Kundapra.com ಕುಂದಾಪ್ರ ಡಾಟ್ ಕಾಂ

ಯಕ್ಷಗಾನ ಜ್ಞಾನಯಜ್ಞ ತಾಳಮದ್ದಲೆ ಸಪ್ತಾಹ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯಕ್ಷಗಾನ ಕಲಾಕ್ಷೇತ್ರದಲ್ಲಿ ತಮ್ಮದೇ ಪರಂಪರೆಯನ್ನು ಹುಟ್ಟುಹಾಕಿ ಇತಿಹಾಸ ನಿರ್ಮಿಸಿದ ಕಲಾವಿದರ ಕುರಿತಾದ ಸಾಮಗ್ರಿ ಸಿಗುತ್ತಿಲ್ಲ. ಅದರಿಂದಾಗಿ ಅವರ ಬಗೆಗೆ ಪುಸ್ತಕ ಪ್ರಕಟಿಸುವುದು ಕಷ್ಟವಾಗಿದೆ’ ಎಂದು ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ. ಹೆಗಡೆ ಹೇಳಿದರು.

ಕಿರಿಮಂಜೇಶ್ವರದ ಧಾರೇಶ್ವರ ಯಕ್ಷ ಬಳಗ ಚಾರಿಟಬಲ್ ಟ್ರಸ್ಟ್ ನಾಗೂರಿನ ಕುಂಜಾಲು ಶ್ರೀ ಶೇಷಗಿರಿ ಕಿಣಿ ಭಾಗವತ ಸ್ಮರಣ ವೇದಿಕೆಯಲ್ಲಿ ಪ್ರಸ್ತುತ ಪಡಿಸುತ್ತಿರುವ ೬ನೆ ವರ್ಷದ ಯಕ್ಷಗಾನ ಜ್ಞಾನಯಜ್ಞ ತಾಳಮದ್ದಲೆ ಸಪ್ತಾಹವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

’ಕುಂಜಾಲು ಶೇಷಗಿರಿ ಕಿಣಿ, ತೆಕ್ಕಟ್ಟೆ ಆನಂದ ಮಾಸ್ತರ್ ಅವರು ಅಂತಹ ಪರಂಪರೆ ಸೃಷ್ಟಿಸಿದವರು. ಅವರ ಬಳಿಕದ ತಲೆಮಾರಿನ ಜನ ಅವರು ಶ್ರೇಷ್ಠ ಕಲಾವಿದರಾಗಿದ್ದರು ಎಂದಷ್ಟೆ ಹೇಳುತ್ತಾರೆ. ಅದಕ್ಕಿಂತ ಹೆಚ್ಚಿನ ವಿವರ ಅವರಿಗೆ ತಿಳಿದಿಲ್ಲ. ಹಾಗಿದ್ದರೂ ಯಾರಾದರೂ ಅಂತಹ ಕಲಾವಿದರ ಕುರಿತು ಸಂಶೋಧನೆ ನಡೆಸಿ ಪುಸ್ತಕ ಪ್ರಕಟಿಸುವುದಾದರೆ ಅಕಾಡೆಮಿ ಅವರಿಗೆ ನೆರವು ನೀಡಲಿದೆ’ ಎಂದು ಹೆಗಡೆ ಹೇಳಿದರು.

ಟ್ರಸ್ಟ್ ಪ್ರವರ್ತಕ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಪ್ರಸ್ತಾವಿಕವಾಗಿ ಮಾತನಾಡಿದರು. ಸಾಲಿಗ್ರಾಮ ಮಕ್ಕಳ ಮೇಳದ ಸಂಸ್ಥಾಪಕ ಎಚ್. ಶ್ರೀಧರ ಹಂದೆ ಶೇಷಗಿರಿ ಕಿಣಿ ಸಂಸ್ಮರಣ ನುಡಿಗಳನ್ನಾಡಿದರು. ಹಿರಿಯ ಮದ್ದಲೆ ವಾದಕ ನಾಗೂರು ಮಹಾಬಲ ಶೇಟ್ ಅವರಿಗೆ ೨೦೧೮ರ ’ಕಲಾತಪಸ್ವಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶೇಷಗಿರಿ ಕಿಣಿ ಕುಟುಂಬದ ಪ್ರತಿನಿಧಿಗಳಾದ ಕುಂಜಾಲು ವೆಂಕಟೇಶ ಕಿಣಿ, ಕುಂಜಾಲು ಸರ್ವೋತ್ತಮ ಕಿಣಿ, ಆನಂದ ಮಾಸ್ತರ್ ಅವರ ಪತ್ನಿ ಟಿ. ಸುನಂದಾ ಶ್ಯಾನುಭಾಗ್ ಇದ್ದರು. ಗೋವಿಂದ ಮಟ್ನಕಟ್ಟೆ ಸ್ವಾಗತಿಸಿ ನಿರ್ವಹಣೆ ಮಾಡಿದರು. ಸಭೆಯ ಬಳಿಕ ’ಶ್ರೀಕೃಷ್ಣ ಸಂಧಾನ’ ಪ್ರಸಂಗದ ತಾಳಮದ್ದಲೆ ನಡೆಯಿತು.

ಯಕ್ಷಗಾನ ಪ್ರಶಸ್ತಿ ಪ್ರದಾನ ಸಮಾರಂಭವು ಶ್ರೇಷ್ಠ ಕಲಾವಿದರನ್ನು ಗೌರವಿಸುವ ಕಾರ್ಯಕ್ರಮ. ಆದರೆ ಅದಕ್ಕೆ ಯಕ್ಷಗಾನದ ಅಭಿಮಾನಿಗಳು ಬರುವುದಿಲ್ಲ. ಈ ಬಾರಿಯ ಪ್ರಸಸ್ತಿ ಪ್ರದಾನ ಉಡುಪಿಯಲ್ಲಿ ನಡೆಯುವುದು. ಇಲ್ಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು’ ಎಂದು ಪ್ರೊ. ಎಂ. ಎ. ಹೆಗಡೆ ವಿನಂತಿಸಿದರು.

Exit mobile version