Kundapra.com ಕುಂದಾಪ್ರ ಡಾಟ್ ಕಾಂ

ಉನ್ನತ ಜೀವನಧರ್ಮ, ಸರಳ ವ್ಯಾವಹಾರಿಕ ನೀತಿ ಸಾರುವ ವಚನಕ್ಕೆ ವಿಶ್ವ ಸಾಹಿತ್ಯದಲ್ಲಿ ಸ್ಥಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಚನಗಳು ಸಾರುವ ಉನ್ನತ ಜೀವನಧರ್ಮ ಸರಳ ವ್ಯಾವಹಾರಿಕ ನೀತಿಯ ಕಾರಣದಿಂದ ವಿಶ್ವ ಸಾಹಿತ್ಯದಲ್ಲಿ ಸ್ಥಾನ ಪಡೆದಿವೆ. ಭಾರತದ ಎಲ್ಲ ಭಾಷೆಗಳಿಗೆ, ಹಲವು ವಿದೇಶಿ ಭಾಷೆಗಳಿಗೆ ಅನುವಾದಗೊಂಡು ಎಲ್ಲೆಡೆಯ ಪ್ರಜ್ಞಾವಂತರ ಗಮನ ಸೆಳೆದಿವೆ ಎಂದು ಬೈಂದೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯು. ಚಂದ್ರಶೇಖರ ಹೊಳ್ಳ ಹೇಳಿದರು.

ಶರಣ ಸಾಹಿತ್ಯ ಪರಿಷತ್ತು ಮತ್ತು ನಾಗೂರಿನ ಸಂದೀಪನ್ ಶಾಲೆಯ ಕನ್ನಡ ಸಾಹಿತ್ಯ ಸಂಘದ ಜಂಟಿ ಆಶ್ರಯದಲ್ಲಿ ಗುರುವಾರ ನಡೆದ ವಚನ ದಿನಾಚರಣೆಯಲ್ಲಿ ಅವರು ’ವಚನ ಸಾಹಿತ್ಯದಲ್ಲಿ ವಿಶ್ವ ಮೌಲ್ಯಗಳು’ ಕುರಿತು ಉಪನ್ಯಾಸ ನೀಡಿದರು.

ಬಸವಣ್ಣನವರು ಯಜ್ಞಯಾಗಗಳನ್ನು, ಜಾತಿ ವ್ಯವಸ್ಥೆ ಮತ್ತು ಅಂಧಾನುಕರಣೆಯನ್ನು ವಿರೋಧಿಸಿದರು. ಸ್ತ್ರೀಪುರುಷ ಸಮಾನತೆಯನ್ನು ಪ್ರತಿಪಾದಿಸಿದರು. ಕಾಯಕದ ಬದುಕಿಗೆ ಆದ್ಯತೆ ನೀಡಿದರು. ಎಲ್ಲರೂ ಅನುಸರಿಸಬಹುದಾದ ಬದುಕಿನ ಸರಳ ಮಾರ್ಗವನ್ನು ಜನರಿಗೆ ಬೋಧಿಸಿದರು. ಪ್ರಖರ ವೈಚಾರಿಕತೆಯನ್ನು ಮೆರೆದರು. ಇವೆಲ್ಲವೂ ಅವರ, ಅಕ್ಕ ಮಹಾದೇವಿಯ, ಅಲ್ಲಮರ ಮತ್ತು ನೂರಾರು ವಚನಕಾರರ ವಚನಗಳಲ್ಲಿ ಪ್ರಕಟಗೊಂಡಿವೆ. ಎಲ್ಲರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ರಚನೆಯಾದ ವಚನಗಳು ಕನ್ನಡ ಸಾಹಿತ್ಯದ ಪ್ರಮುಖ ಪ್ರಕಾರವಾಗಿ ಗುರುತಿಸಲ್ಪಟ್ಟಿವೆ. ಕನ್ನಡ ಪದ ಸಂಪತ್ತಿಗೆ ವಚನಕಾರರಿಂದ ವಿಶೇಷ ಕೊಡುಗೆ ಸಂದಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಬಿ. ವಿಶ್ವೇಶ್ವರ ಅಡಿಗ ವಚನಗಳಲ್ಲಿ ಅಮೂಲ್ಯ ಸಂಪತ್ತು ಅಡಗಿದೆ. ಅವುಗಳನ್ನು ಓದುವುದರಿಂದ ಜ್ಞಾನ ಮತ್ತು ವೈಚಾರಿಕತೆ ನಮ್ಮದಾಗುತ್ತದೆ. ಸಾಹಿತ್ಯಾಭಿರುಚಿ ವೃದ್ಧಿಸುತ್ತದೆ. ಅನುಸರಿಸುವುದರಿಂದ ಸರಳ ಮತ್ತು ಅರ್ಥಪೂರ್ಣ ಜೀವನಮಾರ್ಗ ನಮ್ಮದಾಗುತ್ತದೆ ಎಂದರು.

ಶಿಕ್ಷಕಿ ಶ್ರೀಲತಾ ಸ್ವಾಗತಿಸಿದರು. ರಶ್ಮಿ ವಂದಿಸಿದರು. ರಾಜೇಶ್ ಸಹಕರಿಸಿದರು. ವಿದ್ಯಾರ್ಥಿನಿ ನಿಸರ್ಗ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ನಡೆಸಿದ್ದ ವಚನ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ, ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ, ಪುಸ್ತಕ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ವಿದ್ಯಾರ್ಥಿಗಳು ವಚನ ಗಾಯನ ಪ್ರಸ್ತುತಪಡಿಸಿದರು. ಪರಿಷತ್ತಿನ ಕಾರ್ಯದರ್ಶಿ ಗಣೇಶಪ್ರಸನ್ನ ಮಯ್ಯ ಇದ್ದರು.

Exit mobile version