ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬುಡಕಟ್ಟು ಸಮುದಾಯಕ್ಕೆ ಸೇರಿದ ಕೊರಗ ಮಕ್ಕಳಲ್ಲಿ ಅಭಿಜಾತ ಪ್ರತಿಭೆ ಇದೆ. ಬಿಲ್ಲುವಿದ್ಯೆಯಲ್ಲಿ ಅವರು ತೋರಿದ ಪರಿಶ್ರಮ ಇದಕ್ಕೆ ನಿದರ್ಶನ. ಅವರು ಪಡೆದ ಶಿಕ್ಷಣ ಸಂಬಂಧಿತ ಚಟುವಟಿಕೆಗಳನ್ನು ಕೈಬಿಡದೆ ಮುಂದುವರಿಸಿದರೆ ಆ ಕೌಶಲ ವೃದ್ಧಿಸುತ್ತದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.
ಕುಂಭಾಶಿಯ ಡಾ. ಬಿ. ಆರ್. ಅಂಬೇಡ್ಕರ್ ನಗರದ ’ಮಕ್ಕಳಮನೆ’ಯಲ್ಲಿ ನಡೆದ ಕೊರಗ ಮಕ್ಕಳ ಬಿಲ್ಲುವಿದ್ಯೆ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ಕುಂಭಾಶಿಯ ಕೊರಗರ ’ಮಕ್ಕಳ ಮನೆ’ಯಲ್ಲಿ ವಿಶೇಷ ಅನುಭವ ನೀಡುವ ವಾತಾವರಣ ಇದೆ. ಈ ಕಾರ್ಯಕ್ರಮ ಒಂದು ಕನಸಿನ ಲೋಕದಲ್ಲಿ ನಡೆದಿದೆ. ಇಲ್ಲಿ ಕ್ರಿಯಾಶೀಲತೆ ಇದೆ. ಇದು ಸರ್ಕಾರಿ ಇಲಾಖೆಗಳ ಕಾರ್ಯಕ್ರಮಗಳಲ್ಲಿ ಅಲಭ್ಯ. ಅನ್ಯ ಸಮುದಾಯದ ಮಕ್ಕಳಿಗೆ ಇಂತಹ ಅನುಭವ ಸಿಗದಿರುವ ಬಗ್ಗೆ ಬೇಸರವಿದೆ. ಇಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಬರುವೆನೆಂದ ಜಿಲ್ಲಾಧಿಕಾರಿ, ಕೊರಗ ಸಮುದಾಯದ ಸದಸ್ಯರು ಸರ್ಕಾರದ ಸೌಲಭ್ಯಗಳು ಸಿಕ್ಕಿಲ್ಲ ಎಂದು ದೂರಿದ್ದಿಲ್ಲ. ಅವರು ಮುಂದೆಬಂದು ತಮ್ಮ ಅಗತ್ಯಗಳ ಬಗೆಗೆ ಬೇಡಿಕೆ ಮಂಡಿಸಬೇಕು. ಅವರ ಕಲ್ಯಾಣ ಕಾರ್ಯಕ್ರಮಗಳಿಗೆ ಯಾವತ್ತೂ ಹಣದ ಕೊರತೆ ಆಗದು. ಅವರ ನೈಜ ಅಗತ್ಯಗಳನ್ನು ಖಂಡಿತ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ವನವಾಸಿ ಕಲ್ಯಾಣದ ಕಾರ್ಯದರ್ಶಿ ಶಾಂತಾರಾಮ ಸಿದ್ಧಿ ಸಂಸ್ಥೆಯ ವಿವಿಧ ಚಟುವಟಿಕೆಗಳನ್ನು ವಿವರಿಸಿದರು. ರಾಷ್ಟ್ರೀಯ ಬಿಲ್ವಿದ್ಯೆ ತರಬೇತಿದಾರ ಪ್ರಬೋದ್ನಂದ, ತರಬೇತಿದಾರ ಬೊಮ್ಮು ಪಾಟೀಲ್, ಮಕ್ಕಳಮನೆಯ ಗೌರವ ಶಿಕ್ಷಕ ಅನಂತ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಕುಂಭಾಶಿ ರವಿರಾಜ ಉಪಾಧ್ಯಾಯ, ಮರವಂತೆ ಕೊರಗ ತನಿಯ ಕಲಾವೇದಿಕೆಯ ಅಧ್ಯಕ್ಷ ಶೇಖರ ಮರವಂತೆ, ಕುಂದಾಪುರದ ಪ್ಲೆಸೆಂಟ್ ಉದ್ಯಮದ ಮಾಲೀಕ ಅಬ್ದುಲ್ ಬಶೀರ್, ಮರವಂತೆ ಗ್ರಾಪಂ ಮಾಜಿ ಅಧ್ಯಕ್ಷ ಎಸ್. ಜನಾರ್ದನ ಶುಭ ಹಾರೈಸಿದರು. ವಿದ್ಯಾರ್ಥಿಗಳಾದ ಸಾವಿತ್ರಿ, ಕೃಷ್ಣ, ಭರತ್, ಸುಪರ್ಣಾ, ಸ್ನೇಹಾ ಶಿಬಿರದ ಅನುಭವ ವಿವರಿಸಿದರು. ಸುಷ್ಮಿತಾ ಸ್ವಾಗತಿಸಿದರು. ಗಣೇಶ್ ಬಾರ್ಕೂರು ವಂದಿಸಿದರು. ನಳಿನಿ ನಿರೂಪಿಸಿದರು. ತಾಲೂಕು ಕೊರಗ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ವಿ. ಗಣೇಶ ಇದ್ದರು.
ಅ.೭ರಿಂದ ೧೩ರ ವರೆಗೆ ನಡೆದ ಸನಿವಾಸ ತರಬೇತಿ ಶಿಬಿರದಲ್ಲಿ ೧೮ ಬಾಲಕರು, ೧೪ ಬಾಲಕಿಯರು ಭಾಗವಹಿಸಿದ್ದರು. ಪಶ್ಚಿಮ ಬಂಗಾಳದ ಸಿಲಿಗುರಿಯ ವನವಾಸಿ ಕಲ್ಯಾಣದ ರಾಷ್ಟ್ರೀಯ ಬಿಲ್ವಿದ್ಯೆ ತರಬೇತಿದಾರ ಪ್ರಬೋಧ್ ನಂದ, ಸಹಾಯಕ ತರಬೇತಿದಾರರಾದ ಕುಮಟಾದ ಅಮಿತ್ ಗೌಡ, ಅಂಕೋಲೆಯ ಕುಮಾರ್ ತರಬೇತಿ ನೀಡಿದ್ದರು. ತರಬೇತಿ ಅಂತ್ಯದಲ್ಲಿ ನಡೆದ ಸ್ಪರ್ಧೆಯಲ್ಲಿ ತೇರ್ಗಡೆಯಾಗಿ, ಚಾಮರಾಜನಗರದಲ್ಲಿ ನಡೆಯುವ ರಾಜ್ಯ ಮಟ್ಟದ ಬಿಲ್ವಿದ್ಯೆ ಸ್ಪರ್ಧೆಯಲ್ಲಿ ಭಾಗವಹಿಸುವ ಸಬ್ ಜೂನಿಯರ್ ವಿಭಾಗದ ಐಶ್ವರ್ಯಾ, ಸುಮನಾ, ಸುಜನ್ಯಾ, ಸುಪ್ರೀತಾ, ಕೃಷ್ಣ, ರೋಶನ್, ವಿಶು, ಸುದೀಪ್ ಮತ್ತು ಜೂನಿಯರ್ ವಿಭಾಗದ ಸುಪರ್ಣಾ, ಸಾವಿತ್ರಿ, ನಳಿನಿ, ಸುಮನಾ, ಭರತ್, ಅಭಿಲಾಷ್ ಅವರಿಗೆ ಬಹುಮಾನ ವಿತರಿಸಲಾಯಿತು.
