Kundapra.com ಕುಂದಾಪ್ರ ಡಾಟ್ ಕಾಂ

ಶಿವಮೊಗ್ಗ ಲೋಕಸಭಾ ಉಪ ಚುನಾವಣೆ: ಇಂದಿನಿಂದಲೇ ನೀತಿ ಸಂಹಿತೆ ಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ, ಅ.07: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ತೆರವಾದ ಸ್ಥಾನಕ್ಕೆ ನಡೆಯಲಿರುವ ಉಪ ಚುನಾವಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಗೂ ಅನ್ವಹಿಸುವಂತೆ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ.  ಬೈಂದೂರು ವಿಧಾನಸಭಾ ಕ್ಷೇತ್ರವನ್ನೊಳಗೊಂಡಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನವೆಂಬರ್ 3ರಂದು ಮತದಾನ ನಡೆಯಲಿದೆ.

ಬೈಂದೂರು ತಹಶೀಲ್ದಾರರ ಕಛೇರಿಯಲ್ಲಿ ಭಾನುವಾರ ಸಂಜೆ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಟಿ. ಭೂಬಾಲನ್ ಅವರು ಈ ಬಗ್ಗೆ ಮಾಹಿತಿ ನೀಡಿದರು.

ಅ.9 ಮಂಗಳವಾರ ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಅ.16ರ ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತದೆ. ಅ.17ರಂದು ನಾಮಪತ್ರ ಪರಿಶೀಲನೆ, ಅ.20ರಂದು ನಾಮಪತ್ರ ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, ನ.03ರಂದು ಮತದಾನ ನಡೆಯಲಿದೆ. ನ.06ರಂದು ಮತ ಎಣಿಕೆ, ನ.11ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಅಲ್ಲಿಯ ತನಕ ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ಉಡುಪಿ ಜಿಲ್ಲೆಯಲ್ಲಿಯೂ ನೀತಿಸಂಹಿತೆ ಜಾರಿಯಲ್ಲಿರಲಿದೆ.

ಮತದಾರ ಪಟ್ಟಿ ಪರಿಷ್ಕರಣೆಗೆ 2 ದಿನ ಅವಕಾಶ:
ದಿ. 01.01.2018 ಅನ್ವಯಿಸುವಂತೆ ಮತದಾನ ಮಾಡಲು ಅರ್ಹರಿರುವ ಮತದಾರರ ಪಟ್ಟಿ ಪರಿಷ್ಕರಿಸಲು ಅ.09ರ ಮಧ್ಯಾಹ್ನದ ತನಕ ಅವಕಾಶ ಕಲ್ಪಿಸಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ಮತದಾರರು ನೇರವಾಗಿ ಬೈಂದೂರು ತಹಶೀಲ್ದಾರರ ಕಛೇರಿಗೆ ತೆರಳಿ ಹೆಸರು ಸೇರ್ಪಡೆ, ಬದಲಾವಣೆ, ಪ್ರಕ್ರಿಯೆಯನ್ನು ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ.

ನೀತಿ ಸಂಹಿತೆ ಜಾರಿ:
ಅ.09ರಿಂದಲೇ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪ್ರಸ್ತುತ ಹಾಕಲಾಗಿರುವ ಅನಧಿಕೃತ ಹಾಗೂ ರಾಜಕೀಯ ನಾಯಕರುಗಳ ಹೆಸರಿರುವ ಕಟೌಟ್ ಮತ್ತು ಸರಕಾರಿ ಕಾರ್ಯಕ್ರಮಗಳ ಜಾಹೀರಾತಿರುವ ಕಟೌಟುಗಳನ್ನು ತೆಗೆಸಲು ಎ.ಸಿ ಅವರು ತಿಳಿಸಿದ್ದಾರೆ. ನವರಾತ್ರಿ ಉತ್ಸವದ ಫ್ಲೆಕ್ಸ್ಗಳಲ್ಲಿ ರಾಜಕೀಯ ನಾಯಕರ ಹೆಸರು ಇಲ್ಲಿದ್ದರೆ ಅವುಗಳನ್ನು ಸ್ಥಳೀಯ ಗ್ರಾಮ ಪಂಚಾಯತ್ ಅನುಮತಿಯೊಂದಿಗೆ ಹಾಕಲು ಅವಕಾಶವಿದೆ. ಕುಂದಾಪ್ರ ಡಾಟ್ ಕಾಂ.

ಸಹಾಯಕ ಚುನಾವಣಾ ಅಧಿಕಾರಿಯಾಗಿ ಶ್ರೀನಿವಾಸ್ ಅವರು ಕಾರ್ಯನಿರ್ವಹಿಸಲಿದ್ದು, ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ಸ್ವಾಡ್ಗಳನ್ನು ನೇಮಕ ಮಾಡಲಾಗಿದೆ. ರಾಜಕೀಯ ಪಕ್ಷಗಳು ವಿವಿಧ ಅನುಮತಿಗಾಗಿ ಆನ್ಲೈನ್ ಮೂಲಕ ಅನುಮತಿ ಪಡೆದುಕೊಳ್ಳಬೇಕಿದೆ. ಸಭೆ ನಡೆಸಲು ಸುವಿಧಾ ವೆಬ್ಸೈಟ್ ಮೂಲಕ, ದೂರು, ಮಾಹಿತಿ ನೀಡಲು ಸಮಾಧಾನ್ ವೆಬ್ಸೈಟ್ ಮೂಲಕ ಹಾಗೂ ವಾಹನ ಅನುಮತಿ ಪಡೆಯಲು ಸುಗಮ ವೆಬ್ಸೈಟ್ ಮೂಲಕ ಅನುಮತಿ ಪಡೆದುಕೊಳ್ಳಬೇಕಿದೆ. ಕುಂದಾಪ್ರ ಡಾಟ್ ಕಾಂ.

ಚುನಾವಣಾ ಸಂಬಂಧಿ ದೂರುಗಳ ಸ್ವೀಕಾರಕ್ಕಾಗಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕಂಪ್ಲೆಂಟ್ ಮಾನಿಟರಿಂಗ್ ಸೆಲ್ ತೆರೆಯಲಾಗಿದ್ದು 08202574920ಗೆ ಅಥವಾ ಬೈಂದೂರು ತಾಲೂಕು ಕಛೇರಿ 08254251657 ಸಂಖ್ಯೆಗೆ ಕರೆಮಾಡಬಹುದು ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬೈಂದೂರು ತಹಶೀಲ್ದಾರ್ ಕಿರಣ ಗೌರಯ್ಯ ಅವರಿದ್ದರು. /ಕುಂದಾಪ್ರ ಡಾಟ್ ಕಾಂ/

Exit mobile version