Kundapra.com ಕುಂದಾಪ್ರ ಡಾಟ್ ಕಾಂ

ತಪಸ್ಸಿನ ಶಕ್ತಿಯಿಂದ ಸಮಾನತೆಯನ್ನು ಹರಡಿದ ಸಾತ್ವಿಕ ಸಂತ ಶಿಶುನಾಳ ಶರೀಫ

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: “ಮಾನವ ಧರ್ಮ ಶ್ರೇಷ್ಠ ಧರ್ಮ ಎಂಬ ಪರಿಕಲ್ಪನೆಯ ಮೂಲಕ ಧರ್ಮಗಳ ನಡುವೆ ಸಂಸ್ಕೃತಿಯ ಸಮಾನತೆಯನ್ನು ಪ್ರತಿಪಾದಿಸಿದ `ಗೋವಿಂದ ಭಟ್ಟ- ಶಿಶುನಾಳ ಶರೀಫ’ ಎಂಬ ಗುರುಶಿಷ್ಯರು ವಿಶ್ವಕ್ಕೇ ಮಾದರಿಯುತ ಜೀವನವನ್ನು ತೋರಿಸಿಕೊಟ್ಟರು”ಎಂದು ನಾಡೋಜ ಡಾ.ಮಹೇಶ್ ಜೋಶಿ ಹೇಳಿದರು.

ಆಳ್ವಾಸ್ ನುಡಿಸಿರಿಯ ಭಾಗವಾಗಿ ರತ್ನಾಕರವರ್ಣಿ ವೇದಿಕೆಯಲ್ಲಿ ಆಯೋಜಿಸಲಾಗಿದ್ದ `ಸಂತ ಶಿಶುನಾಳ ಶರೀಫ- ದ್ವಿಶತಮಾನದ ನಮನ’ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಈಶ್ವರ ಅಲ್ಲಾ ನೀನೇ ಎಲ್ಲಾ’ ಎನ್ನುವಂತ ತತ್ವನುಡಿಗಳ ಮೂಲಕ ಜನಸಾಮಾನ್ಯರಿಗೆ ಲಾವಣಿ ಹಾಕಿ ನೀತಿ ಬೋಧಿಸಿದ ಶರೀಫರು ತನ್ನ ಗುರುಗಳಾದ ಗೋವಿಂದ ಭಟ್ಟರಲ್ಲಿ ದೇವರನ್ನು ಕಂಡರು. ಅವರಿಬ್ಬರ ಅವಿನಾಭಾವ ಸಂಬಂಧವು ಜಾತಿ,ಧರ್ಮಗಳ ನಡುವಿನ ಸಮೈಕ್ಯತೆಯನ್ನು ಸಾರುವಂತದ್ದು ಎಂದರು.

ಗುರುಗಳಾದ ಕಳಸ ಗೊವಿಂದ ಭಟ್ಟರು ಅವರ ಜೀವನದ ಮೇಲೆ ಅದೆಷ್ಟು ಪ್ರಭಾವ ಬೀರಿದ್ದರು ಎನ್ನುವುದಕ್ಕೆ “ಕುರಾನ್ ಮತ್ತು ಪುರಾಣವನ್ನು ನನ್ನ ಹೆಗಲಮೇಲಿಟ್ಟರೆ ಶರಣ ಸಂಸ್ಕೃತಿಯನ್ನು ತಲೆ ಮೇಲೆ ಹೊರುವೆ”ನೆಂದ ಶರೀಫರ ಮಾತುಗಳೇ ಸಾಕ್ಷಿಯಾಗಿವೆ ಎಂದರು.

ವೇದಿಕೆಯಲ್ಲಿ ನುಡಿಸಿರಿಯ ಸರ್ವಾಧ್ಯಕ್ಷತೆಯನ್ನು ವಹಿಸಿಕೊಂಡಿರುವ ಡಾ. ಮಲ್ಲಿಕಾ ಎಸ್.ಘಂಟಿ ರವರು ಉಪಸ್ಥಿತರಿದ್ದರು.

Exit mobile version