Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಎಸೈ ಜಿ.ಪಂ ಸದಸ್ಯನ ನಿಂದನೆ ಆರೋಪ: ಠಾಣೆಯ ಮುಂದೆ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಪ್ರಕರಣವೊಂದರ ಇತ್ಯರ್ಥಕ್ಕಾಗಿ ಬೈಂದೂರು ಪೋಲಿಸ್ ಠಾಣೆಗೆ ತೆರಳಿದ್ದ ಶಿರೂರು ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟವಾಡಿ ಅವರನ್ನು ಠಾಣಾಧಿಕಾರಿ ಬಿ.ಎನ್. ತಿಮ್ಮೇಶ್ ಅವರು ಸಾರ್ವಜನಿಕವಾಗಿಯೇ ನಿಂದಿಸಿ ತಲ್ಲಾಟ ನಡೆಸಿದ್ದಾರೆ ಎಂದು ಆರೋಪಿಸಿ, ಘಟನೆಯನ್ನು ಖಂಡಿಸಿ ಬೈಂದೂರು ಪೋಲಿಸ್ ಠಾಣೆಯ ಎದುರು ಬೈಂದೂರು ಬಿಜೆಪಿ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ ಬೈಂದೂರು ಠಾಣಾಧಿಕಾರಿ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಚಕಾರವೆತ್ತುತ್ತಿಲ್ಲ. ಮಟ್ಕ ದಂಧೆಗೆ ಕಡಿವಾಣ ಹಾಕುವಂತೆ ಸೂಚಿಸಿದ್ದರೂ ಅಕ್ರಮ ವ್ಯವಹಾರಗಳಿಗೆ ಹಿಂಬಾಗಿಲಿನಿಂದ ಬೆಂಬಲಿಸುತ್ತಿದ್ದಾರೆ. ಜನರ ಸಮಸ್ಯೆಯನ್ನಿಟ್ಟು ಕೊಂಡುಠಾಣೆಗೆ ಬಂದ ಜಿಲ್ಲಾ ಪಂಚಾಯತ್ ಸದಸ್ಯರ ಮೇಲೆ ಅಧಿಕಾರದ ದರ್ಪ ತೋರುವುದು ತಕ್ಕುದಲ್ಲ. ಪೊಲೀಸ್ ಠಾಣೆಯಲ್ಲಿ ಬ್ರಿಟಿಷರಕಾಲದ ವ್ಯವಸ್ಥೆ ಇನ್ನೂ ಮುಂದುವರಿಸಿಕೊಂಡು ಹೋಗುತ್ತಿರುವುದು ವಿಷಾದನೀಯ. ಠಾಣಾಧಿಕಾರಿಯ ಮೇಲೆ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕುಂದಾಪುರ ಡಿವೈಎಸ್ಪಿ ಬಿ. ಪಿ. ದಿನೇಶ್ ಕುಮಾರ್ ಮಾತನಾಡಿ ಇಲಾಖೆಯಲ್ಲಿ ಸಂದರ್ಭ ಅನುಸಾರ ಅಧಿಕಾರಿಗಳು ಗಂಭೀರವಾಗಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಆದರೆ ಜನಪ್ರತಿನಿಧಿಯೋರ್ವರನ್ನು ನಿಂದಿಸಿರುವ ಬಗ್ಗೆ ಘಟನೆಯ ಸಂಪೂರ್ಣ ಮಾಹಿತಿಯನ್ನು ಎಸ್ಪಿ ಅವರಿಗೆ ತಿಳಿಸಿ ಅವರ ನಿರ್ದೇಶನದಂತೆ ಮುಂದುವರಿಯಲಾಗುವುದು. ಪ್ರಕರಣ ಸಂಬಂಧ ಮನವಿ, ದೂರು ನೀಡಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದು ಎಂದರು.

ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ಅವರನ್ನು ಕೂಡಲೇ ಅಮನಾತು ಮಾಡಿ ಇಲ್ಲವೇ ವರ್ಗಾವಣೆಗೊಳಿಸಿ ಎಂದು ಸಾರ್ವಜನಿಕರು ಪಟ್ಟು ಹಿಡಿದರು. ಸದ್ಯಕ್ಕೆದೂರು ಸ್ವೀಕರಿಸಿದ್ದು, ಮುಂದಿನ ದಿನದಲ್ಲಿ ಏನಾಗಲಿದೆ ಕಾದು ನೋಡಬೇಕಿದೆ. ಈ ಮಧ್ಯೆ ಠಾಣಾಧಿಕಾರಿಯನ್ನು ನಾಲ್ಕು ದಿನದ ಮಟ್ಟಿಗೆ ಕಡ್ಡಾಯ ರಜೆಯಲ್ಲಿ ಕಳುಹಿಸಲಾಗಿದೆ.

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಸುರೇಶ್ ಬಟವಾಡಿ, ಬಾಬು ಶೆಟ್ಟಿ ತಗ್ಗರ್ಸೆ, ತಾ.ಪಂ. ಸದಸ್ಯರುಗಳಾದ ಪುಷ್ಪರಾಜ ಶೆಟ್ಟಿ ಉಮೇಶ್ ಶೆಟ್ಟಿ ಕಲ್ಗದ್ದೆ, ಕರುಣ ಪೂಜಾರಿ, ಬೈಂದೂರು ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಕಾರ್ಯದರ್ಶಿಗಳಾದ ದೀಪಕ್‌ಕುಮಾರ್ ಶೆಟ್ಟಿ ಬಾಲಚಂದ್ರ ಭಟ್, ಜಯಾನಂದ ಹೋಬಳಿದಾರ್, ಸದಾಶಿವ ಪಡುವರಿ ಮೊದಲಾದವರು ಇದ್ದರು.

Exit mobile version