Kundapra.com ಕುಂದಾಪ್ರ ಡಾಟ್ ಕಾಂ

ಶ್ರೀದುರ್ಗಾಂಬ ಮೋಟಾರ್ಸ್ ಪಾಲುದಾರ ಸುನಿಲ್ ಚಾತ್ರ ರಸ್ತೆ ಅಪಘಾತದಲ್ಲಿ ಬಲಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಖಾಸಗಿ ಸಾರಿಗೆ ಕ್ಷೇತ್ರದಲ್ಲಿ ಹೆಸರಾಗಿರುವ ಶ್ರೀ ದುರ್ಗಾಂಬ ಸಾರಿಗೆ ಸಂಸ್ಥೆಯ ಪಾಲುದಾರರಲ್ಲಿ ಓರ್ವರಾದ ಸುನಿಲ್ ಚಾತ್ರ (42) ಅವರು ಶುಕ್ರವಾರ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಕಮಲಶಿಲೆ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ಸಚ್ಚಿದಾನಂದ ಚಾತ್ರ ಅವರ ದ್ವಿತೀಯ ಪುತ್ರರಾದ ಇವರು ಬಸ್ಸಿನ ವ್ಯವಹಾರ ನಿಮಿತ್ತ ತಮಿಳುನಾಡಿಗೆ ತೆರಳಿದ್ದು ಬೆಂಗಳೂರಿಗೆ ವಾಪಾಸಾಗುತ್ತಿರುವ ವೇಳೆ ದುರ್ಘಟನೆ ಸಂಭವಿಸಿದೆ.

ಶುಕ್ರವಾರ ಅಪರಾಹ್ನ 3.30ರ ವೇಳೆಗೆ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಪಾರಾಮತಿ ವೆಲ್ಲೂರು ಕ್ರಾಸ್ ಬೈಪಾಸ್ ಬಳಿ ಇವರು ಪಯಣಿಸುತ್ತಿದ್ದ ಪಜೋರೊ ಕಾರಿಗೆ ಅಡ್ಡಬಂದ ಸೈಕಲ್ ಸವಾರರನ್ನು ತಪ್ಪಿಸುವ ಭರದಲ್ಲಿ ನಿಯಂತ್ರಣ ತಪ್ಪಿ ಮಗುಚಿಬಿದ್ದು ತಲೆಗೆ ಗಂಭೀರ ಏಟು ತಗುಲಿ ಸುನಿಲ್ ಸ್ಥಳದಲ್ಲೇ ಮೃತಪಟ್ಟರು. ಚಾಲಕ ಗಂಭೀರ ಗಾಯಗೊಂಡಿದ್ದಾರೆ.

ಸರಳ ಸಜ್ಜನಿಕೆ, ಮುಗ್ಧತೆಯ ಪ್ರತೀಕವಾಗಿದ್ದ ಇವರ ಅಕಾಲಿಕ ಅಗಲುವಿಕೆ ಕುಂದಾಪುರಕ್ಕೆ ಭಾರಿ ಆಘಾತ ನೀಡಿದೆ. 1993-94 ಭಂಡಾರ್‌ಕಾರ್ಸ್ ಕಾಲೇಜಿನ ಪಿಯುಸಿ ವ್ಯಾಟ್ಸ್ ಆ್ಯಪ್ ಗ್ರೂಪ್ ಮೂಲಕ ಸದ್ದಿಲ್ಲದೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಬಸ್ ಆಪರೇಟರ್ಸ್ ಅಸೋಸಿಯೇಶನ್ ಪದಾಧಿಕಾರಿಯಾಗಿದ್ದರು. ಸುನಿಲ್ ಚಾತ್ರ ಅವರಿಗೆ ಪತ್ನಿ, 6 ವರ್ಷದ ಮಗಳು, ತಂದೆ ಕಮಲಶಿಲೆ ದೇವಳದ ಆಡಳಿತ ಮೊಕ್ತೇಸರ, ಶ್ರೀ ದುರ್ಗಾಂಬಾ ಮೋಟಾರ್ಸ್ ಮುಖ್ಯಸ್ಥರೂ ಆಗಿರುವ ಸಚ್ಚಿದಾನಂದ ಚಾತ್ರ, ತಾಯಿ, ಅಣ್ಣ, ತಂಗಿ, ತಮ್ಮ ಇದ್ದಾರೆ.

 

Exit mobile version