಥಿಗಳಾಗಿದ್ದ ಜೇಸಿರೇಟ್ ವಿಭಾಗದ ಮಾಜಿ ಸಂಯೋಜಕಿ ರೋಪಶ್ರೀ ರತ್ನಾಕರ್, ವಲಯ ನಿರ್ದೇಶಕ ಕಾರ್ತಿಕೇಯ ಮಧ್ಯಸ್ಥ, ಮಣಿಪಾಲ ಹಿಲ್ ಸಿಟಿ ಘಟಕದ ಮಾಜಿ ಅಧ್ಯಕ್ಷ ಲಕ್ಷ್ಮೀಕಾಂತ ಬೆಸ್ಕೂರ್ ಶುಭ ಹಾರೈಸಿದರು.

ಶಂಕರ ದೇವಾಡಿಗ ಜೇಸಿ ವಾಣಿ ಪಠಿಸಿದರು. ಶಿರೂರು ಘಟಕಾಧ್ಯಕ್ಷ ಪಾಂಡುರಂಗ ಅಳ್ವೆಗದ್ದೆ ಸ್ವಾಗತಿಸಿದರು. ಬೈಂದೂರು ಘಟಕದ ಕಾರ್ಯದರ್ಶಿ ಎಚ್. ಸುಶಾಂತ್ ವಂದಿಸಿದರು. ಶಿರೂರು ಘಟಕದ ಕಾರ್ಯದರ್ಶಿ ಸುರೇಶ ಮಾಕೋಡಿ, ಜೇಸಿರೇಟ್ ಅಧ್ಯಕ್ಷೆ ವೀರಮ್ಮ, ಜೂನಿಯರ್ ಜೇಸಿ ಅಧ್ಯಕ್ಷ ಆದರ್ಶ ಶೇಟ್, ನಿಕಟಪೂರ್ವ ಅಧ್ಯಕ್ಷ ಅರುಣಕುಮಾರ್, ಬೈಂದೂರು ಜೇಸಿರೇಟ್ ಅಧ್ಯಕ್ಷೆ ಪ್ರಿಯದರ್ಶಿನಿ ಬೆಸ್ಕೂರ್, ಜೂನಿಯರ್ ಜೇಸಿ ಅಧ್ಯಕ್ಷ ಅಖಿಲೇಶ್ ಇದ್ದರು.

 

 

Exit mobile version